ಪುಟ:Kannadigara Karma Kathe.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬

ಕನ್ನಡಿಗರ ಕರ್ಮಕಥೆ

ಸೈನ್ಯದ ಬೀಡು ಬಿಟ್ಟನು. ಆತನನ್ನು ಹಲವು ಜನ ಹಿಂದೂ ಮಾಂಡಲಿಕ ರಾಜರು ತಮ್ಮ ತಮ್ಮ ಸೈನ್ಯಗಳೊಡನೆ ಅಭಿಮಾನದಿಂದ ಬಂದು ಕೂಡಿಕೊಂಡಿದ್ದರು. ಕೃಷ್ಣದೇವರಾಜನ ಈ ಸಿದ್ಧತೆಯನ್ನು ನೋಡಿ ಆದಿಲಶಹನು ಬೆದರಿ, ಹಿಂದಿರುಗಿ ಹೋಗುವದು ಯುಕ್ತವಾಗಿತ್ತು ; ಹಾಗೆ ಮಾಡಬೇಕೆಂದು ಆತನ ಕಡೆಯ ತಿಳಿವಳಿಕೆಯ ಸರದಾರರೂ ಹೇಳಿದರು ; ಆದರೆ ಮುಂದಕ್ಕಿಟ್ಟ ಹೆಜ್ಜೆಯನ್ನು ಹಿಂದಕ್ಕಿಡುವದು ಆ ಅಭಿಮಾನಿ ಪುರುಷನ ಮಾನಕ್ಕೆ ಸಾಲಲ್ಲಿಲ್ಲ. ಆತನು ತಾನು ಹಿಂದಿರುಗಿ ಹೋಗಲಿಕ್ಕಿಲ್ಲೆಂದು ನಿಶ್ಚಯಿಸಿ ತನ್ನ ಏಳು ಸಾವಿರ ಮುಸಲ್ಮಾನ ಸೈನ್ಯಕ್ಕೆ, ತಾನು ಅಪ್ಪಣೆ ಕೊಟ್ಟ ಕೂಡಲೆ ಕೃಷ್ಣಾ ನದಿಯನ್ನು ದಾಟಿ ಶತ್ರುಗಳ ಮೇಲೆ ಬೀಳಬೇಕೆಂದು ಅಪ್ಪಣೆ ಮಾಡಿದನು. ನದಿಯನ್ನು ದಾಟುವದಕ್ಕಾಗಿ ಮುಸಲ್ಮಾನರು ತೆಪ್ಪಗಳನ್ನು ಕಟ್ಟಹತ್ತಿದರು. ಹೀಗಿರುವಾಗ ಒಂದು ದಿನ ಆದಿಲಶಹನು ತನ್ನ ಡೇರೆಯಲ್ಲಿ ಸಣ್ಣ ವಿಶ್ರಾಂತಿಯನ್ನು ಹೊಂದುತ್ತ ಕುಳಿತಿರಲು, ಯಾರೋ ಹೊರಗೆ- “ಏಳಪ್ಪಾ ನಿನ್ನ ಕೈಯೊಳಗಿನ ಸುವರ್ಣದ ಪಾತ್ರೆಯನ್ನು ಹಾರಿಸಿ ಮಣ್ಣುಗೂಡಿಸುವದರೊಳಗೆ ಅದರಲ್ಲಿ ಆನಂದರೂಪವಾದ ಮದ್ಯವನ್ನು ತುಂಬಿ ಪ್ರಾಶನ ಮಾಡು” ಎಂದು ಮಂಜುಲ ಸ್ವರದಿಂದ ಹಾಡುವದು ಆತನ ಕಿವಿಗೆ ಬಿದ್ದಿತು. ಅದನ್ನು ಕೇಳಿದ ಕೂಡಲೆ ಸುಲ್ತಾನನು ಅಕಸ್ಮಾತ್ ಸ್ಫೂರ್ತಿಗೊಂಡು- “ಅಲ್ಲಾನು ಈ ಗಾಯನದ ರೂಪದಿಂದ ನನಗೆ ನನ್ನ ಮನಸ್ಸಿನ ಕೋರಿಕೆಯನ್ನು ಪೂರ್ಣಮಾಡಿಕೊಳ್ಳಲಿಕ್ಕೆ ಇದು ಒಳ್ಳೆ ಸಮಯವೆಂದು ಸೂಚಿಸುತ್ತಾನೆಂದು ತಿಳಿದು, ತನ್ನ ಜತೆಗಾರರೊಡನೆ ರಾತ್ರಿ ಯಥೇಚ್ಛ ಮದ್ಯಪಾನ ಮಾಡಿ, ಅಮಲು ತಲೆಗೇರಿರಲು, ಹಿಂದುಮುಂದಿನ ವಿಚಾರ ಮಾಡದೆ ಒಮ್ಮೆಲೆ ತನ್ನ ಸೈನಿಕರಿಗೆ- “ನೀವು ಈಗಲೆ ನದಿಯನ್ನು ದಾಟಿ ಶತ್ರುಗಳ ಮೇಲೆ ಬೀಳಬೇಕೆಂದು” ಅಜ್ಞಾಪಿಸಿದನು. ಆಗ ವಿಚಾರವಂತ ಸರದಾರರು ಇದು ಯೋಗ್ಯವಲ್ಲೆಂದು ಸುಲ್ತಾನನಿಗೆ ಬಹಳವಾಗಿ ಹೇಳಿದರು ; ಮತ್ತು ಹೀಗೆ ಅವಿಚಾರದಿಂದ ಶತ್ರುಗಳ ಮೇಲೆ ಬಿದ್ದರೆ, ಒಬ್ಬರೂ ತಿರುಗಿ ಹೋಗಲಿಕ್ಕಿಲ್ಲೆಂತಲೂ ಅವರು ಸ್ಪಷ್ಟವಾಗಿ ಸುಲ್ತಾನನಿಗೆ ಆಗ ಎಚ್ಚರವು ಹುಟ್ಟಲಿಲ್ಲ. ಆತನು ಪುನಃ ತನ್ನ ಸೈನಿಕರಿಗೆ- “ಈಗ ಸಿದ್ದವಾಗಿದ್ದ ತೆಪ್ಪಗಳ ಮೇಲಿಂದ ಹೋಗಬಹುದಾದಷ್ಟು ಸೈನಿಕರು ಹೋಗಲಿ, ಉಳಿದವರು ಆನೆಯ ಮೇಲಿಂದ ಹೋಗಲಿ. ಇಂದು ಬೆಳಗಾಗುವುದರೊಳಗಾಗಿ ಶತ್ರುಗಳ ಮೇಲೆ ಬೀಳಲಿಕ್ಕೇ ಬೇಕು,” ಎಂದು ಆಜ್ಞಾಪಿಸಿದನು. ಹೀಗೆ ಮಾಡಿದರೆ ನಾಶವಾದೀತೆಂದು ಸರದಾರರು ಮತ್ತೆ ಹೇಳಿದರು ; ಆದರೆ ಸುಲ್ತಾನನು ಅದಕ್ಕೆ ಒಪ್ಪಲಿಲ್ಲ. ತಾನು ಮುಂದೆ ಹೋಗದಿದ್ದರೆ,