ಪುಟ:Mahakhshatriya.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦.ಇನ್ನೊಬ್ಬರ ಕೈವಾಡ

ಶಚಿಯ ಅರಮನೆಯಲ್ಲಿ ಸುರಾಚಾರ್ಯರ ಅಭಿಮಂತ್ರಗಳಿಂದ ಶಚಿಯ ಉಪಚಾರದಿಂದ, ದೇವೇಂದ್ರನು ಎಚ್ಚರಗೊಂಡನು. ಆದರೂ ಆತನಿಗೆ ಮೈ ನಡುಗುತ್ತಿದೆ. ಸುರಾಚಾರ್ಯನು ಕೇಳಿದನು ; ‘ನೀನೇಕೆ ಮೂರ್ಛೆಗೊಂಡೆ?” ಇಂದ್ರನು ಹೇಳಿದನು ‘ದೇವ, ಏನು ಹೇಳಲಿ? ವೃತ್ರನು ‘ಹೊಡೆ ಹೊಡೆ’ ಎಂದು ಬಲವಂತ ಮಾಡಿದನು. ಮಹಾವಿಷ್ಣುವು ಸಮಯವು ಸನ್ನಿಹಿತವಾಗಿದೆ, ‘ವಜ್ರವನ್ನು ಆರೋಪಿಸಿ ಹೊಡೆ’ ಎಂದನು. ನಾನು ನನ್ನ ಬಲವನ್ನೆಲ್ಲಾ ಶೇಖರಿಸಿ, ವಜ್ರವನ್ನು ಆ ನೊರೆಯಲ್ಲಿ ಆರೋಪಿಸಿ ಹೊಡೆದೆನು. ಮಹಾವಿಷ್ಣುವಿನ ಕೃಪೆಯಿಂದ ತಲೆಯು ಹಾರಿಹೋಯಿತು. ಮತ್ತೆಲ್ಲಿ ಆ ತಲೆಯು ಮುಂಡಕ್ಕೆ ಸೇರಿ ಅನರ್ಥ ಮಾಡೀತೋ ಎಂದು, ಆ ಕೂಡಲೇ ಪಂಚಭೂತಗಳು ವಿಘಟಿತವಾಗುವಂತೆ ಆಜ್ಞೆ ಮಾಡಿದೆನು. ಇನ್ನು ಅಂತಃಕರಣದಲ್ಲಿರುವ ತನ್ಮಾತ್ರೆಗಳನ್ನು ಹಂಚಿಹಾಕಬೇಕು ಎಂದು ಯೋಚಿಸುತ್ತಿರುವಾಗ, ನನಗಿನ್ನು ಶಕ್ತಿಯೇನೂ ಉಳಿದಿಲ್ಲ ಎಂದು ಬೋಧೆಯಾಯಿತು. ಅಲ್ಲದೆ, ಒಂದು ಗಳಿಗೆಯ ಹಿಂದೆ ನನ್ನ ಎದುರಿಗೆ ಪರ್ವತಾಕಾರವಾಗಿ ನಿಂತಿದ್ದ ದೇಹವು ಪಂಚಭೂತಗಳು ಬೇರೆಯಾಗುತ್ತಲೂ ಕರಗಿಹೋಯಿತು. ಅದನ್ನು ನೋಡಿ ನನಗೆ ಹೇಗೆಹೇಗೋ ಆಯಿತು. ಮೈ ಮರೆಯಿತು. ಸದ್ಯಕ್ಕೆ ನೀವೆಲ್ಲ ಆ ವೇಳೆಗೆ ಬರದಿದ್ದರೆ ಏನಾಗುತ್ತಿತ್ತೋ ?”

“ಮಧ್ಯಾಹ್ನವೇ ನನಗೆ ಈ ದಿನ ಹೀಗಾಗಬಹುದು ಎನ್ನಿಸಿತ್ತು. ಅಲ್ಲದೆ ವೃತ್ರನ ಬಾಯಿಂದ ವಿಧಿಯು ‘ನಾಳಿನಿಂದ ನೀನು ಇಂದ್ರ’ ಎಂದು ಮೂರು ಸಲ ಹೇಳಿಸಿತು. ಅವೆಲ್ಲದರಿಂದ ಎಚ್ಚರಗೊಂಡು ನಾನೂ ಅಗ್ನಿವಾಯುಗಳೂ ಶಚಿಯೂ ನಿನ್ನ ಹಿಂದೆಯೇ ಕಾದಿದ್ದೆವು. ನಿನ್ನ ಆಯುಧಗಳೆಲ್ಲ ಬಂದುದನ್ನೂ ಕಂಡೆವು. ನಿನಗಿನ್ನು ದಿಗಿಲಿಲ್ಲ ಎಂದುಕೊಳ್ಳುತ್ತಿರುವಾಗ, ನೀನು ಹೊಡೆದೆ, ಬಿದ್ದೆ.”

“ನನಗಿನ್ನೂ ದಿಗಿಲು ದೇವ. ಆ ತ್ವಷ್ಟೃವು ಹಿಂದಿನ ದ್ವೇಷವನ್ನು ಸಾಧಿಸಿ, ಮತ್ತೆ ಆ ಪ್ರೇತಕ್ಕೆ ರೂಪವನ್ನು ಕೊಟ್ಟರೆ ಗತಿಯೇನು? ಎಂದು ನನಗೆ ಅಂಜಿಕೆಯಾಗುತ್ತಿದೆ.”

“ಆ ದಿಗಿಲು ನಿನಗೆ ಬೇಕಿಲ್ಲ. ಮಹಾಪೂಜೆಯಾದ ದಿನ ದಧೀಚಿಯು