ಪುಟ:Mahakhshatriya.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯.ಎರಡು ತೂಕದ ಕತ್ತಿ

ನೂತನ ದೇವೇಂದ್ರನು ದರ್ಶನಮಂದಿರದಲ್ಲಿ ವಿರಜಾದೇವಿಯೊಡನೆ ಶಚೀದೇವಿಗಾಗಿ ಕಾಯುತ್ತಿದ್ದಾನೆ. ಆಕೆಯು ಇಂದ್ರದರ್ಶನಕ್ಕೆ ಬರುವುದಾಗಿ ಹೇಳಿ ಕಳುಹಿಸಿದ್ದಾಳೆ. ಇಂದ್ರನಿಗೆ ಆಶ್ಚರ್ಯ. “ಹಿಂದಿನ ಇಂದ್ರನು ಹೊರಟು ಹೋದಂದಿನಿಂದ, ಅವನು ಅದೃಶ್ಯನಾದ ವೇಳೆಯಿಂದ, ಆತನಿಗಾಗಿ ಕಣ್ಣೀರಲ್ಲಿ ಕೈತೊಳೆಯುತ್ತ, ಅಂತಃಪುರವನ್ನು ಬಿಟ್ಟು ಈಚೆಗೇ ಬರದಿದ್ದವಳು, ಈ ದಿನ ಇಲ್ಲಿಗೆ ಬರುವಳೇ? ಆಕೆಯು ದೇವಸಭೆಯ ನಿರ್ಣಯವನ್ನು ನಿಜವಾಗಿ ಗೌರವಿಸುವಳೆ? ಆ ಗರ್ವಗಂಧಿನಿಯು ಹೊಸ ಇಂದ್ರನನ್ನು ಸೇವಿಸಲು ಒಪ್ಪುವಳೆ? ಅಥವಾ ದೇವಸಭೆಯ ನಿರ್ಣಯವು ಶಿರೋಧಾರ್ಯವೆಂದು, ಒಪ್ಪಲೇಬೇಕಾದುದೆಂದು, ಅದನ್ನು ಗೌರವಿಸಲು ತನ್ನ ವೈಯಕ್ತಿಕ ಭಾವನೆಗಳನ್ನೆಲ್ಲ ಹತ್ತಿಟ್ಟು ಸಿದ್ಧವಾಗಿರುವಳೇ?” ಹಾಗೆಯೇ ಆತನ ಭಾವನೆಗಳೆಲ್ಲ ವಿಸ್ಮಯದಿಂದ ಕೂಡಿ, ಆತನನ್ನು ಎಲ್ಲಿಯೋ ಹೊತ್ತುಕೊಂಡು ಹೋಗುತ್ತಿವೆ.

ವಿರಜಾದೇವಿಯೂ ಈ ಸುದ್ದಿಯನ್ನು ಕೇಳಿ ವಿಸ್ಮಿತಳಾಗಿದ್ದಾಳೆ. ಆಕೆಯು ಶಚಿಹೃದಯದ ಸ್ಥಿತಿಯನ್ನು ಊಹಿಸಬಲ್ಲಳು. ಹೆಣ್ಣು ತನ್ನ ಹೆಣ್ಣುತನವನ್ನು ಬಿಟ್ಟು ತನ್ನ ಕೈಹಿಡಿದವನನ್ನು, ತನ್ನನ್ನು ಹೆಣ್ಣೆಂದು ಮೊದಲ ಸಲ ತೋರಿಸಿಕೊಟ್ಟು ತನ್ನ ಬಾಳಿಗೊಂದು ಪೂರ್ಣತೆಯನ್ನು ಕೊಟ್ಟು ಗೌರವಿಸಿದವನನ್ನು ಬಿಟ್ಟು ಪರಪುರುಷನನ್ನು ಓಲೈಸಲು ಸಿದ್ಧಳಾಗುವಳೆಂದು ನಂಬಲೂಲಾರಳು. ಅಲ್ಲದೆ ಆಕೆಗೆ ಇನ್ನೂ ಒಂದು ಯೋಚನೆ : “ಎಷ್ಟೇ ಆಗಲಿ, ಶಚಿಯು ಪರಸ್ತ್ರೀಯಲ್ಲವೆ? ತನ್ನ ಗಂಡನು, ಆಕೆಯನ್ನು ಏನೇ ಕಾರಣದಿಂದಾಗಲಿ ಕೈ ಹಿಡಿದರೆ, ಆತನಿಗೆ ಈ ಪದವಿ, ಐಶ್ವರ್ಯಗಳು ಉಳಿಯುವುದೇ? ಆತನಿಗೇಕೆ ಈ ಯೋಚನೆ ಬಂತು?”

ಬಹುದಿನದ ಸಹವಾಸದಿಂದ ಉಂಟಾಗುವ ಅಭಿಮಾನ ಸಾಮೀಪ್ಯ ಮಮತೆಗಳಿಂದ ಆಕೆಯು ಗಂಡನನ್ನು ಕೇಳಿಯೂಬಿಟ್ಟಳು : “ದೇವ, ಇದುವರೆಗೂ ತಮಗೆ ಇಲ್ಲದ ಸ್ತ್ರೀ ಚಾಪಲ್ಯವು ಈಗೇಕೆ ಬಂತು ?”

ಇಂದ್ರನು ಏನೋ ಯೋಚನೆಯಲ್ಲಿದ್ದನು. ವಿರಜಾದೇವಿಯಾಡಿದ ಮಾತನ್ನು