ಪುಟ:Kannadigara Karma Kathe.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೪

ಕನ್ನಡಿಗರ ಕರ್ಮಕಥೆ

ನಿಶ್ಚಯಮಾಡಿಕೊಂಡಿದ್ದನು. ಕೃಷ್ಣದೇವರಾಯರಿಗೆ ಒಬ್ಬ ಮಗನಿದ್ದನು. ಮಗನನ್ನು ಪಟ್ಟಕ್ಕೆ ಕುಳ್ಳಿರಿಸಿ, ಆತನು ರಾಜ್ಯಕಾರಭಾರ ನಡಿಸುವದನ್ನು ಕಣ್ಣುತುಂಬ ನೋಡಿ, “ಹರಿ ಹರಿ” ಎಂದು ಸ್ವಚ್ಛವಾಗಿ ಇರಬೇಕೆಂದು ಅವರು ಇಚ್ಚಿಸುತ್ತಿದ್ದರು. ತಮ್ಮ ಮಗನು ಪಟ್ಟಕ್ಕೆ ಕುಳಿತುಕೊಳ್ಳಲು, ರಾಮರಾಜನು ಮುಖ್ಯ ಕಾರಭಾರಿಯಾಗಿ, ಯಾರ ಬೇಳೆಯನ್ನೂ ಬೇಯಗೊಡದೆ ರಾಜ್ಯವನ್ನು ಸ್ವಂತ್ರವಾಗಿ ನಡೆಸಿಯಾನೆಂದು ರಾಯರು ಭಾವಿಸಿದ್ದರು, ಆದರೆ ಏನಾಯಿತೋ ತಿಳಿಯದು. ಆ ರಾಜಪುತ್ರನು ವಿಷಪ್ರಯೋಗದಿಂದ ಅಕಸ್ಮಾತ್ತಾಗಿ ಸತ್ತನು. ವಿಷಯಪ್ರಯೋಗವನ್ನು ಯಾರು ಹ್ಯಾಗೆ ಮಾಡಿದರೆಂಬ ಬಗ್ಗೆ ಕೃಷ್ಣದೇವರಾಯರೂ ರಾಮರಾಜನೂ ಒಳ್ಳೆಯ ನಿಗ್ರಹದಿಂದ ಶೋಧಮಾಡಿದರು ; ಆದರೆ ಅವರ ಗೊತ್ತು ಹತ್ತಲಿಲ್ಲ. ಪುತ್ರಶೋಕದಿಂದ ಕೃಷ್ಣದೇವರಾಯರು ಬೇಗನೆ ಮರಣ ಹೊಂದಿದರು. ಅವರ ತರುವಾಯ ಅವರ ಅನುಮತಿಯಿಂದ ಕಾರಾಗೃಹದಲ್ಲಿದ್ದ ಅವರ ತಮ್ಮನೊಬ್ಬನು ಸಿಂಹಾಸನದ ಮೇಲೆ ಕುಳ್ಳಿರಿಸಲ್ಪಟ್ಟನು.

ಕೃಷ್ಣದೇವರಾಯರಿಗೆ ವಿಜಯನಗರದ ಸಿಂಹಾಸನವು ಅನಾಯಾಸವಾಗಿ ದೊರೆತಿದ್ದಿಲ್ಲ. ಅವರು ತಮಗಿಂತಲೂ ಗಾದಿಯ ಮೇಲೆ ವಿಶೇಷ ಹಕ್ಕು ಇರುವ ತಮ್ಮ ಮೂವರು ತಮ್ಮಂದಿರನ್ನೂ, ಒಬ್ಬ ಅಣ್ಣನ ಮಗನನ್ನೂ ಮಹತ್ವಾಕಾಂಕ್ಷೆಯಿಂದ ಸೆರೆಯಲ್ಲಿಟ್ಟು ವಿಜಯನಗರದ ಪಟ್ಟವೇರಿದ್ದರು. ತಮ್ಮ ಹೊಟ್ಟೆಯಲ್ಲಿ ಸಂತಾನವಾದದ್ದರಿಂದ, ತಮ್ಮ ತರುವಾಯ ತಮ್ಮ ವಂಶಕ್ಕೇ ಸಿಂಹಾಸನವು ಪ್ರಾಪ್ತವಾಗುವುದೆಂದು ಕೃಷ್ಣದೇವರಾಯರು ತಿಳಿದಿದ್ದರು ; ಆದರೆ ವಿಷಪ್ರಯೋಗದಿಂದ ಮಗನು ಅಕಸ್ಮಾತ್ ಮರಣ ಹೊಂದಿದ್ದರಿಂದ ಅವರ ಎಲ್ಲ ಆಸೆಗಳೂ ಬಯಲಾದವು. ರಾಮರಾಜನ ಮೇಲೆ ರಾಯರ ಪ್ರೀತಿಯು ವಿಶೇಷವಾಗಿತ್ತು. ಈತನು ತಮ್ಮ ಮಗನೊಡನೆ ಸ್ವಾಮಿನಿಷ್ಠೆಯಿಂದ ನಡಕೊಂಡು, ತಮ್ಮ ವೈರಿಗಳ, ಹಾಗು ತಮ್ಮ ಅಣ್ಣ-ತಮ್ಮಂದಿರ ಆಟವನ್ನು ಸಾಗಿಸಿಕೊಂಡು ಹೋಗುವನೆಂತಲೂ ಕೃಷ್ಣದೇವರಾಯರು ನಂಬಿದ್ದರು; ಆದರೆ ರಾಜಪುತ್ರನ ಆಕಸ್ಮಿಕ ಮರಣದಿಂದ ಅದೆಲ್ಲ ನಿರರ್ಥಕ ಕಲ್ಪನೆಯಾಗಿ ಹೋಯಿತು. ಕೃಷ್ಣದೇವರಾಜರ ಮರಣದಿಂದ ರಾಜ್ಯಕಾರಭಾರದಲ್ಲಿ ಬಹಳ ಹೆಚ್ಚುಕಡಿಮೆಯಾದವು. ಸೆರೆಮನೆಯಲ್ಲಿದ್ದ ಮೂವರು ರಾಜಬಂಧುಗಳಲ್ಲಿ ಅಚ್ಯುತರಾಯನೆಂಬವನ ಪಕ್ಷದ ಜನರು ಖಟಾಟೋಪಮಾಡಿ ಆತನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದರು ; ಆದ್ದರಿಂದ ರಾಮರಾಜನ ಪಕ್ಷವು ಹಿಂದಕ್ಕೆ ಬಿದ್ದು, ಆತನೂ ಆತನ ಅಣ್ಣನೂ, ಆತನ ಮಿತ್ರನೂ ಕೆಲವು ದಿನ