ಪುಟ:Mahakhshatriya.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಆಗಲಿ, ಮನಸ್ಸಿಗೆ ಅರಿವು ಮರೆವು ಎಂದು ಎರಡು ಮುಖ. ನಕ್ಷತ್ರಗಳಲ್ಲಿ ಕೆಲವು ಕೆಂಪು ನೀಲಿ ಬೆಳಕುಗಳನ್ನು ಚೆಲ್ಲುತ್ತ ಒಂದು ಘಳಿಗೆ ಹಾಗೆ, ಒಂದು ಘಳಿಗೆ ಹೀಗೆ ಕಾಣುವಂತೆ, ಮನಸ್ಸೂ ಈ ಎರಡು ಮುಖಗಳಲ್ಲಿ ಒಂದೊಂದನ್ನು ತೋರುತ್ತಿರುತ್ತದೆ. ಅರಿವಿನ ಮುಖ ಕಂಡಾಗ ಅರಿತೆವು ಎನ್ನುತ್ತೇವೆ. ಮರೆವಿನ ಮುಖ ಕಂಡಾಗ ಮರೆತೆವು ಎಂದುಕೊಳ್ಳುತ್ತೇವೆ. ಮರೆವು ಅರಿವುಗಳು ಒಂದರಲ್ಲಿ ಒಂದು ವ್ಯಾಪಿಸಿದಾಗ, ಮರೆವೋ ಅರಿವೋ ಎಂಬ ನಿಶ್ಚಯವಿಲ್ಲದಾಗ ಸಂದೇಹ. ನೀರಲ್ಲಿ ಬಿದ್ದ ಪ್ರಾಣಿಯು ಸುಮ್ಮನೆ ಕೈಕಾಲು ಬಡಿಯುತ್ತಿದ್ದರೆ ತಪ್ಪದೆ ದಡಕ್ಕೆ ಬಂದು ಸೇರಿಕೊಳ್ಳುವಂತೆ, ತಲೆದೋರಿದ ಸಂದೇಹವನ್ನು ಮಥಿಸುತ್ತಿದ್ದರೆ, ಮರೆವಿನ ಮುಖವು ತಿರುಗಿ ಅರಿವಿನ ಮುಖವು ಕಾಣಿಸುವುದು.”

“ಮರೆವೇ ಅರಿವಾಗುವುದಾದರೆ ಗುರುವಿನ ಉಪದೇಶ ಬೇಕು ಎನ್ನುವುದೇಕೆ?”

“ಮರಿಗೆ ಹಾರುವುದನ್ನು ತಾಯಿಹಕ್ಕಿ ಕಲಿಸಿಕೊಡುವಂತೆ ಗುರುವು ಉಪದೇಶಮಾಡಿ ಉದ್ಧರಿಸುವನು. ಆದರೆ ಅದೇ ಹಕ್ಕಿಯು ಹಸುವಿಗೊ ಹುಡುಗನಿಗೋ ಹಾರುವುದನ್ನು ಕಲಿಸಲು ಸಾಧ್ಯವೇನು ? ಅದರಂತೆ, ಉಪದೇಶವು ಮನಸ್ಸಿನಲ್ಲಿ ಅವ್ಯಕ್ತವಾಗಿರುವುದನ್ನು ವ್ಯಕ್ತಪಡಿಸುವುದು. ಭಾವಿಯಲ್ಲಿರುವ ನೀರನ್ನು ಸೇದಿ ಹೊಯ್ದು ತಾಪವನ್ನು ಆರಿಸುವಂತೆ, ಶಿಷ್ಯನ ಮರೆವಿನ ಮೇಲೆ ತನ್ನ ಅರಿವಿನ ಬೆಳಕನ್ನು ಚೆಲ್ಲಿ, ಅದನ್ನೇ ಅರಿವು ಮಾಡಿ ತೋರಿಸುವವನು ಗುರುವು. ಅಲ್ಲಿ ಇಲ್ಲದ ಅರಿವನ್ನು ಆತನು ತಂದು ತುಂಬುವುದಿಲ್ಲ. ಈ ದೃಷ್ಟಿಯಿಂದ ನೋಡಿದರೆ, ಆಗ ಸಂದೇಹವು ಅರಿವು-ಮರೆವುಗಳ ಸಂಧಿಸ್ಥಾನ. ಶ್ರದ್ಧಾವಂತನು ಮರೆವಿನ ಮೇರೆಯನ್ನು ಮೀರಿ ಅರಿವನ್ನು ತಟ್ಟುವನು. ಉಯ್ಯಾಲೆಯು ತೂಗುತ್ತಿರುವಾಗ ತನಗೆ ಬೇಕಾದ ಕಡೆಗೆ ಹಾರಬಹುದು ಹೇಗೋ ಹಾಗೆ ಇಲ್ಲಿಯೂ, ಸಂದೇಹದಲ್ಲಿಯೂ ಹಾಗೂ ಆಗಬಹುದು, ಹೀಗೂ ಆಗಬಹುದು. ಗುರುವನ್ನು ಪಡೆದವನು ತಪ್ಪದೆ ಅರಿವಿನ ಕಡೆಗೇ ತಿರುಗುವನು. ಹಾದಿ ಬಲ್ಲವನ ಹಿಂದೆ ಹೋದವನಿಗೆ ಹಾದಿ ತಪ್ಪುವ ಭೀತಿಯುಂಟೆ ? ಅದರಂತೆ.”

ಪುರೋಹಿತನು ಕೈಮುಗಿದು ತನ್ನ ಆಸನದಲ್ಲಿ ಕುಳಿತನು.

ರಾಜಗುರುವು ಚಕ್ರವರ್ತಿಯ ಅಪ್ಪಣೆ ಪಡೆದು ಎದ್ದುನಿಂತನು. ಕೇಳಿದನು: “ಭಗವಾನ್, ನಾವು ಮನುಷ್ಯರು. ನಮಗೆ ಸತ್ಯದರ್ಶನವು ಆಗುವುದು ಹೇಗೆ ? ಅಪ್ಪಣೆಯಾಗಬೇಕು.”

ಭಗವಾನರು ಮಂದಸ್ಮಿತವದನರಾಗಿ ಮತ್ತೆ ಹೇಳಿದರು : “ರಾಜಗುರುಗಳ