ಪುಟ:Mahakhshatriya.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಹಸ್ಯಗಳೇನಿದ್ದಾವು ? ಆದರೆ, ಈಗ ನೀನು ಚಾಪಲ್ಯದಿಂದ ದೇವರಹಸ್ಯಗಳನ್ನು ತಿಳಿಯಬೇಕೆಂಬ ಕುತೂಹಲವನ್ನು ಪ್ರಕಟಿಸಿದೆ. ಅದರ ಫಲವಾಗಿ ನೀನು ನಿನಗೆಟುಕದ ರಹಸ್ಯಗಳನ್ನು ತಿಳಿಯಲು ಯತ್ನಿಸುವೆ. ರಹಸ್ಯವು ತಾನಾಗಿ ತಿಳಿದರೆ ವರ. ನಿನಗಾಗಿ ಭೇದಿಸಿದರೆ ಶಾಪ. ಅದರಿಂದ ಏನು ಬೇಕಾದರೂ ಆಗಬಹುದು.

ನಹುಷನು ಅದಕ್ಕಾಗಿ ಅಷ್ಟು ವಿಷಾದಪಡಲಿಲ್ಲ. “ಆಗಲಿ, ಅದು ನನ್ನ ಕೈಯಲ್ಲಿದೆ. ಹೆಚ್ಚು ಕುತೂಹಲ ಪಡದಿದ್ದರೆ ಆಯಿತು” ಎಂದುಕೊಂಡನು.

ದೇವಾಚಾರ್ಯಾದಿಗಳು ನಹುಷನನ್ನು ಪತ್ನೀಸಮೇತನಾಗಿ ದೇವಲೋಕಕ್ಕೆ ಕರೆದುಕೊಂಡು ಹೋಗಿ ಇಂದ್ರಪಟ್ಟಾಭಿಷೇಕ ಮಾಡಿದರು. ಮಾನವೇಂದ್ರನು ಮಹೇಂದ್ರನಾದನು.

* * * *