ಪುಟ:Mahakhshatriya.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಮಹಸ್ವಾಮಿ, ನನ್ನ ಮೇಲಿನ ಆರೋಪಗಳನ್ನು ನಾನು ಸುಳ್ಳೆನ್ನುವುದಿಲ್ಲ. ಆದರೂ ನಾನು ನನ್ನ ರಾಜ್ಯದಲ್ಲಿ ಪ್ರಜೆಗಳನ್ನು ವತ್ಸಲನಾಗಿ ಕಾಪಾಡುತ್ತಿದ್ದೇನೆಂಬುದನ್ನು ಆರೋಪಿಗಳೇ ಹೇಳುತ್ತಿದ್ದಾರೆಂಬುದನ್ನು ತಮ್ಮ ಅವಗಾಹನಕ್ಕೆ ತರುತ್ತೇನೆ. ನಾನು ಕ್ಷತ್ರಿಯ, ನನಗೆ ಯುದ್ಧವಿಲ್ಲದೆ ಒಂದು ದಿನವೂ ಇರಲಾಗುವುದಿಲ್ಲ. ನನ್ನ ಅಂತಃಪುರದಲ್ಲಿ ನಾನು ಎಷ್ಟು ಅಭಿಮಾನಪಡುವೆನೋ, ಅದೇ ಅಭಿಮಾನದಿಂದ ನಾನು ನನ್ನ ಸೇನೆಯನ್ನು ನೋಡುತ್ತಿದ್ದೇನೆ. ನನಗೆ ಯುದ್ಧವು ನಿತ್ಯಕರ್ಮವಾಗಿ ಹೋಗಿದೆ. ಅದಿಲ್ಲದಿದ್ದರೆ ಬದುಕುವುದಕ್ಕೇ ಸಾಧ್ಯವಿಲ್ಲ. ಅದರಿಂದ ಹೀಗೆ ಮಾಡುತ್ತಿದ್ದೇನೆ. ಪರರು ಯಾವಾಗಲೂ ಪರರೇ ! ಸಾಧ್ಯವಾಗಿದ್ದರೆ ಅವರು ನನ್ನನ್ನು ಹಿಂದಕ್ಕೆ ಅಟ್ಟುತ್ತಿದ್ದರು. ಅದು ಸಾಧ್ಯವಿಲ್ಲೆಂದು ಸಾರ್ವಭೌಮರಾದ ತಮ್ಮಲ್ಲಿ ದೂರಿದ್ದಾರೆ. ಸಮುದ್ರವು ಹಗಲು ಇರುಳು ಎನ್ನದೆ ತರಂಗ ಚಂಚಲವಾಗಿರುವಂತೆ, ನನಗೆ ನಿದ್ದೆಯಲ್ಲಿಯೂ ಕೂಡ ಆಯುಧ ಸಂಚಾಲನದ ಕನಸುಗಳೇ ಆಗುವಷ್ಟು ಕದನ ಕುತೂಹಲ ಇದ್ದುದನ್ನು ಮಹಾಪಾದಗಳಲ್ಲಿ ಬಿನ್ನವಿಸಿದ್ದೇನೆ. ಯಥಾಯೋಗ್ಯವಾಗಿ ಆಜ್ಞೆಯಾಗಬಹುದು.

“ಆಜ್ಞೆಯನ್ನು ಪಾಲಿಸುವೆಯೋ ?”

“ನನ್ನ ಸ್ವಭಾವವನ್ನು ಪರಿಗಣಿಸಿ ನಾನು ಪಾಲಿಸುವುದಕ್ಕೆ ಆಗುವಂತಹ ಆಜ್ಞೆಯನ್ನೇ ಮಹಾಸ್ವಾಮಿಯವರು ಮಾಡುವರು ಎಂಬ ನಂಬಿಕೆಯಿದೆಯಾಗಿ ಅದನ್ನು ಪಾಲಿಸಿ ಕೃತಾರ್ಥನಾಗುವೆನೆಂಬ ನಂಬಿಕೆಯೂ ಇದೆ.”

ಅರಸನು ತಲೆದೂಗಿದನು : “ಚಿನ್ನದ ಒರೆಯಲ್ಲಿ ಇರಬೇಕಾದ ತೀಕ್ಷ್ಣಖಡ್ಗ ಬಟ್ಟೆಯ ಒರೆಯಲ್ಲಿ ನಿಲ್ಲುವುದಾದರೂ ಎಂತು ?” ಎಂದುಕೊಂಡನು. ಕೂಡಲೇ ಮಂತ್ರಿಯು ಬರಲು ಅಪ್ಪಣೆಯಾಯಿತು. ಅರಸನು ಕೇಳಿದನು : “ಮಾಲ್ಯವಂತ ಪರ್ವತದ ಪಾರ್ವತೇಯರು ಅಜೇಯರಾಗಿದ್ದಾರೆಂದು ವರದಿ ಬಂದಿದೆಯಲ್ಲವೇ?”

“ಹೌದು ಮಹಾಸ್ವಾಮಿ”

“ಏನು ಯೋಚಿಸಿದ್ದೀರಿ ?”

“ಅಲ್ಲಿಗೆ ಯುದ್ಧಕಾಮನಾಗಿ ಬಲಿಷ್ಠನಾದ ದಳಪತಿಯೊಬ್ಬನನ್ನು ಕಳುಹಿಸಬೇಕೆಂದಿದ್ದೇವೆ.”

“ಸರಿ. ಅಲ್ಲಿಗೆ ಐದು ಸಾವಿರ ಅಶ್ವದಳವು ಹೋಗಲಿ.”

“ಅಲ್ಲಿ ಆಗಲೇ ಹತ್ತು ಸಾವಿರ ಪದಾತಿಗಳೂ ಮೂರುಸಾವಿರ ಅಶ್ವಗಳೂ ಇವೆ.” “ಈತನು ಯುದ್ಧಕಾಮಿ. ಪೌರುಷವಂತ. ಅದರಿಂದ ಈತನನ್ನು ಅಲ್ಲಿಗೆ