ಪುಟ:Mahakhshatriya.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತ್ರಿಕರಣಪೂರ್ವಕವಾಗಿ ಸೇವಿಸಬೇಕೆಂದು ಮಾಡಿರುವ ನಿರ್ಣಯವು ನಮ್ಮೆಲ್ಲರಿಗೂ ಶಿರೋಧಾರ್ಯವಾದುದು’ ಎಂದೇ ಆರಂಬಿಸಿದೆ.”

`“ಸರಿ, ಇಂದ್ರನನ್ನು ಆರಾಧಿಸಲು ನೀನು ಯಾವಾಗಲೂ ಸಿದ್ಧಳು. ಆದರೆ ತಾತ್ಕಾಲೀನನಾದ ಈ ಇಂದ್ರನನ್ನಲ್ಲ. ಶಾಶ್ವತನಾದ ಆ ಇಂದ್ರನನ್ನು ಸರಿ, ಮುಂದೆ?”

`“ನಾನು ಇಂದ್ರನನ್ನು ಪತಿಯೆಂದು ವರಿಸಿ, ಆತನಿಗೆ ನೆರಳಿನಂತೆ ಇದ್ದವಳು. ಆತನು ನನಗೂ ಹೇಳದೆ ಹೊರಟುಹೋಗಿರುವನು. ಅದರಿಂದ ಆತನನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವಷ್ಟು ಕಾಲ ನಿರೀಕ್ಷಿಸಲು ಅಪ್ಪಣೆಕೊಡಬೇಕು, ಎಂದು ಪ್ರಾರ್ಥಿಸಿಕೊಂಡೆ. ಆತನ ಮುಖದಿಂದ ಇಂಗಿತವನ್ನು ನಿರ್ಣಯಿಸುವುದಾದರೆ ಆತನು ನಾನು ಪರಪತ್ನಿ ಎಂಬುದನ್ನು ಚೆನ್ನಾಗಿ ಮನಗಂಡಿರಬೇಕು. ಆತನು ಉದಾತ್ತನಾಗಿ, ಸಮಚಿತ್ತನಾಗಿ, ‘ಆಗಬಹುದು, ಅಷ್ಟೇ ಅಲ್ಲ, ಹುಡುಕು, ಹುಡುಕಿಸು' ಎಂದು ಅಪ್ಪಣೆಯನ್ನೂ ಕೊಟ್ಟು ನನ್ನನ್ನು ಬೀಳ್ಕೊಟ್ಟನು. ವಿರಜಾದೇವಿಯು ಮಂಗಳ ದ್ರವ್ಯಗಳನ್ನೂ ಫಲತಾಂಬೂಲವನ್ನು ಕೊಟ್ಟು ಕಳುಹಿಸಿಕೊಟ್ಟಳು.”

`“ಸರಿ, ಮೊದಲನೆಯ ಅಡ್ಡಿಯನ್ನು ದಾಟಿಯಾಯ್ತು.”

`“ಎಂದರೆ ?”

`“ಎಂದರೆ ಇಂದ್ರನನ್ನು ಹುಡುಕಿಸಿ ಕರೆತರುವುದು.”

`ಆಚಾರ್ಯನು ನಿಟ್ಟುಸಿರುಬಿಟ್ಟನು : “ದೇವಿ, ಇಂದ್ರನು ಹಿಂತಿರುಗಿ ಬಂದರೆ ನಿನಗೊಬ್ಬಳಿಗೇ ಸಂತೋಷವೆಂದುಕೊಂಡಿದ್ದೀಯಾ ? ನಿನ್ನಷ್ಟಲ್ಲವಾದರೂ, ಹೆಚ್ಚು ಸಂತೋಷವು ನನಗಾಗುವುದು, ಏಕಾಂತದಲ್ಲಿ ನನ್ನನ್ನು ನಾನು ಎಷ್ಟು ಹಳಿದುಕೊಂಡಿದ್ದೇನೆ ಬಲ್ಲೆಯಾ? ಆ ದಿನ ಇಂದ್ರಸಭೆಯಲ್ಲಿ ನಾನು ಒಂದು ರೆಪ್ಪೆ ಹೊಡೆಯುವಷ್ಟು ಕಾಲ ನಿರ್ವಿಕಾರನಾಗಿದ್ದಿದ್ದರೆ ಇದೊಂದು ಸಂಭವಿಸುತ್ತಿರಲಿಲ್ಲ. ಆ ದಿನ ನನಗೆ ಏನೋ ಆಗಿ ಇಂದ್ರನು ನನ್ನ ವಿಚಾರದಲ್ಲಿ ತಿರಸ್ಕಾರವನ್ನು ವಹಿಸಿರುವನು ಎನ್ನಿಸಿತು. ಅಗೋಚರವಾಗಿ ಹೊರಟುಹೋದೆ. ಅದರಿಂದ ಈ ಅನರ್ಥಪರಂಪರೆಯೆಲ್ಲ ಸಂಭವಿಸಿತು. ಈ ಅನರ್ಥಗಳನ್ನೆಲ್ಲ ತಿದ್ದುಕೊಳ್ಳಬೇಕು ಎಂದು ನಾನು ಎಷ್ಟು ಪ್ರಯತ್ನಿಸಿದ್ದೇನೆ ಬಲ್ಲೆಯಾ ? ಅಗ್ನಿ ವಾಯುಗಳನ್ನು ಕರೆದು ಕೇಳು. ಅಂದ ಹಾಗೆಯೇ ನನಗೆ ಮರೆತೇ ಹೋಗಿತ್ತು. ಅವರಿಬ್ಬರೂ ನನ್ನ ಹಾದಿಯನ್ನು ನೋಡುತ್ತ ಮಂದಿರದಲ್ಲಿ ಕುಳಿತಿದ್ದಾರೆ. ಅವರನ್ನು ಇಲ್ಲಿಗೇ ಕರೆಸಬಾರದೇಕೆ ?”

`“ಯಾರು ಬೇಡವೆಂದರು ? ಬರಮಾಡಿ.”

`ಆಚಾರ್ಯನು ಧ್ಯಾನಿಸಿದನು. ಅಗ್ನಿ ವಾಯುಗಳು ಬಂದಿರುವರೆಂದು