ಪುಟ:Mahakhshatriya.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭.ಏರುವುದು ಬೀಳುವುದಕ್ಕೆ

ನಹುಷನು ಇಂದ್ರನಾಗಿ ಅಧಿಕಾರವನ್ನು ವಹಿಸಿಕೊಂಡನು. ಅಗ್ನಿ ವಾಯುಗಳನ್ನು ಹಿಂದಿನಂತೆ ಅವರವರ ಅಧಿಕಾರದಲ್ಲಿಟ್ಟು ಅವರ ಮುಖಾಂತರವಾಗಿ ತ್ರೈಲೋಕ್ಯಾಧಿಪತ್ಯವನ್ನು ನಿರ್ವಹಿಸಿದನು. ಹಿಂದಿನ ಇಂದ್ರನಿಗೂ ಈ ಇಂದ್ರನಿಗೂ ವ್ಯತ್ಯಾಸವೆಂದರೆ, ಈತನು ನಿತ್ಯ ದಾನಮಾಡುವನು.ಆ ದಾನದ್ರವ್ಯವು ಮಾತ್ರ ಅಲ್ಲಿ ವಿನಿಯೋಗವಾಗದೆ ಮಧ್ಯಮ ಲೋಕದಲ್ಲಿ ಪ್ರಕಾರಾಂತವಾಗಿ ವಿನಿಯೋಗವಾಗುವುದು.

ಅಗ್ನಿ ವಾಯುಗಳು ಇಂದ್ರನಿಗೆ ಹೇಳಿದರು : “ಇದು ಕೇವಲ ಅಧಿಕಾರ ಸ್ಥಾನವಲ್ಲ, ಇಲ್ಲಿರುವವನು ಒಂದು ಹೆಜ್ಜೆಯನ್ನು ಪೂರ್ಣಪದದಲ್ಲಿಟ್ಟು ಆ ಕಡೆ ತಿರುಗಿರಬೇಕು. ಇನ್ನೊಂದು ಹೆಜ್ಜೆ ಅಧಿಕಾರ ಸ್ಥಾನದಲ್ಲಿರಬೇಕು ಅಥವ ರೂಪಕವಾಗಿ ಹೇಳಬೇಕೆಂದರೆ ನನ್ನಂತೆ ಎರಡು ಮುಖ ಮಾಡಿಕೊಂಡು ಕರ್ಮಬ್ರಹ್ಮಗಳೆರಡನ್ನೂ ಆರಾಧಿಸಬೇಕು ಮತ್ತು ವಾಯುವಿನಂತೆ ಸದಾಗತಿಯಾಗಿದ್ದು ತೀರದವರೆಗೂ ಅಲೆಗಳನ್ನು ಕಳುಹಿಸುವ ಸಮುದ್ರದಂತೆ, ಎಲ್ಲಿ ಯಾವುದು ನಡೆದರೂ ಅದನ್ನು ಗಮನಿಸಿ ಅದನ್ನು ಅದರದರ ಯೋಗ್ಯತಾನುಸಾರ ಪೂರ್ಣತೆಗೆ ಕೊಂಡೊಯ್ಯುವವನಾಗಬೇಕು.”

ನಹುಷನು ಕೇಳಿದನು : ``ಹಾಗಾದರೆ ಲೋಕದಲ್ಲಿ ಎಲ್ಲವೂ, ಪ್ರತಿಯೊಂದೂ ಪೂರ್ಣವೆ ?”

ಅಗ್ನಿಯು ಹೇಳಿದನು : “ದೇವ ಪ್ರತಿಯೊಂದು ಪೂರ್ಣವೇ. ಪೂರ್ಣದಿಂದ ಬಂದ ಜಗತ್ತಿನಲ್ಲಿರುವ ಪ್ರತಿಯೊಂದು ಪೂರ್ಣವೇ. ಆದರೆ, ಒಂದು ಇನ್ನೊಂದನ್ನು ಅಪೂರ್ಣವೆನ್ನುತ್ತ ತಾನು ಬೇರೆಯೆಂದುಕೊಂಡು ತನ್ನ ಪೂರ್ಣತೆಗೊಂದು ಮಿತಿಯನ್ನು ಹಾಕಿಕೊಂಡಿರುವುದು. ಆದರೂ ತಾನು ಎಂಬುದೊಂದುಂಟು ಎಂದುಕೊಂಡುದು, ತನ್ನದೊಂದು ವಿಷಯ ಪ್ರತ್ಯೇಕ, ಎಲ್ಲರಂತಲ್ಲ ಎಂದು ಕ್ಷೇತ್ರವನ್ನು ವಿಂಗಡಿಸಿಕೊಂಡಿರುವುದು. ಅದನ್ನೇ ಅಹಂಕಾರವೆನ್ನುವರು. ಆ ಅಹಂಕಾರದ ಅಧಿನಾಥನು ಇಂದ್ರನು. ಆತನು ಅದನ್ನು ಪೋಷಿಸುವವನು. ಆತನ ಅಪ್ಪಣೆಗನುಸಾರವಾಗಿ ದೇವತೆಗಳು ಅದನ್ನು ಅಳೆಯುವರು. ಅದು