ಪುಟ:Mahakhshatriya.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾರು ಯಾರು ? ಎಷ್ಟು ಜನ ? ಅದನ್ನು ಗೊತ್ತುಮಾಡಿ.”

ಅಷ್ಟುಹೊತ್ತು ಚರ್ಚೆಯಾಗಿ, ದೇವತೆಗಳ ಕಡೆ ಸುರಾಚಾರ್ಯನೂ, ಋಷಿ ಪಿತೃಗಣಗಳ ಪ್ರತಿನಿಧಿಗಳಾಗಿ ಈಗ ಪ್ರತಿನಿಧಿಗಳಾಗಿ ಬಂದಿರುವವರೇ ಹೋಗುವುದು ಎಂದು ಗೊತ್ತಾಯಿತು. ಜಾತವೇದನು ಅವರ ಜೊತೆಯಲ್ಲಿ ಹೋಗುವುದು ಎಂದು ತೀರ್ಮಾನವಾಯಿತು.

ಜಾತವೇದನು ಮತ್ತೆ ಎದ್ದು, “ಆತನಿಗೆ ಏನಾದರೂ ವಿಶೇಷ ವರಗಳನ್ನು ಕೊಡಬೇಕಾಗಿ ಬಂದರೆ, ಪ್ರತಿನಿಧಿಗಳಿಗೆ ಅಧಿಕಾರವಿರಬೇಕು. ಅದನ್ನು ಸಭೆಯು ಈಗಲೇ ಅಂಗೀಕರಿಸಬೇಕು. ಅದಿಲ್ಲದೆ, ಮತ್ತೆ ನಾವು ಋಷಿದೇವ ಪಿತೃಗಣಗಳನ್ನು ಹುಡುಕಿಕೊಂಡು ಲೋಕಲೋಕಗಳನ್ನು ಸುತ್ತುವಂತಿರಬಾರದು” ಎಂದನು.

ಎಲ್ಲರೂ ಆ ಮಾತನ್ನು ಅನುಮೋದಿಸಿದರು. ಹೀಗೆ, ವರಪ್ರದಾನ ಮಾಡುವ ವಿಶೇಷಾಧಿಕಾರವನ್ನು ಪಡೆದುಕೊಂಡು, ಪ್ರತಿನಿಧಿಗಳು ಸುರಾಚಾರ್ಯನ ನೇತೃತ್ವದಲ್ಲಿ ಜಾತವೇದನೊಡನೆ ಮಧ್ಯಮಲೋಕಪಾಲನಾದ ನಹುಷ ಚಕ್ರವರ್ತಿಯನ್ನು ಕಾಣಲು ಹೊರಟರು.

* * * *