ಪುಟ:Kannadigara Karma Kathe.pdf/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೪

ಕನ್ನಡಿಗರ ಕರ್ಮಕಥೆ

ಇದನ್ನೆಲ್ಲ ಮಾಡಿದೆನು. ಇನ್ನು ಈ ಮಂಗಳ ಭೂಮಿಯಲ್ಲಿ ನಮ್ಮಿಬ್ಬರ ಲಗ್ನವಾಗಲಿ, ನೋಡು, ನಮ್ಮ ಲಗ್ನದ ಸಮಾರಂಭವನ್ನು ನೋಡಿ ಸಂತೋಷಪಟ್ಟು ನಮ್ಮನ್ನು ಆಶೀರ್ವದಿಸುವದಕ್ಕಾಗಿ ನನ್ನ ತಾಯಿ-ತಂದೆಗಳಿಬ್ಬರು ಪುಷ್ಕರಣಿಯ ಮೇಲೆ ಹ್ಯಾಗೆ ಬಂದು ಕುಳಿತುಕೊಂಡಿದ್ದಾರೆ ! ಎಂದು ನುಡಿದವನೇ ಅರ್ಧ ಸತ್ತಂತೆ ಅಗಿದ್ದ ನೂರಜಹಾನಳನ್ನು ಎತ್ತಿಕೊಂಡು ಆ ರಾಕ್ಷಸ-ಸದೃಶನಾದ ರಣಮಸ್ತು ಪುಷ್ಕರಣಿಯಲ್ಲಿ ಹಾರಿಕೊಂಡನು. ಅಂದಿನ ಕಗ್ಗತ್ತಲೆಯ ರಾತ್ರಿಯಲ್ಲಿ ಆತನು ಹಾರಿಕೊಂಡ ಶಬ್ದವು ಪುಷ್ಕರಣೆಯಲ್ಲಿ ಪ್ರತಿಧ್ವನಿತವಾಯಿತು.

ಇತ್ತ ಹಿಂದೂ ದಂಡಾಳುಗಳು ರಾಮರಾಜನ ಶಿರಚ್ಛೇದವಾದದ್ದನ್ನು ಕೇಳಿ ದಿಕ್ಕುದಿಕ್ಕಿಗೆ ಓಡಹತ್ತಿರು. ಆಗ ಮುಸಲ್ಮಾನರು ಮಾಡಿದ ಕೊಲೆಯನ್ನು ವರ್ಣಿಸಲಸಾಧ್ಯವು. ಇಷ್ಟು ಭಯಂಕರ ರೀತಿಯಿಂದ ಹಿಂದೂ ಸೈನ್ಯದ ನಾಶಮಾಡುವ ಪ್ರಸಂಗ ಬಂದೀತೆಂದು ಮುಸಲ್ಮಾನರು ತಿಳಿದಿದ್ದಿಲ್ಲ. ಇಂಥ ಅನರ್ಥಕಾರಕವಾದ ಅಪಜಯಕ್ಕೆ ತಾವು ಗುರಿಯಾದೇವೆಂದು ಹಿಂದೂ ಸೈನಿಕರೂ ತಿಳಿದಿದ್ದಿಲ್ಲ. ಮುಸಲ್ಮಾನರ ಪರಾಭವವಾಗಿ ಬೇಗನೆ ಅವರು ತಮ್ಮ ಮಾಂಡಲಿಕರಾಗಿ ವಿಜಯನಗರದ ಸಾಮ್ರಾಜ್ಯವು ಕೃಷ್ಣೆಯ ಆಚೆಗಷ್ಟೇ ಅಲ್ಲ. ಉತ್ತರಹಿಂದುಸ್ತಾನದಲ್ಲಿಯೂ ಪರಸರಿಸಿ, ಮೊಗಲರು ಸಹ ತಮ್ಮ ಮಾಂಡಲಿಕರಾಗುವರೆಂಬ ಸುಖಕರ ಕಲ್ಪನೆಯಿಂದ ವಿಜಯನಗರ ಜನರ ಮಸ್ತಕಗಳು ತುಂಬಿಹೋಗಿದ್ದವು. ಆದರೆ ಒಂದು ದುರ್ದೈವವು ಆ ಕಲ್ಪನೆಗಳನ್ನೆಲ್ಲ ಮಣ್ಣುಗೂಡಿಸಿ ಸರ್‍ವಸ್ವದ ನಾಶವನ್ನುಂಟುಮಾಡಿತು. ಯುದ್ಧ ಭೂಮಿಯಿಂದ ಹತಾಶರಾಗಿ ರಾಜಧಾನಿಗೆ ಬಂದ ಸೈನಿಕರು ದೀನವಾಣಿಯಿಂದ ತಮ್ಮ ದುಃಸ್ಥಿತಿಯನ್ನು ವರ್ಣಿಸಲು, ನಾಲ್ಕೂ ಕಡೆಯಲ್ಲಿ ಆಹಾಕಾರವು ಉತ್ಪನ್ನವಾಯಿತು. ಅರಮನೆಯಲ್ಲಿದ್ದ ರಾಜನ ವಂಶಿಕರು ತಮ್ಮ ಕೈಗೆ ಸಿಕ್ಕ ಸಂಪತ್ತನ್ನು ತಕ್ಕೊಂಡು ರಾಜಧಾನಿಯನ್ನು ಬಿಡತೊಡಗಿದರು. ಇದನ್ನು ನೋಡಿ ನಾಗರಿಕರು ಹೌಹಾರಿದರು. ಅದರಲ್ಲಿ, ರಣಾಂಗಣದಿಂದ ಪಾರಾಗಿ ಬಂದ ತಿರುಮಲರಾಯನು, ಅರಮನೆಗೆ ಬಂದಕೂಡಲೆ, ಮೊದಲೆ ಸೆರೆಮನೆಯಲ್ಲಿಟ್ಟಿದ್ದ ಸದಾಶಿವರಾಯನನ್ನು ಕರಕೊಂಡು ಅಗಣಿತ ಸಂಪತ್ತಿನೊಡನೆ ರಾಜಧಾನಿಯಿಂದ ಹೊರಟುಹೋದನು, ಪ್ರತ್ಯಕ್ಷ ಸೇನಾಪತಿಯೇ ಹೀಗೆ ಓಡಿಹೋದ ಬಳಿಕ ಉಳಿದವರು ಏನು ಮಾಡಬೇಕು? ಯಾವನ ಕೈಗೆ ಏನು ಸಿಕ್ಕಿತೋ ಅದನ್ನು ತಕ್ಕೊಂಡು ಜನರು ರಾಜಧಾನಿಗೆ ಶರಣುಹೊಡೆದು ನಡೆಯ ಹತ್ತಿದರು. ಪಟ್ಟಣದೊಳಗಿನ ಶೆಟ್ಟರು-ಸಾಹುಕಾರರು ಮಾತ್ರ ಎಲ್ಲಿಗೂ ಹೋಗಲಿಕ್ಕೆ ಬಾರದಾಯಿತು. ಆನೆ-ಕುದುರೆ-ಒಂಟೆ-ಎತ್ತು-