ಪುಟ:Mahakhshatriya.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತ್ವಷ್ಟೃವಿನ ಮೋಹಕ್ಕೆ ಔಷಧವನ್ನು ಕೊಟ್ಟಿದ್ದಾನೆ. ಆದರೆ, ಆ ಶುಕ್ರಾಚಾರ್ಯನು ಏನು ಮಾಡುವನೋ ನೋಡಬೇಕು.”

“ಆತನೇನು ಮಾಡಬಹುದು?”

“ಆ ಪ್ರೇತಕ್ಕೆ ಶರೀರವನ್ನು ಕೊಡಬಹುದು. ನೀನು ಪಂಚಭೂತಗಳನ್ನು ಒಡೆದಿರುವುದರಿಂದ ಅದು ಸಾಧ್ಯವಿಲ್ಲ ಎನ್ನುವೆಯೇನೋ? ಆತನಿಗೆ ಸಂಜೀವಿನೀ ವಿದ್ಯೆಯು ಗೊತ್ತು ಅದನ್ನು ವ್ಯುತ್ಕ್ರಮವಾಗಿ ಉಪಯೋಗಿಸಿ ಪಂಚಭೂತಗಳನ್ನು ಮತ್ತೆ ಸೇರುವಂತೆ ಮಾಡಿದರೆ ಏನು ಮಾಡುತ್ತೀಯೆ? ಅದರಿಂದ, ಒಂದು ಕೆಲಸ ಮಾಡು. ನಿದ್ರಾದೇವಿಯನ್ನು ಬರಮಾಡು ಹೇಳುತ್ತೇನೆ.”

ಇಂದ್ರನು ನಿದ್ರಾದೇವಿಯನ್ನು ಧ್ಯಾನಿಸಿದನು. ಆಕೆಯು ಬಂದು ದೇವರಾಜನಿಗೆ ಕೈಮುಗಿದು “ಏನಪ್ಪಣೆ?” ಎಂದಳು ಸುರಾಚಾರ್ಯನು ಹೇಳಿದನು, - “ನೀನೀಗ ಶುಕ್ರಾಚಾರ್ಯನ ಬಳಿ ಹೋಗು. ಅಲ್ಲಿ ವೃತ್ರನ ಪ್ರೇತವಿರುವುದು. ಅದಕ್ಕೆ ಆತನು ಸಂಜೀವಿನೀ ವಿದ್ಯೆಯನ್ನು ಉಪದೇಶ ಮಾಡಿಯಾನು. ಹಾಗೇನಾದರೂ ಇದ್ದರೆ, ವೃತ್ರನ ಪ್ರೇತಕ್ಕೆ ನಿದ್ದೆಯು ಬರುವಂತೆ ಮಾಡು. ಶುಕ್ರಾಚಾರ್ಯನ ಉಪದೇಶವು ಅದಕ್ಕೆ ಸಂಪೂರ್ಣವಾಗಿ ಹಿಡಿಯದಂತೆ ಮಾಡು. ಈ ದೇವಕಾರ್ಯವನ್ನು ನಿರ್ವಹಿಸಿ ಬಂದು ನಡೆದುದೆಲ್ಲವನ್ನೂ ದೇವರಾಜನಿಗೆ ವರದಿ ಮಾಡು.”

ನಿದ್ರಾದೇವಿಯು ‘ಅಪ್ಪಣೆ’ ಎಂದು ಹೊರಟುಹೋದಳು.

ಸುರಾಚಾರ್ಯನು ಮತ್ತೆ ಇಂದ್ರನಿಗೆ ಹೇಳಿದನು; ನಾಳೆಯ ದಿನ ದೇವಸಭೆಯಾಗಬೇಕು. ಅದರಿಂದ ಸಿಂಹಾಸನಾಭಿಮಾನೀ ದೇವತೆಯನ್ನೂ ಕರೆದು ಆಜ್ಞಾಪಿಸು. ಇಂದ್ರನು ಆಕೆಯನ್ನು ಕರೆದನು. ಆಕೆಯು ಬಂದು ಕೈಮುಗಿದು “ಏನಪ್ಪಣೆ?” ಎಂದಳು. ಇಂದ್ರನು ಮರುದಿನ ನಡೆಯಬೇಕಾದ ದೇವಸಭೆಯ ವಿಷಯವನ್ನು ಹೇಳಿದನು. ಆಕೆಯು ವಿನಯದಿಂದ, “ದೇವರಾಜ, ಇದೇಕೆ ತಿಳಿಯದವನಂತೆ ಮಾತನಾಡುತ್ತಿರುವೆ? ನಿನ್ನನ್ನು ನೀನು ಚೆನ್ನಾಗಿ ಪರೀಕ್ಷೆ ಮಾಡಿಕೊ. ನಿನಗೆ ವೃತ್ರಹತ್ಯಾಪಾತಕವು ಬಂದಿರುವುದು. ಸುರಾಚಾರ್ಯನೂ ಅದನ್ನು ನೋಡಬಲ್ಲನಾದರೂ ನೋಡಿಲ್ಲ. ಶಚೀದೇವಿಯೂ ಅಗ್ನಿದೇವ ವಾಯುದೇವರೂ ನಿನ್ನ ಮೇಲಣ ಅಭಿಮಾನದಿಂದ ಕುರುಡಾಗಿರುವರು. ಆ ಹತ್ಯೆಯನ್ನು ಕಟ್ಟಿಕೊಂಡು ನೀನೆಂತು ದೇವಸಿಂಹಾಸನವನ್ನು ಹತ್ತುವೆ ? ಅದರಿಂದ, ಮೊದಲು ಹತ್ಯೆಯನ್ನು ನಿವಾರಿಸಿಕೊ. ಆನಂತರ ನಿನ್ನ ಸಿಂಹಾಸನವನ್ನು ನೀನು ಏರಲು ಯಾರಡ್ಡಿ ?” ಎಂದಳು.