ಪುಟ:Mahakhshatriya.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇಂದ್ರನು ಆಕೆಯ ಮಾತನ್ನು ಕೇಳಿ ಗಾಬರಿಯಾದನು. ಸುರಾಚಾರ್ಯನು ನೋಡಿ, “ಆತುರದಲ್ಲಿ ನಾನೂ ನೋಡಲಿಲ್ಲ. ದೇವಮೃತ್ಯುವು ಕಳೆಯಿತಲ್ಲಾ ಎಂದು ಅತ್ತಕಡೆ ಸಂಭ್ರಮದಲ್ಲಿದ್ದು ಬಿಟ್ಟೆನು. ಆಕೆಯ ಮಾತು ನಿಜ. ಈ ಹತ್ಯೆಯನ್ನು ಆದಷ್ಟು ಬೇಗ ಕಳೆದುಕೊಳ್ಳಬೇಕು” ಎಂದನು.

ಇಷ್ಟೆಲ್ಲಾ ಆಗುವುದರೊಳಗಾಗಿ ನಿದ್ರಾದೇವಿಯು ಮತ್ತೆ ಬಂದು ಕಾಣಿಸಿಕೊಂಡು “ದೇವರಾಜ, ನಿನ್ನ ಅಪ್ಪಣೆಯಂತೆ ನಡೆಸಿದ್ದೇನೆ. ಆದರೂ ಶುಕ್ರಾಚಾರ್ಯನೂ ನಿನ್ನನ್ನು ಹಿಂಸಿಸಬೇಕೆಂದು ಕೃತಸಂಕಲ್ಪನಾಗಿದ್ದಾನೆ. ಆತನು ಪ್ರೇತವನ್ನು ಭೂತಸಂಪಾದನಕ್ಕೆ ಪ್ರೇರಿಸಿದ್ದಾನೆ. ಅದು ಆ ಕಾರ್ಯವನ್ನು ಆರಂಭಿಸಿದೆ. ಇನ್ನು ಅಪ್ಪಣೆಯಾದರೆ ಬರುವೆನು” ಎಂದು ಕೈಮುಗಿದು ಹೊರಟುಹೋದಳು.

ಸುರಾಚಾರ್ಯನು “ಇದೊಂದು ಹೊಸ ಸಂಕಟವು ಬಂತು” ಎಂದು ನೊಂದುಕೊಂಡನು. ಹಾಗೆಯೇ ಯೋಚಿಸಿ, “ಶಚೀದೇವಿ, ಈ ಭೂತಗಳ ಪ್ರಪಂಚವು ನಿನ್ನದು. ವೃತ್ರನು ಭೂತಾಂಶವನ್ನು ಸಂಗ್ರಹಿಸಿ, ಶರೀರವನ್ನು ಮಾಡಿಕೊಳ್ಳದಂತೆ ನೀನು ಎಚ್ಚರವಾಗಿದ್ದು ನಿನ್ನ ಗಂಡನಿಗೆ ಸಹಾಯ ಮಾಡು” ಎಂದನು.

ಶಚಿಯು “ಅಪ್ಪಣೆ” ಎಂದಳು. ಧ್ಯಾನಮಾಡಿ ನೋಡಿದಳು. ಭೂತಭೂತಗಳಿಗೂ “ನನ್ನ ಅಪ್ಪಣೆಯಿಲ್ಲದೆ ನೀವು ಯಾರಿಗೂ ಏನನ್ನೂ ಕೊಡಕೂಡದು” ಎಂದಳು. ಪಂಚಭೂತಾಭಿಮಾನೀ ದೇವತೆಗಳೂ ಬಂದು ಆ ಅಪ್ಪಣೆಯನ್ನು ಶಿರಸಾವಹಿಸಿದರು.

ಆಚಾರ್ಯನು ಮತ್ತೆ ಹೇಳಿದನು ; “ದೇವರಾಜ, ನೀನೂ ಅಷ್ಟೇ ! ಶಚಿಯು ಬೇಕೆಂದಾಗ ನೀನು ಆಕೆಗೆ ಸಾಯುಧನಾಗಿ ಸಹಾಯಮಾಡು” ಎಂದನು. ದೇವರಾಜನೂ ‘ಅಪ್ಪಣೆ’ ಎಂದು ಕೈಮುಗಿದನು. ಆತನಿಗೆ ‘ತನಗೆ ಬಂದಿರುವ ಹತ್ಯೆಯನ್ನು ಕಳೆದುಕೊಳ್ಳುವುದು ಎಂತು ?’ ಎಂಬುದೇ ದೊಡ್ಡ ಯೋಚನೆಯಾಗಿದೆ.

ಆತನು ತಡೆಯದೆ ತನ್ನ ಸಮಸ್ಯೆಯನ್ನು ಆಚಾರ್ಯನಿಗೆ ತಿಳಿಸಿದನು. ಆತನು “ನಾನು ಅದನ್ನೇ ಕುರಿತು ಯೋಚಿಸುತ್ತಿದ್ದೇನೆ. ಅದಕ್ಕೆ ಒಂದು ಅಶ್ವಮೇಧವನ್ನು ಮಾಡಬೇಕಾದೀತು” ಎಂದನು.

ಇನ್ನೊಂದು ಗಳಿಗೆಯಂದು, ತಮಗೆ ಲಭಿಸಿದ ಅನಿರೀಕ್ಷಿತವಾದ ಅದ್ಭುತ ವಿಜಯವನ್ನು ಕುರಿತು ಮಾತಾಡುತ್ತಿದ್ದು, ಸುರಾಚಾರ್ಯನೂ ಅಗ್ನಿವಾಯುಗಳೂ ಶಚಿಯನ್ನೂ ಇಂದ್ರನನ್ನೂ ಬೀಳ್ಕೊಂಡು ಹೊರಟರು.