ಪುಟ:Mahakhshatriya.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂತಸ್ತಿನ ಬಲದಿಂದ ನಿಂತಿರುವಂತೆ, ಸಮಾಜದ ಉತ್ತಮ ವ್ಯಕ್ತಿಯು ಸಮಾಜದ ಸಂಬಂಧವೆನ್ನುವುದನ್ನು ಮರೆಯಬಾರದು’ ಎನ್ನುವರು.

`“ನೀನು ಈಗ ಬ್ರಾಹ್ಮಣನು. ನೀನು ನಿನ್ನ ನಿತ್ಯನೈಮಿತ್ತಿಕ ಕರ್ಮಗಳನ್ನು ಮಾಡುತ್ತ ವಿಶ್ವದ ಯೋಗಕ್ಷೇಮಗಳನ್ನು ನೋಡಿಕೊಳ್ಳುವುದು ನಿನ್ನ ಕರ್ತವ್ಯವು. ಅದರಿಂದಲೇ, ಆ ರೀತಿಯಾದ ಗುರುತಮ ಭಾರವನ್ನು ವಹಿಸಿದುದರಿಂದಲೇ ನಿನ್ನನ್ನು ಮೂರ್ಧಾಭಿಷಿಕ್ತನಾದ ರಾಜನೂ ನಮಸ್ಕಾರಾದಿಗಳಿಂದ ಗೌರವಿಸುವುದು. ಯೋಧನ ಕತ್ತಿಯಂತೆ ನೀನು ಯಾವಾಗಲೂ ಕರ್ತವ್ಯಸಿದ್ಧನಾಗಿರಬೇಕು. ಬೆಂಕಿಯು ಯಾವಾಗಲೂ ಉರಿಯುತ್ತಲೇ ಇರುವಂತೆ, ನೀನು ಯಾವಾಗಲೂ ಲಕ್ಷ್ಯಾನುಸಂಧಾನದಲ್ಲಿಯೇ ಇರಬೇಕು. ಇಲ್ಲದಿದ್ದರೆ ಆರಿದ ಬೆಂಕಿಯ ಗುರುತಾದ ಬೂದಿ ಇದ್ದಿಲುಗಳನ್ನು ಹೊರಕ್ಕೆಸೆಯುವಂತೆ, ಸಮಾಜವು ನಿನ್ನನ್ನು ಹೊರಕ್ಕೆ ಎಸೆಯಬಾರದೇಕೆ ? ಆಸ್ತಿಯು ನಿನ್ನ ತಂದೆಯದೇ ಆದರೂ ನಿನಗದು ಇಲ್ಲ ಎಂಬುದೇ ಈ ಎಸೆಯುವಿಕೆ. ಮಹಾಸ್ವಾಮಿಯವರು ಕೃಪೆಮಾಡಿ, ನಿನಗೆ ಆಸ್ತಿಯನ್ನು ಸಂಪಾದಿಸಿಕೊಳ್ಳುವುದಕ್ಕೆ ಅವಕಾಶವನ್ನು ಕೊಟ್ಟಿರುವರು. ಯಾವನೊಬ್ಬನೇ ಆಗಲಿ ಜನ್ಮಮಾತ್ರದಿಂದ ಸಂಪಾದಿಸುವುದು ಕೆಲವು ಅಸ್ಪಷ್ಟಾಧಿಕಾರಗಳನ್ನು ಮಾತ್ರ. ಆ ಅಧಿಕಾರಗಳು ಅವನವನ ಕರ್ಮಗಳಿಂದ ಊರ್ಜಿತವಾಗಬೇಕು. ಅದರಿಂದ, ನೀನು ಈ ಅಸ್ಪಷ್ಟಾಧಿಕಾರವನ್ನು ಹಿಡಿದು ‘ನನ್ನ ತಂದೆಯ ಆಸ್ತಿಗೆ ನಾನು ಭಾಗಿ’ಯೆನ್ನುವುದಕ್ಕಿಂತ, “ನನಗೆ ಅರ್ಹತೆಯಿರುವುದರಿಂದ ಇದು ನನಗೆ ಬರಬೇಕು’ ಎನ್ನುವುದು ಸರಿ.”

`ವಾದಿಯು ಅದನ್ನು ಕೇಳಿ ನಿರುತ್ತರನಾಗಿ, ರಾಜಾಜ್ಞೆಯನ್ನು ಪಾಲನೆ ಮಾಡುವುದಾಗಿ ಮಾತುಕೊಟ್ಟು ಅಪ್ಪಣೆ ಪಡೆದು ಹೊರಟುಹೋದನು.

`ಎರಡನೆಯ ವಾದಿಯು ಬಂದನು. ಅರಸನು ಕೇಳಿದನು : “ನಿನ್ನ ಮಾತೇನು?” ವಾದಿಯು ಹೇಳಿದನು : “ದೇವ, ದೇಶಾಂತರದಲ್ಲಿನ ವ್ಯಾಪಾರಿಯೊಬ್ಬನಿರುವನು. ಆತನು ನನ್ನನ್ನು ಮೆಚ್ಚಿಕೊಂಡು, ನಾನು ಅಲ್ಲಿಯೇ ನಿಲ್ಲುವುದಾದರೆ ನನ್ನ ಮಗಳನ್ನೂ ಆಸ್ತಿಯನ್ನೂ ಕೊಡುವುದಾಗಿ ವಾಗ್ದಾನ ಮಾಡಿರುವನು. ನಾನು ಅಲ್ಲಿಗೆ ಹೋಗಬೇಕೆಂದಿರುವೆನು. ಆದ್ದರಿಂದ ಇಲ್ಲಿರುವ ನನ್ನ ಪಾಲಿನ ಆಸ್ತಿಯನ್ನು ಕೊಡಿಸಿಕೊಡಬೇಕು.”

`“ನಿನಗೆ ಅಣ್ಣ ತಮ್ಮಂದಿರು ಇರುವರೋ?”

`“ಒಬ್ಬ ಅಣ್ಣ. ಒಬ್ಬ ತಮ್ಮ ಇದ್ದಾರೆ ಮಹಾಪ್ರಭು.”

`“ನಿಮ್ಮ ಆಸ್ತಿಯೆಷ್ಟು?”