ಪುಟ:Kannadigara Karma Kathe.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಳಸಂಚುಗಳು

೮೩

ಸಿದ್ಧತೆ ಇದ್ದಿಲ್ಲ. ಮೇಲೆ ಬಾದಶಹನು ತಮ್ಮ ಮನೆಯಲ್ಲಿ ಬಂದು ಕುಳಿತುಕೊಂಡಿದ್ದನು. ಆತನನ್ನು ಹೊರಗೆ ಹಾಕದ ಹೊರತು ಯಾವ ಕೆಲಸ ಮಾಡಲಿಕ್ಕೂ ಬರುವಹಾಗಿದ್ದಿಲ್ಲ. ವಿಜಯನಗರದ ಪವಿತ್ರ ಸಿಂಹಾಸನದ ಮೇಲೆ ಕೇವಲ ಸ್ವಾರ್ಥಾಭಿಲಾಷೆಯಿಂದ ತಿರುಮಲನು ಸುಲ್ತಾನನನ್ನು ಕೂಡ್ರಿಸಿದ್ದಕ್ಕಾಗಿ ಜನರು ಸಂತಾಪಗೊಂಡರು. ಘನವಾದ ಯೋಗ್ಯತೆಯ ರಾಯರ ಚರಣಗಳ ಮೇಲೆ ಬಹುಜನ ಮಾಂಡಲಿಕರಾಜರು ಶಿರಸ್ಸುಗಳನ್ನಿಡುತ್ತಿರಲು, ಅಂಥ ರಾಯನು ಈಗ ಮುಸಲ್ಮಾನ ಬಾದಶಹನ ಮುಂದೆ ತಲೆಬಾಗಿಸುವ ಪ್ರಸಂಗ ತಂದದ್ದಕ್ಕಾಗಿ ಪ್ರತಿ ಒಬ್ಬರು ತಿರುಮಲನ ಮೇಲೆ ಹಲ್ಲು ಕಡಿಯಹತ್ತಿದರು: ಆದರೆ ಮಾಡುತ್ತಾರೇನು? ಬಾದಶಹನನ್ನು ವಿಜಯನಗರದಿಂದ ಹೊರಗೆ ಹಾಕದ ಹೊರತು ಏನು ಮಾಡಲಿಕ್ಕೂ ಬರುವ ಹಾಗಿದ್ದಿಲ್ಲ. ತನ್ನ ಒಳಸಂಚು ಸಫಲವಾಗುವದೊತ್ತಟ್ಟಿಗೆ ಉಳಿದು, ಮುಸಲ್ಮಾನ ಬಾದಶಹನು ರಾಜಧಾನಿಯಲ್ಲಿ ಬಂದು ಕುಳಿತಿದ್ದಕ್ಕಾಗಿ ರಾಮರಾಜನಿಗೆ ಬಹಳ ಸಂತಾಪವಾಯಿತು. ಆದರೆ ಆತನು ಅದನ್ನೆಲ್ಲ ನುಂಗಿಕೊಂಡನು. ತಿರುಮಲನನ್ನು ಮೋಸಗೊಳಿಸಿ, ಅವನ ಮುಖಾಂತರ ಬಾದಶಹನನ್ನು ರಾಜಧಾನಿಯ ಹೊರಗೆ ಕಳಿಸಬೇಕೆಂದು ಆತನು ಯೋಚಿಸಿದನು. ಆಗ ರಾಮರಾಜನು ಪ್ರಮುಖರೊಡನೆ ತಿರುಮಲನ ಬಳಿಗೆ ಹೋಗಿ ವಿನಯದಿಂದ ಆತನನ್ನು ಕುರಿತು- “ನೀವು ನಮಗೆ ಸರ್ವಥಾ ವಂದ್ಯರು. ನಿಮ್ಮ ವಿಷಯವಾಗಿ ನಮ್ಮ ಮನಸ್ಸಿನಲ್ಲಿ ಸ್ವಲ್ಪವಾದರೂ ಸಂಶಯವಿಲ್ಲ; ಆದರೆ ಈಗಿನ ಪ್ರಸಂಗದಲ್ಲಿ ನೀವು ವಿಜಯನಗರದ ಮೇಲೆ ಬಹು ದೊಡ್ಡ ಸಂಕಟವನ್ನು ತಂದಿರುವಿರಿ. ಬಾದಶಹನನ್ನು ಕರೆತಂದು ಸತ್ಕರಿಸಿದ್ದೆಲ್ಲ ಸರಿಯೆ; ಆದರೆ ಇದರ ಪರಿಣಾಮವು ನೆಟ್ಟಗಾದೀತೆಂದು ತೋರುವದಿಲ್ಲ. ವೈರಿಯನ್ನು ಮನೆಯೊಳಗೆ ಕರಕೊಳ್ಳುವದು ಸುಲಭವು; ಆದರೆ ಆತನನ್ನು ಹೊರಗೆ ಹಾಕುವದು ಕಠಿಣವಷ್ಟೇ ಅಲ್ಲ, ಅಶಕ್ಯವೆಂತಲೂ ಹೇಳಬಹುದು. ನಮ್ಮ ಹಿಂದುಗಳ ರಾಜ್ಯವನ್ನು ನುಂಗಬೇಕೆಂದು ಜಪ್ಪು ಹಾಕಿಕೊಂಡು ಮುಸಲ್ಮಾನರ ಬಾದಶಹರು ಬಹುದಿವಸದಿಂದ ಕುಳಿತಿರುವರೆಂಬುದು ನಿಮಗೆ ಗೊತ್ತಿಲ್ಲವೆ ? ಹೀಗಿದ್ದು ನೀವು ಈಗ ಅನಾಯಾಸವಾಗಿ ಅವರ ಕಾರ್ಯಕ್ಕೆ ಅನುಕೂಲ ಮಡಿಕೊಟ್ಟಿರುವಿರಲ್ಲ? ಅದಕ್ಕೆ ಏನೆನ್ನಬೇಕು ? ನೀವು ಸ್ವಭಾವಿಕವಾಗಿ ಈ ಕಾರ್ಯ ಮಾಡಿದಿರಿ ; ಆದರೆ ಪರಿಣಾಮವು ಬಹು ಭಯಂಕರವಾಗುವ ಹಾಗೆ ತೋರುತ್ತದೆ. ನೀವು ಬಾ, ಅಂದಕೂಡಲೆ ಬಾದಶಹನು ಬಂದಂತೆ, ನೀವು ಹೋಗೆಂದ ಕೂಡಲೆ ಆತನು ಈಗ ಹೋಗಲಾರನು. ನೀವು ಹ್ಯಾಗಾದರೂ