ಪುಟ:Kannadigara Karma Kathe.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಯಾಣ

೩೭

ಮಾಡಿದ್ದರಿಂದ ನಿನ್ನ ಚಿತ್ತಕ್ಕೆ ಭ್ರಮೆಯಾದಂತೆ ತೋರುತ್ತದೆ. ಆದ್ದರಿಂದ ಶಯನಗೃಹಕ್ಕೆ ಹೋಗಿ ಸ್ವಸ್ಥವಾಗಿ ಮಲಗಿಕೊಳ್ಳಳು ನಡೆ, ಎಂದು ಹೇಳಿ ಆಕೆಯನ್ನು ಶಯನಗೃಹಕ್ಕೆ ಕರೆದೊಯ್ದು ಪಲ್ಲಂಗದ ಮೇಲೆ ಮಲಗಿಸಿ, ತಾನು ತಲೆದಿಂಬಿಗೆ ಕುಳಿತುಕೊಂಡು ಆಕೆಯ ತಲೆಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡನು. ತನಗೆ ನಿದ್ದೆ ಹತ್ತಿದ ಬಳಿಕ ರಾಮರಾಜನು ಹೇಳದೆ ಕೇಳದೆ ವಿಜಯನಗರಕ್ಕೆ ಹೋಗಬಹುದೆಂದು ಶಂಕಿಸಿ, ಮೆಹರ್ಜಾನಳು ರಾಮರಾಜನ ಬಲಗೈಯನ್ನು ತನ್ನ ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡಳು, ನಿದ್ದೆ ಮಾಡಬಾರದೆಂಬ ನಿಶ್ವಯದಿಂದ ಆಕೆಯು ಕಣ್ಣು ತೆರೆದು ಮಲಗಿಕೊಂಡಳು ; ಆದರೆ ಆ ವಿಶಾಲಾಕ್ಷಿಯ ಮೇಲೆ ಸ್ವಲ್ಪಹೊತ್ತಿನಲ್ಲಿಯೇ ನಿದ್ದೆಯ ಅಮಲು ಕೂತು, ಆಕೆಯು ಕಣ್ಣುಗಳನ್ನು ಮುಚ್ಚಿ ಗಡದ್ದು ನಿದ್ದೆ ಮಾಡಹತ್ತಿದಳು. ಇದನ್ನು ನೋಡಿ ರಾಮರಾಜನಿಗೆ ಬಹಳ ಸಮಾಧಾನವಾಯಿತು. ಆತನು ಬೇಗನೆ ವಿಜಯನಗರಕ್ಕೆ ಹೋಗಬೇಕಾಗಿತ್ತು; ಆದ್ದರಿಂದ ಆತನು ಮೆಲ್ಲನೆ ತನ್ನ ಕೈಗಳನ್ನು ಬಿಡಿಸಿಕೊಂಡು, ಮೆಹರ್ಜಾನಳು ಎಲ್ಲಿ ಎಚ್ಚರಿಯುವಳೋ, ಎಂಬ ಭಯದಿಂದ ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡನು. ಆಮೇಲೆ ತನ್ನ ತೊಡೆಯನ್ನು ಮೆಲ್ಲನೆ ಒಂದೊಂದೇ ಬೆರಳು ಹಿಂದಕ್ಕೆ ಸರಿಸಿಕೊಳ್ಳುತ್ತ ಸ್ವಲ್ಪ ಹೊತ್ತು ಸುಮ್ಮನೆ ಕೂಡುತ್ತ ಕಡೆಗೊಮ್ಮೆ ಮೆಹರ್ಜಾನಳ ತಲೆಯನ್ನು ಬಹು ಸೂಕ್ಷ್ಮವಾಗಿ ಎತ್ತಿ ತಲೆದಿಂಬಿನ ಮೇಲೆ ಇಟ್ಟು ತನ್ನ ತೊಡೆಯನ್ನು ತಕ್ಕೊಂಡನು. ಮೆಹರ್ಜಾನಳಿಗೆ ಎಚ್ಚರವಾಗದಿರುವದನ್ನು ನೋಡಿ ಆತನಿಗೆ ಬಹಳ ಸಮಾಧಾನವಾಯಿತು. ಆತನು ಮತ್ತೆ ಕೆಲವು ಹೊತ್ತು ಸುಮ್ಮನೆ ಕುಳಿತುಕೊಂಡು ಮೆಹರ್ಜಾನಳಿಗೆ ಎಚ್ಚರವಾಗದಿರುವುದನ್ನು ಮನಗಂಡನು. ಆಮೇಲೆ ಆತನು ಮಂಚವನ್ನು ಇಳಿದು ಶಯನಗೃಹದಿಂದ ಹೊರಗೆ ಹೊರಟು ಪ್ರಯಾಣವನ್ನು ಬೆಳೆಸಿದವನಂತೆ ಮಾರ್ಜೀನೆಯ ಬಳಿಗೆ ಹೋದನು.

ಮೆಹರ್ಜಾನಳ ಮೇಲೆ ತುಂಬಾ ವಾತ್ಸಲ್ಯವುಳ್ಳ ಮಾರ್ಜೀನೆಯು ಆಗ ಮತ್ತೊಂದು ಕೋಣೆಯಲ್ಲಿ ಏನೋ ಆಲೋಚಿಸುತ್ತ, ಕಣ್ಣಿಗೆ ಕಣ್ಣು ಹಚ್ಚದೆ ತನ್ನ ಹಾಸಿಗೆಯ ಮೇಲೆ ಹೊರಳಾಡುತ್ತ ಮಲಗಿಕೊಂಡಿದ್ದಳು. ರಾಮರಾಜನು ಅಕಸ್ಮಾತ್ತಾಗಿ ತನ್ನ ಬಳಿಗೆ ಬರುವದನ್ನು ನೋಡಿ ಆಕೆಯು ಚಟ್ಟನೆ ಎದ್ದು ನಿಂತು-ಇದೇನು ? ಮಹಾರಾಜರು ಇಷ್ಟರೊಳಗೆ ಮೆಹರ್ಜಾನಳ ಬಳಿಯಿಂದ ಹೊರಟು ಯಾವ ಕಡೆಗೆ ಹೋಗುವದು ! ಮೆಹರ್ಜಾನಳು ಮಹಾರಾಜರನ್ನು ಕಳಿಸಲಿಕ್ಕೆ ಬಾರದಿರುವದನ್ನು ನೋಡಿದರೆ, ಆಕೆ ನಿದ್ದೆ ಹತ್ತಿ ಮಲಗಿಕೊಂಡ ಹಾಗೆ ತೋರುತ್ತದೆ. ತರುಣಿಯನ್ನು ವಂಚಿಸಿ ಹೀಗೆ ಹೋಗುವದು ಪುರುಷರಿಗೆ