ಪುಟ:Kannadigara Karma Kathe.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಕನ್ನಡಿಗರ ಕರ್ಮಕಥೆ

ವ್ಯಾಲನಿಲಯಮಿಲನೇನ ಗರಲಮಿವ ಕಲಯತಿ ಮಲಯ ಸಮೀರಮ್|
ಮಾಧವಮನಸಿಜ ವಿಶಿಖಭಯಾದಿವ ಭಾವನಯಾ ತ್ವಯಿ ಲೀನಾ||
ಸಾ ವಿರಹೆ ತವ ದೀನಾ ||ಧ್ಯ||

ಮೆಹರ್ಜಾನಳ ಈ ಅಷ್ಟಪದಿಯ ಮಂಜುಳ ಗಾನಧ್ವನಿಯು ಕುಂಜವನದಲ್ಲಿ ಪುನಃ ತುಂಬಿಹೋಯಿತು ; ಆದರೆ ಅಪಘಾತಕ್ಕೆ ಹೆದರಿದ್ದ ರಾಮರಾಜನಿಗೆ ಅದರಿಂದ ಸುಖವಾಗಲಿಲ್ಲ. ತಾನು ಎಲ್ಲಿ ನೀರಲ್ಲಿ ಮುಳುಗಿ ಸತ್ತೇನೋ ಎಂಬ ಭಯದಿಂದ ಆತನು ಪುಷ್ಕರಣಿಯ ಮಧ್ಯದಲ್ಲಿ ನಿಲ್ಲಲಾರದೆ ಧ್ವಜಸ್ತಂಭಕ್ಕೆ ಕಟ್ಟಿದ ನೌಕೆಯನ್ನು ಬಿಚ್ಚಿ ಅದನ್ನು ದಂಡೆಯ ಕಡೆಗೆ ಸಾಗಿಸಿದನು. ಗಾನಲೋಲುಪಳಾದ ಮೆಹರ್ಜಾನಳೀಗೆ ಇದು ಗೊತ್ತಾಗಲಿಲ್ಲ. ತಾನು ಹಿಡಿದಿದ್ದ ಹಸ್ತವನ್ನು ರಾಮರಾಜನು ಯಾವಾಗ ಬಿಡಿಸಿಕೊಂಡನೆಂಬುದರ ಸ್ಮರಣವೂ ಆಕೆಗೆ ಉಳಿಯಲಿಲ್ಲ. ನೌಕೆಯು ದಂಡೆಗೆ ಹತ್ತಿದ ಕೂಡಲೆ ರಾಮರಾಜನು-ಪ್ರಿಯೇ, ಮೆಹರ್, ಇನ್ನು ಇಲ್ಲಿಯ ಶೀತ ಹವೆಯು ನಿನಗೆ ತಡೆಯಲಿಲ್ಲ ನಡೆ, ಮಂದಿರಕ್ಕೆ ಹೋಗೋಣ, ಎಂದು ನುಡಿದು, ಒಂದು ಸಣ್ಣ ಹುಡಿಗೆಯನ್ನು ಒತ್ತಾಯದಿಂದ ಕೈ ಹಿಡಿದು ಕರೆದೊಯ್ಯುವಂತೆ ಮಂದಿರದ ಕಡೆಗೆ ಆಕೆಯನ್ನು ಕರಕೊಂಡು ನಡೆದನು. ಕುಂಜವನವನ್ನು ಬಿಟ್ಟು ಬಂದು. ಮಂದಿರದ ಪಾವಟಗೆಗಳನ್ನು ಹತ್ತುವಾಗ ಮೆಹರ್ಜಾನಳು ಕಣ್ಣೀರು ಸುರಿಸುತ್ತ ರಾಮರಾಜನನ್ನು ಬಿಗಿಯಾಗಿ ಅಪ್ಪಿಕೊಂಡು - ಪ್ರಿಯಕರಾ, ಯಾವ ಕಾರಣದಿಂದಲೋ ಅದನ್ನು ನಾನು ಹೇಳಲಾರೆನು ; ಆದರೆ ಈ ಕುಂಜವನದಿಂದ ಹಾಗು ಪುಷ್ಕರಣಿಯಿಂದ ಒದಗಿದ ಇಂದಿನಂಥ ಸುಖವು ಇನ್ನು ತಿರುಗಿ ನನಗೆ ಲಭಿಸಲಾರದೆಂಬ ಹಾಗೆ ತೋರುತ್ತದೆ ; ಆದ್ದರಿಂದ ನಾವಿಬ್ಬರು ದಂಡೆಯ ಕಡೆಗೆ ಬರುತ್ತಿದ್ದಾಗ ಪುಷ್ಕರಣಿಯಲ್ಲಿ ಮುಳುಗಿ ಹೋಗಿದ್ದರೆ ಬಹಳ ನೆಟ್ಟಗಾಗುತ್ತಿತ್ತೆಂದು ನನ್ನ ಮನಸ್ಸಿನಲ್ಲಿ ಕಟಿಯುತ್ತಿರುವದು, ಎಂದಳು. ಅದನ್ನು ಕೇಳಿದ ಕೂಡಲೆ ರಾಮರಾಜನ ಹೃದಯವು ಮತ್ತೆ ಕಂಪಿಸಹತ್ತಿತು, ಆತನ ಮನಸ್ಸಿಗೆ ಮೊದಲಿನಂತೆ ಹ್ಯಾಗೆ ಹ್ಯಾಗೋ ಆಗಹತ್ತಿತು. ತಾನು ಪುಷ್ಕರಣಿಯಿಂದ ಹೊರಟು ಮಂದಿರಕ್ಕೆ ಬಂದು ಮುಟ್ಟಿದ್ದನಷ್ಟೇ, ಎಂದು ಆತನು ಸ್ಮರಣಮಾಡಿಕೊಂಡನು. ಈ ಮಾತಿಗೆ ನಂಬಿಗೆಯನ್ನು ಮಾಡಿಕೊಳ್ಳುವದಕ್ಕಾಗಿಯೋ ಅನ್ನುವಂತೆ ಆತನು ಸುತ್ತುಮುತ್ತಲು ನೋಡಿ, ಕಾಲುಬುಡದಲ್ಲಿಯ ಪಾವಟಿಗೆಗಳನ್ನು ನೋಡಿದನು. ಮನಸ್ಸಿನ ನಂಬಿಗೆಯಾದ ಮೇಲೆ ಆತನು ಮೆಹರ್ಜಾನಳನ್ನು ಕುರಿತು-ನೀನು ಸಂಜೆಯಿಂದ ಇಷ್ಟು ಹೊತ್ತಿನವರೆಗೆ ಕುಂಜವನದಲ್ಲಿಯೂ, ಪುಷ್ಕರಣೆಯಲ್ಲಿಯೂ ಕಾಲಹರಣ