ಪುಟ:Kannadigara Karma Kathe.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬

ಕನ್ನಡಿಗರ ಕರ್ಮಕಥೆ

ಕೂಡಲೆ ನನಗೆ ತಿಳಿಸಿರಿ. ನಾನು ಮಲಗಿರಲಿ, ನಿದ್ದೆ ಮಾಡುತ್ತಿರಲಿ ಎಬ್ಬಿಸಿ ಸುದ್ದಿಯನ್ನು ಹೇಳಲಿಕ್ಕೆ ಹಿಂದು ಮುಂದು ನೋಡಬೇಡಿರಿ, ಎಂದು ಆಗ್ರಹದಿಂದ ಹೇಳಿ ಮಲಗಿಕೊಂಡನು. ಧನಮಲ್ಲನು ಬರಲಿಲ್ಲೆಂಬ ಅಸಮಾಧಾನದಿಂದ ಆತನಿಗೆ ನಿದ್ದೆಯು ಬರಲೊಲ್ಲದು. ಆತನು ಹಾಸಿಗೆಯ ಮೇಲೆ ಹೊರಳಾಡಿ ಬೇಸತ್ತನು. ತಾನು ನಿತ್ಯದಲ್ಲಿ ಕುಳಿತುಕೊಳ್ಳುವ ಆಸನದಲ್ಲಿ ಕುಳಿತುಕೊಂಡು ಆಲೋಚಿಸಿ ದಣಿದನು. ಮತ್ತೆ ಆತನಿಗೆ ಹಾಸಿಗೆ ಹಿಡಿಯಬೇಕಾಯಿತು. ಇನ್ನೂ ಬೆಳಗಾಗಲಿಲ್ಲೆಂಬ ಆತುರದಿಂದ ಆಗಾಗ್ಗೆ ಆತನು ಪೂರ್ವದಿಕ್ಕಿನ ಕಿಟಕಿಗಳಲ್ಲಿ ಹಣಕಿಹಾಕಿ ನೋಡಿದನು. ಅಂದಿನ ರಾತ್ರಿಯು ರಾಮರಾಜನಿಗೆ ಬಹು ದೀರ್ಘವಾಗಿ ತೋರಿತು. ಆತನು ಹೀಗೆ ತಳಮಳಿಸುತ್ತ, ಬೇಸರದಿಂದ ರಾತ್ರಿಯನ್ನು ತಿರಸ್ಕರಿಸುತ್ತ ಬೆಳಗಿನ ಹಾದಿಯನ್ನು ನೋಡುತ್ತಿರಲು, ಪೂರ್ವದಿಕ್ಕು ಒಮ್ಮೆ ಬೆಳಗಾಯಿತು. ಅದನ್ನುನೋಡಿ ರಾಮರಾಜನಿಗೆ ಮೊದಲು ಸ್ವಲ್ಪ ಸಮಾಧಾನವಾದರೂ, ಮೆಹರ್ಜಾನಳ ವಿಯೋಗದ ಸ್ಮರಣವಾಗಿ ಆತನ ಮನಸ್ಸು. ಮತ್ತೆ ಅಸಮಾಧಾನ ಹೊಂದಿತು. ನಿದ್ದೆಗೇಡೂ, ಬುದ್ಧಿಗೇಡೂ ಆಗಿ ರಾಮರಾಜನಿಗೆ ಹುಚ್ಚು ಹಿಡಿದ ಹಾಗೆ ಆಗಿತ್ತು. ಆತನ ಕಣ್ಣುಗಳು ಉರಿಯುತ್ತಿದ್ದವು. ಮೈಯು ಒಡ್ಡು ಮುರಿಯುತ್ತಿತ್ತು. ಆತನಿಗೆ ಆಕಳಿಕೆಗಳು ಅಗಾಗ್ಗೆ ಬರುತ್ತಿದ್ದವು. ಆತನು ವಿಚಾರಮಗ್ನನಾಗಿ ಯಂತ್ರದಂತೆ ಪ್ರಾತರ್ವಿಧಿಗಳನ್ನು ತೀರಿಸಿಕೊಂಡನು. ಕೃಷ್ಣದೇವ-ಮಹಾರಾಜರನ್ನು ಕಾಣಲಿಕ್ಕೂ, ತನ್ನ ಲಗ್ನದ ವರ್ತಮಾನವನ್ನು ಕೇಳಲಿಕ್ಕೂ ಆತನಿಗೆ ಉತ್ಸಾಹವಾಗಲೊಲ್ಲದು. ಅಷ್ಟರಲ್ಲಿ ತಿರುಮಲರಾಯನು ಬರಲು, ಅವರಿಬ್ಬರೂ ರಾಜದರ್ಶನಕ್ಕಾಗಿ ಹೊರಟುಹೋದರು.

ತಾನು ರಾಮರಾಜನಿಂದ ಕೇಳಿದ ಸುದ್ದಿಯನ್ನೆಲ್ಲ ತಿರುಮಲರಾಯನು ಈ ಮೊದಲೆ ಮಹಾರಾಜನಿಗೆ ತಿಳಿಸಿದ್ದನು. ಮತ್ತೆ ಅದನ್ನು ರಾಮರಾಜನ ಮುಖದಿಂದ ತಿಳಿದುಕೊಳ್ಳುವ ಇಚ್ಛೆಯಿಂದ ಮಹಾರಾಜರು ರಾಮರಾಜನಿಗೆ ಪ್ರಶ್ನೆ ಮಾಡಿದರು. ಹೊಂದಿಸಿ ಹೇಳಲಿಕ್ಕೆ ಅವಕಾಶ ದೊರೆತದ್ದರಿಂದ ರಾಮರಾಜನು ಮೊದಲೇ ಪ್ರಾಜ್ಞವಾಗಿ ಕೂಡಿಸಕೊಂಡಂತೆ ಯಾವತ್ತೂ ಸುದ್ದಿಯನ್ನು ಮಹಾರಾಜರ ಮುಂದೆ ಉಪ್ಪುಕಾರ ಹಚ್ಚಿ ಸವಿಮಾಡಿ ಹೇಳಿದನು. ಸುದ್ದಿ ಹೇಳುವದಾದ ಮೇಲೆ ಆತನು ಮಹಾರಾಜರಿಗೆ-ಇನ್ನು ಈ ಮುಸಲ್ಮಾನರ ಬಂದೋಬಸ್ತು ಮಾಡುವ ವಿಚಾರದ ಹೊರತು ಎರಡನೆಯ ವಿಚಾರಗಳು ನನ್ನ ಮನಸ್ಸಿನಲ್ಲಿ ಉತ್ಪನ್ನವಾಗುವದಿಲ್ಲವು, ಹೊತ್ತಿಗೆ ತಕ್ಕ ಬಂದೋಬಸ್ತು ಮಾಡದಿದ್ದರೆ ನಮ್ಮ ರಾಜ್ಯದ ವ್ಯವಸ್ಥೆ ಯೇನಾದೀತೆಂಬುದನ್ನು ಹೇಳಲಾಗುವದಿಲ್ಲ. ಮೊದಲು ಆ