ಪುಟ:Mahakhshatriya.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಭೆಯ ಮಧ್ಯದಲ್ಲಿ ವಿರಚಿತವಾಗಿದ್ದ ಕಮಲಾಸನದ ಮೇಲೆ ಪದ್ಮಾಸನದಲ್ಲಿ ಚ್ಯವನ ಭಗವಾನರು ಕುಳಿತರು. ಅವರ ಬಲಗಡೆ ಬೆಳ್ಳಿಯ ಭದ್ರಾಸನದಲ್ಲಿ ವೀರಾಸನದಲ್ಲಿ ಅರಸನು ಕುಳಿತನು. ಮಂತ್ರಿ ಪುರೋಹಿತರಾದಿಯಾಗಿ ಸಭಿಕರೆಲ್ಲರೂ ಎಂದಿನಂತೆ ತಮ್ಮ ತಮ್ಮ ಆಸನಗಳಲ್ಲಿ ಕುಳಿತರು. ರಾಜಸ್ತ್ರೀಯರೂ ರಾಜಾಧಿಕಾರಿಗಳೂ ಧರಿಸಿರುವ ಜೀವರತ್ನಾಭರಣಗಳ ಕಾಂತಿಯು ಇಳಿಯುತ್ತಿರುವ ಸೂರ್ಯನ ಬಿಸಿಲನ್ನು ಹಿಡಿದು ತಂದು ಶೇಖರಿಸಿಟ್ಟಿರುವ ಕಿರಣಕೆಂಡಗಳೋ ಎಂಬಂತೆ ಪ್ರಜ್ವಲಿಸುತ್ತಿದ್ದುವು. ಸಭಿಕರು ಧರಿಸಿರುವ ಪುಷ್ಪಮಾಲೆಗಳ ಸುಗಂಧವು ಸಜ್ಜನರ ಮನಸ್ಸಿನ ನಿರ್ವಿಷಯಾನಂದದಂತೆ ಸರ್ವವ್ಯಾಪಿಯಾಗಿ ಎಲ್ಲರನ್ನೂ ದೇವಲೋಕಕ್ಕೆ ಕರೆದೊಯ್ಯುವ ವಿಮಾನವೋ ಎಂಬಂತೆ ಮೇಲಕ್ಕೆ ಚಿಮ್ಮುತ್ತಿತ್ತು.

ತೇಜಸ್ವಿಯಾದ ಅರಸನ ಪ್ರಭಾವದ ಮುಂದೆ ನಿಷ್ಪ್ರಭರಾಗಿ ವಿನೀತರಾಗಿ ನ್ಯಾಯಬದ್ಧರಾಗುವ ಸಾಹಸಿಗಳಂತೆ ಆಚಾರದಂತೆ ಇಟ್ಟಿದ್ದ ತುಪ್ಪದ ದೀಪಗಳು ರತ್ನಾಭರಣಗಳ ಕಾಂತಿಗೆ ಸೋತಂತೆ ಮಂಕಾಗಿ ಪಂಜರ ಬದ್ಧವಾಗಿ ಉರಿಯುತ್ತಿದ್ದವು. ಧೂಪದಾನಿಗಳು ನಡೆಯಲಿರುವ ಧರ್ಮಕಥಾ ಶ್ರವಣದಿಂದ ತೃಪ್ತವಾಗಿವೆಯೋ ಎಂಬಂತೆ ಸಂತೋಷದಿಂದ ಧೂಪಮೇಘಗಳನ್ನು ಸೃಜಿಸುತ್ತಿದ್ದವು. ಕೈವಾರಿಗಳು ತಮ್ಮ ದೃಢತಾರಸ್ವರದಿಂದ ಸಭೆಯನ್ನು ಎಚ್ಚರಿಸಿದ ಮೇಲೆ ಬ್ರಹ್ಮರ್ಷಿಗಳ ಘಂಟಾನಾದದಂತಹ ಗಂಭೀರ ಮನೋಹರವಾದ ಕಂಠವು ಕೇಳಿಸಿತು. ಪ್ರವಚನವು ಆರಂಭಿಸಿತು.

ಭಗವಾನರು ಆರಂಭಿಸಿದರು : “ನಾವು ಇಲ್ಲಿಂದ ಹೊರಡುವ ಕಾಲವು ಸನ್ನಿಹಿತವಾಗಿದೆ. ಆದ್ದರಿಂದ ನಾವಾಗಿ ಹೇಳುವುದನ್ನು ಕಡಿಮೆ ಮಾಡಿ, ಇತರರ ಮನಸ್ಸಿನಲ್ಲಿ ಇರಬಹುದಾದ ಸಂದೇಹಗಳನ್ನು ವಿಮರ್ಶಿಸಿ ಸಾಧ್ಯವಾದರೆ ನಿವಾರಿಸಲು ಪ್ರಯತ್ನಿಸೋಣ ಎಂದುಕೊಂಡಿದ್ದೇನೆ. ಆದ್ದರಿಂದ, ಈ ಸಭೆಯಲ್ಲಿ ಯಾರಾದರೂ ಮುಂದೆ ಬಂದು ತಮ್ಮ ತಮ್ಮ ಸಂದೇಹಗಳನ್ನು ಕೇಳಬಹುದು.”

ರಾಜನು ಪುರೋಹಿತನ ಮುಖವನ್ನು ನೋಡಿದನು. ಆತನು ಅದನ್ನು ಅರ್ಥಮಾಡಿಕೊಂಡು ಎದ್ದು ನಿಂತನು. ಆಡಂಬರವಿಲ್ಲದ ಸುಲಭವಾದ ಹಗುರವಾದ ಆತನ ಉಡುಪಿನಂತೆಯೇ ಆತನೂ ಸರಳವಾಗಿ ಸಹಜವಾಗಿ ಪ್ರಶ್ನೆ ಮಾಡಿದನು : “ಭಗವಾನ್, ಧರ್ಮಕ್ಕೆ ಜಯವಾಗಲಿ, ಕೇಳುವ ನಮಗೂ ಹೇಳುವ ತಮಗೂ ಈ ವಿಷಯವನ್ನು ಆಲಿಸುವ ಈ ಸಭೆಯವರಿಗೂ ಮಂಗಳವಾಗಲಿ. ತಾವು ಹೇಳುವುದು ನಮಗೆ ಅರ್ಥವಾಗಲಿ. ದೇವ, ಸಂದೇಹಗಳು ಬರುವುದೇಕೆ ?”

ಭಗವಾನರು ನಕ್ಕರು : “ಬ್ರಹ್ಮನ್, ನೀರಿನ ಸ್ವಭಾವ ಅಲೆಯುತ್ತಿರುವುದು.