ಪುಟ:Mahakhshatriya.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಹೌದು, ಹೌದು, ದೇವರಾಜನಾದರೂ ಪಾಪ ಮಾಡಿದಾಗ ಬೀದಿಯ ಭಿಕಾರಿಗಿಂತ ಕಡೆ.”

“ಆಯಿತು ಏನು ಮಾಡಿದರೆ ನಿನಗೆ ತೃಪ್ತಿಯಾಗುವುದು?”

“ನನಗೆ? ತೃಪ್ತಿ? ಉಹುಂ. ಇಲ್ಲ ನಾನು ಹುಟ್ಟಿರುವುದು ಇಂದ್ರನನ್ನು ತಿನ್ನುವುದಕ್ಕೆ. ಯಾರೂ ಅವನನ್ನು ಬಿಡಿಸಿಕೊಳ್ಳಲಾರರು.”

“ಆತನು ನಿನಗೆ ಸಿಕ್ಕದೆ ಹೋದರೆ ಏನು ಮಾಡುವೆ?”

“ಅದನ್ನು ನಾನು ಯೋಚಿಸಿಯೂ ಇಲ್ಲ, ಯೋಚಿಸುವುದೂ ಇಲ್ಲ.”

“ನಿನಗೆ ಕೊನೆ ಯಾವಾಗ?”

“ನನಗೆ ಕೊನೆ? ಇದ್ದಂತಿಲ್ಲ. ಆದರೆ, ಈ ದೇವಭೂಮಿಯಲ್ಲಿ ಈ ಚಳಿಗಾಳಿಯಲ್ಲಿ ಅದೂ ಈ ಸರೋವರದಿಂದ ಬೀಳುವ ಕುಳಿರ್ಗಾಳಿಯಲ್ಲಿ ನಾನು ಕೊರಗುತ್ತಿದ್ದೇನೆ. ಹೀಗೇ ಇದ್ದರೆ ಕರಗಿಯೂ ಹೋಗುವೆನೋ ಏನೋ?”

“ಹತ್ಯೆ ! ನಾನು ಹೇಳುವೆನು. ನಿನ್ನ ಕೈಗೆ ಇಂದ್ರನು ಸಿಕ್ಕುವುದಿಲ್ಲ ದೇವತೆಗಳೆಲ್ಲರೂ ಸೇರಿ ಆತನನ್ನು ಕೈಗೆ ಸಿಕ್ಕದಂತೆ ಮಾಡಬಲ್ಲರು.”

“ಇಲ್ಲ ಸಾಧ್ಯವಿಲ್ಲ”.

“ಹಾಗಾದರೆ, ನಿನಗೆ ಈ ಚಳಿಗಾಳಿಯಲ್ಲಿ ಕೊರಗಿ ಕರಗುವುದೇ ಗತಿ !”

“ನೀನು ನನ್ನ ಶಕ್ತಿಯನ್ನು ಕಾಣೆ. ನಾನು ಹುಟ್ಟಿರುವ ಕೆಲಸ ಮುಗಿಯುವವರೆಗೂ ನಾನು ಸಾಯುವುದಿಲ್ಲ.”

“ನಾನು ನಿನ್ನನ್ನು ಸುಟ್ಟುಬಿಡುವೆ.”

“ಸಾಧ್ಯವಿಲ್ಲ”

“ವಾಯುವು ನಿನ್ನನ್ನು ಶೋಷಿಸಿಬಿಡುವನು. ನೀನು ಆತನ ಕೈಗೆ ಸಿಕ್ಕಿದರೆ ತರಗೆಲೆಯಂತೆ ಜೀರ್ಣವಾಗಿ ಹೋಗುವೆ.”

“ನಾನು ಹುಟ್ಟಿರುವುದು ಇಂದ್ರನಿಗಾಗಿ. ಇಂದ್ರನನ್ನು ಆಹುತಿ ತೆಗೆದುಕೊಂಡೇ ಮುಂದಿನ ಮಾತು. ನಾನಿನ್ನು ಮಾತನಾಡುವುದಿಲ್ಲ ನನ್ನನ್ನು ಬಿಡು.”

ಅಗ್ನಿಯು ಏನು ಮಾಡಬೇಕೋ ತಿಳಿಯದಾದನು. “ಒಂದು ವೇಳೆ ಬೃಹಸ್ಪತಿಯೇ ಬಂದರೂ ಈ ಹತ್ಯೆಯು ಸಾಧ್ಯವಾಗುವುದೋ ಇಲ್ಲವೋ ಅಂದು ಇಂದ್ರನು ಓಡಿಹೋದಾಗ ಆತನು ಪಟ್ಟ ಗಾಬರಿಯನ್ನು ನೋಡಿದರೆ ಆತನು ನಿಜವಾಗಿಯು ಈ ಹತ್ಯೆಗೆ ಹೆದರಿರಬೇಕು. ಏನು ಮಾಡಬೇಕು?” ಅಗ್ನಿಯ ಯೋಚನೆಯನ್ನು ಕೇಳಿ ವಾಯುವೂ ಚಿಂತಾಪರನಾದನು.

ಇಬ್ಬರೂ ಯೋಚಿಸಿ ತಿರಸ್ಕರಣಿಯ ಸಹಾಯದಿಂದ ನಿರ್ವಾತ ಸ್ಥಳವನ್ನು