ಪುಟ:Kannadigara Karma Kathe.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೯

೮ನೆಯ ಪ್ರಕರಣ

ವಿನಾಶವೃಕ್ಷ

ರಾಮರಾಜನ ಚಿತ್ತವನ್ನು ಮೆಹರ್ಜಾನಳು ಸಂಪೂರ್ಣವಾಗಿ ಆಕರ್ಷಿಸಿ ಕೊಡದ್ದರಿಂದ, ಆ ತರುಣಸರದಾರನು ಮೇಲೆ ಹೇಳಿದಂತೆ ಕೃಷ್ಣದೇವರಾಯನ ಮುಂದೆ ಇಲ್ಲದ್ದೊಂದು ಹೇಳಿ ಕುಂಜವನಕ್ಕೆ ಬಂದಿದ್ದನು. ಕುಂಜವನದಲ್ಲಿ ಮೆಹರ್ಜಾನಳೊಬ್ಬಳು ಇಲ್ಲದ್ದರಿಂದ ಆ ಮನೋಹರ ವನವು ಈಗ ರಾಮರಾಜನಿಗೆ ದುಃಖದಾಯಕವಾಗಿ ತೋರಹತ್ತಿತು. ಮೆಹರ್ಜಾನಳೊಡನೆ ತಾನು ರಮಿಸಿದ ಪ್ರತಿ ಒಂದು ಸ್ಥಳವೂ, ಲತಾಮಂಟಪಗಳೂ, ವೃಕ್ಷಲತೆಗಳೂ ರಾಮರಾಜನ ದುಃಖವನ್ನು ಹೆಚ್ಚಿಸತೊಡಗಿದವು. ಅತನು ಮೆಹರ್ಜಾನಳ ಶಯನಗೃಹವನ್ನು ಪ್ರವೇಶಿಸಿದನು. ಅಲ್ಲಿ ಆತನ ಕಣ್ಣಿಗೆ ಮೆಹರ್ಜಾನಳ ವಸ್ತ್ರಾಭರಣಗಳ ಪೆಟ್ಟಿಗೆಯು ಬಿದ್ದಿತು. ಆಗ ರಾಮರಾಜನು, ಕೌತುಕದಿಂದ ಅದನ್ನು ತೆರೆಯಹೋಗಲು, ಅದಕ್ಕೆ ಕೀಲಿಯು ಹಾಕಿತ್ತು ; ಆದರೆ ಕೀಲಿಯ ಕೈಯು, ಪೆಟ್ಟಿಗೆಯ ಕೀಲಿಯಲ್ಲಿಯೇ ಇರುವದನ್ನು ನೋಡಿ ರಾಮರಾಜನು ಅಶ್ಚರ್ಯಪಟ್ಟು ಪೆಟ್ಟಿಗೆಯ ಕೀಲಿಯನ್ನು ತೆಗೆದನು. ಒಳಗೆ ವಸ್ತ್ರಾಭರಣಗಳು ಅಸ್ತವ್ಯಸ್ತವಾಗಿ ಬಿದ್ದಿದ್ದವು. ರಾಮರಾಜನು ಅವನ್ನೆಲ್ಲ ಒಂದೊಂದೇ ಹೊರಗೆ ತೆಗೆದುನೋಡಲು, ಅತನು ಕೊಟ್ಟಿದ್ದ ವಸ್ತ್ರಾಭರಣಗಳೆಲ್ಲ ಅಚ್ಚಳಿಯದೆ ಎಲ್ಲವೂ ಇದ್ದವು ! ರಾಮರಾಜನು ಕೊಟ್ಟಿದ್ದ ಒಂದು ರಿಂಬಿಯನ್ನು ಕೂಡ ಸಂಗಡ ಒಯ್ಯಲಿಕ್ಕಿಲ್ಲೆಂಬ ಪ್ರತಿಜ್ಞೆಯಿಂದ ಮೆಹರ್ಜಾನಳು ಕುಂಜವನದಿಂದ ಹೊರಟಿದ್ದನ್ನು ವಾಚಕರು ಮರೆತಿರಲಿಕ್ಕಿಲ್ಲ. ತಾನು ಮೊದಲು ಮೆಹರ್ಜಾನಳಿಗೆ "ನಿನ್ನನ್ನು ಪಟ್ಟದ ರಾಣಿಯನ್ನಾಗಿ ಮಾಡಿಕೊಳ್ಳುವೆ" ನೆಂದು ವಚನಕೊಟ್ಟು, ಈಗ ಮೋಸಮಾಡಿದ್ದರಿಂದ ಆಕೆಯು ಹೀಗೆ ತನ್ನ ಮೇಲೆ ಸಿಟ್ಟಾಗಿ ಅಭಿಮಾನ ತೊರೆದು ಹೋದಳೆಂದು ತಿಳಿದು, ಅತನು ತನ್ನನ್ನು ಬಹಳವಾಗಿ ಹಳಿದುಕೊಳ್ಳಹತ್ತಿದನು ; ಆದರೆ ರಾಮರಾಜನಂಥವರು ಬಹಳ ಹೊತ್ತು ತಮ್ಮನ್ನು ತಾವು ಹಳಿದುಕೊಳ್ಳುತ್ತ ಕೂಡ್ರುವ ಸಂಭವವು ಕಡಿಮೆ. ಅದರಂತೆ ರಾಮರಾಜನು