ಪುಟ:Mahakhshatriya.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆಯಿಂದ ಈಚೆಗೆ ಬಂದ ಮೇಲೆ ಆಚಾರ್ಯನು ಅಗ್ನಿವಾಯುಗಳನ್ನು ಕರೆದು ಗುಟ್ಟಾಗಿ, “ನಾವು ಇಂದ್ರಸಿಂಹಾಸನವನ್ನು ಏರುವುದಕ್ಕೆ ಯೋಗ್ಯತೆಯುಳ್ಳ ಇನ್ನೊಬ್ಬನನ್ನು ನೋಡಿರಬೇಕು. ಇಂದ್ರನು ಅಶ್ವಮೇಧವಾಗುವವರೆಗೂ ಸಿಂಹಾಸನವನ್ನು ಹತ್ತುವಂತಿಲ್ಲ. ನೋಡಿದರೆ ಸದ್ಯದಲ್ಲಿ ಅಶ್ವಮೇಧವಾಗುವಂತಿಲ್ಲ” ಎಂದನು.

ಅಗ್ನಿವಾಯುಗಳು ಪರಸ್ಪರ ಮುಖ ನೋಡಿಕೊಂಡರು. “ಸರಿ, ಪಾತಾಳ ಲೋಕವಾಯಿತು. ಇನ್ನು ಮಧ್ಯಮಲೋಕದವನೂ ಒಬ್ಬನು ಇಂದ್ರನಾಗಬೇಕೇನೋ! ಹಾಗೇನಾದರೂ ಆದರೆ, ಇನ್ನು ಯಾರು? ಆ ನಹುಷಚಕ್ರವರ್ತಿಯೇ ಆಗಬೇಕು ಎಂದರು.

ಆಚಾರ್ಯನು “ಹೌದು, ಆತನು ಧರ್ಮಪರ. ಆದರೂ ಆಗಬಹುದು. ಆದರೆ ಇಂದ್ರನನ್ನು ವರಿಸುವ ಕೆಲಸ ನಮ್ಮದಲ್ಲ. ದೇವ, ಋಷಿ, ಪಿತೃಗಳೆಲ್ಲ ಸೇರಿದ ಸಭೆಯಲ್ಲಾಗಬೇಕು. ಅಂತೂ ಆ ವಿಷಯ ಮನಸ್ಸಿನಲ್ಲಿರಲಿ” ಎಂದು ಒಬ್ಬರನ್ನೊಬ್ಬರು ಬೀಳ್ಕೊಂಡರು.

* * * *