ಪುಟ:Kannadigara Karma Kathe.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ರೀ ಸಾಹಸ

೪೫

ಬಗ್ಗೆ ಅವರಿಗೆ ನಿಶ್ಚಯವಾಗಿ ಸಂಶಯ ಬರಬಹುದಾಗಿತ್ತು ! ಆಕೆಯ ಸೌಮ್ಯಮುದ್ರೆಯು ಅಷ್ಟು ನಷ್ಟವಾಗಿ ಅದರ ಸ್ಥಳವನ್ನು ಉಗ್ರತೆಯು ವ್ಯಾಪಿಸಿತ್ತು, ರಾಮರಾಜನ ಪತ್ರವನ್ನು ಓದುವದಾದ ಮೇಲೆ ಮೆಹರ್ಜಾನಳು ಬಹಳ ಹೊತ್ತಿನವರೆಗೆ ಅದನ್ನು ಎವೆಯಿಕ್ಕದೆ ನೋಡುತ್ತ ಸುಮ್ಮನೆ ಕುಳಿತುಕೊಂಡಳು. ಬಳಿಕ ಮತ್ತೊಂದು ಥೈಲಿಯಲ್ಲಿದ್ದ ಉಂಗುರವನ್ನು ದಿಟ್ಟಿಸಿ ನೋಡಿದಳು. ಆಮೇಲೆ ಮತ್ತೆ ಸ್ವಲ್ಪ ಹೊತ್ತು ವಿಚಾರ ಮಾಡಿ ಆಕೆಯು ತನ್ನ ಬಲಗೈಯ ಅನಾಮಿಕೆಯ ಬೆರಳಿನಲ್ಲಿ ಆ ಉಂಗುರವನ್ನು ಇಟ್ಟುಕೊಂಡು, ಸ್ವಲ್ಪ ತೀವ್ರವಾದ ಸ್ವರದಿಂದ ಮಾರ್ಜೀನೆಯನ್ನು ಕುರಿತು-ಮಾರ್ಜೀನೆ, ನೀನಾದರೂ ನನ್ನ ಮೇಲೆ ತಿರುಗಿ ಬೀಳದೆ ನನ್ನ ಸಂಗಡ ಬರುವೆಯಾ ? ಎಂದು ಕೇಳಲು, ಆಶ್ಚಯ್ಯಮಗ್ನಳಾದ ಮಾರ್ಜೀನೆಯು "ಎಲ್ಲಿಗೆ" ಎಂದು ಪ್ರಶ್ನೆ ಮಾಡಿದಳು. ಅದಕ್ಕೆ ಮೆಹರ್ಜಾನಳ ಮುಖದಿಂದ "ಎಲ್ಲಿಯಾದರೂ ಜಗತ್ತಿನಲ್ಲಿ ; ನಾನು ಹೋದತ್ತ" ಎಂಬ ಉತ್ತರವು ತಟ್ಟನೆ ಹೊರಟಿತು.

ಈ ಮೇರೆಗೆ ನುಡಿದು ಮೆಹರ್ಜಾನಳು ನಿಟ್ಟುಸಿರುಬಿಡಲು ಮಾರ್ಜೀನೆಯು ಏನೂ ತೋಚದೆ ಮೆಹರ್ಜಾನಳನ್ನು ನೋಡುತ್ತ ಸುಮ್ಮನೆ ಕುಳಿತುಕೊಂಡಳು. ಇಂದು ತನ್ನ ಮೆಹರ್ಜಾನಳು ಹೀಗೆ ಯಾಕೆ ಮಾಡುವಳು, ಹೀಗೆ ಯಾಕೆ ಮಾತಾಡುವಳು ಎಂಬುದರ ಗೂಢವೇ ಆಕೆಗೆ ತಿಳಿಯದಾಯಿತು. ಮಾರ್ಜೀನೆಯು ಮೆಹರ್ಜಾನಳ ಸ್ವಭಾವವನ್ನು ಚಿಕ್ಕಂದಿನಿಂದ ಬಲ್ಲವಳು. ಸಣ್ಣವಳಿರುವಾಗ ಮೆಹರ್ಜಾನಳು ಬಹು ಹಟಮಾರಿಯೂ, ತಾಮಸಿಯೂ ಇದ್ದಳು. ಆಕೆಯು ಹನ್ನೆರೆಡು ವರ್ಷಗಳಾದ ಬಳಿಕ ಆಕೆಯ ಹಟಮಾರಿತನವು ಮೇಲೆ ಮೇಲೆ ವ್ಯಕ್ತವಾಗದೆ, ಯಾವಾಗಾದರೊಮ್ಮೆ ವ್ಯಕ್ತವಾಗುತ್ತಿತ್ತು. ಮುಂದೆ ಸ್ವಲ್ಪ ದಿನಗಳಲ್ಲಿ ಮೆಹರ್ಜಾನಳ ತಾಯಿಯು ತೀರಿಕೊಳ್ಳಲು, ಆ ಹಟಮಾರಿತನವೂ, ತಾಮಸ ಸ್ವಭಾವವೂ ತೀರ ಕಡಿಮೆಯಾದವು. ಚಿಕ್ಕಂದಿನಿಂದ ಮೆಹರ್ಜಾನಳು ಮಾರ್ಜೀನೆಯ ಬಳಿಯಲ್ಲಿಯೇ ಇಪ್ಪತ್ತುನಾಲ್ಕು ತಾಸು ಇರುತ್ತಿದ್ದದ್ದರಿಂದ ಆಕೆಯ ಹಟಮಾರಿತನವನ್ನು ಮಾರ್ಜೀನೆಯು ಚೆನ್ನಾಗಿ ಅರಿತ್ತಿದ್ದಳು. ಮೆಹರ್ಜಾನಳ ತಂದೆಯಾದ ಖಾನ್‌ಜಮಾನ್ ಮಹಬೂಬಖಾನನೆಂಬುವನು ಗೋವಳ ಕೊಂಡದ ದರ್ಬಾರದಲ್ಲಿ ಒಬ್ಬ ಸರದಾರನಾಗಿದ್ದನು. ಮೆಹರ್ಜಾನಳು ಬಹು ಲಾವಣ್ಯವತಿಯೂ, ಸದ್ಗುಣಿಯೂ ಆದದ್ದರಿಂದ, ಬಹುಜನ ತರುಣ ಸರದಾರರು ಆಕೆಯನ್ನು ಲಗ್ನವಾಗಲಿಚ್ಛಿಸಿ ಖಾನನನ್ನು ಕೇಳಿದ್ದರು ; ಆದರೆ ಆತನು ಅಹಮ್ಮದನಗರದ ಬಾದಶಹನ ಮನೆತನದೊಡನೆ ಸಂಬಂಧ ಮಾಡಬೇಕೆಂಬ