ಪುಟ:Mahakhshatriya.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸೃಷ್ಟಿಮಾಡಿ, ಅಲ್ಲಿ ಶಚೀದೇವಿಯ ಪೂಜೆಗೆ ಬೇಕಾದುದನ್ನೆಲ್ಲ ಸಿದ್ಧಮಾಡಿಕೊಟ್ಟು ತಾವು ಇಬ್ಬರೂ ಕೋಟೆ ಕಟ್ಟಿಕೊಂಡು ರಕ್ಷಣೆಗೆ ಕುಳಿತರು.

ಶಚಿಯು ಪೂಜೆಗೆ ಕುಳಿತಳು. ಆಕೆಯು ಮಾನವಸೃಷ್ಟಿಯಿಂದ ಬೇಕಾದುದನ್ನು ಮಾಡಬಲ್ಲಳು. ಜೊತೆಗೆ ಅಗ್ನಿ ವಾಯುಗಳ ಸಹಾಯವೂ ಇದೆ. ಕಲಶವನ್ನು ಇಟ್ಟು ಅದರಲ್ಲಿ ಇಂದ್ರನನ್ನು ಆವಾಹಿಸಿದಳು. ಇಂದ್ರ ಮಂತ್ರಗಳಿಂದ ಕಲಶಕ್ಕೆ ಪೂಜೆಮಾಡಿ, ತನ್ನ ಪ್ರಾಣಗಳನ್ನೂ ತನ್ನಿಂದ್ರಿಯಗಳನ್ನೂ ಕೊಟ್ಟು ಕಲಶದಲ್ಲಿರುವ ಆವಾಹಿತ ದೇವತೆಯು ರೂಪುಗೊಳ್ಳುವಂತೆ ಮಾಡಿದಳು. ಜೊತೆಗೆ ಋಕ್ಕಿನಿಂದ ಆವಾಹನೆ ಮಾಡಿ ಸಾಮಗಾನದಿಂದ ಆ ಕಲೆಯನ್ನು ವೃದ್ಧಿಗೊಳಿಸಿದಳು. ಕೊನಗೆ ಇಂದ್ರನು ಸೂಕ್ಷ್ಮರೂಪದಿಂದ ಕಾಣಿಸಿಕೊಂಡು “ಯಾರು ನನ್ನನ್ನು ಕರೆದವರು?” ಎಂದು ಸಣ್ಣ ಧ್ವನಿಯಲ್ಲಿ ಕೇಳಿದನು.

“ನಾನು ಶಚಿ. ತಿರಸ್ಕರಣಿಯು ಸುತ್ತಲೂ ವ್ಯಾಪಿಸಿರುವುದು. ನನ್ನೊಡನೆ ಮಾತನಾಡು. ನೀನು ಹತ್ಯೆಗೆ ದಿಗಿಲುಪಡಬೇಕಾಗಿಲ್ಲ. ಅಗ್ನಿ ವಾಯುಗಳು ಕಾವಲಾಗಿರುವರು.”

ಇಂದ್ರನು ನಿಟ್ಟುಸಿರುಬಿಟ್ಟು ಹೇಳಿದನು : “ದೇವಿ, ಕ್ಷಮಿಸು. ನಿನಗೆ ಹೇಳಿ ಬರಲೂ ಅವಕಾಶವಿರಲಿಲ್ಲ. ಆ ಹತ್ಯೆಯ ದರ್ಶನದಿಂದಲೇ ನನಗೆ ಮೈಯಾದ ಮೈಯ್ಯೆಲ್ಲ ಉರಿಯಲಾರಂಭಿಸಿತು. ಬೃಹಸ್ಪತಿಗೋ ಧನ್ವಂತರಿಗೋ ಅಶ್ವಿನಿ ದೇವತೆಗಳಿಗೋ ಇದಕ್ಕೆ ತಕ್ಕ ಪ್ರತಿಕ್ರಿಯೆ ತಿಳಿದಿತ್ತೋ ಏನೋ ? ಅಂತೂ, ನನಗೆ ಕಾಲವು ಚೆನ್ನಾಗಿಲ್ಲ. ಈ ಕಮಲನಾಳದ ಒಳಗೆ ಕುಳಿತು ತಪಸ್ಸು ಮಾಡುತ್ತಿದ್ದೇನೆ. ನನ್ನ ತಪಸ್ಸು ಪೂರ್ಣವಾಗುತ್ತಲೇ ನನಗೆ ಆಯುಧಗಳೆಲ್ಲ ದೊರೆಯುವುವು. ಈಗ ಆಯುಧಗಳು ಬಂದರೂ ಅವನ್ನು ಹಿಡಿದು ಪ್ರಯೋಗಿಸಲು ಶಕ್ತಿಯೂ ಇಲ್ಲ. ಧೈರ್ಯವೂ ಇಲ್ಲ ಇದು ಆಗಿರುವ ಅನರ್ಥ.”

“ಇನ್ನೆಷ್ಟು ದಿವಸ ಹೀಗಿರಬೇಕು ದೇವ ?”

“ನಿನ್ನ ಸನ್ನಿಧಿಯಿಂದ ಮನಸ್ಸು ಶುದ್ಧವಾಗುತ್ತಿದೆ. ಶಚಿ, ನೀನು ಇನ್ನು ಅಷ್ಟು ಹೊತ್ತು ಇಲ್ಲಿ ಇರಬಲ್ಲೆಯಾದರೆ, ನನ್ನ ಮನಸ್ಸು ಇನ್ನೂ ತಿಳಿಯಾಗಿ ನಾನು ಭವಿಷ್ಯವನ್ನು ನೋಡಬಲ್ಲವನಾಗುವೆನು.”

“ಆಗಲಿ ದೇವ, ಅಗ್ನಿ ವಾಯುಗಳನ್ನು ಕರೆಯಲೇ ?”

“ಕರೆ”

ನೆನೆಯುತ್ತಿದ್ದಂತೆಯೇ ಅಗ್ನಿವಾಯುಗಳು ಬಂದರು. ಇಂದ್ರನ ಆಕಾರವಿರುವ ತೇಜೋಮಂಡಲ, ಅದೂ ಮಲಿನವಾಗಿದೆ. ಅವರಿಬ್ಬರೂ ಕಣ್ಣಲ್ಲಿ ನೀರಿಟ್ಟುಕೊಂಡು,