ಪುಟ:Mahakhshatriya.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಆ ವಿಚಾರವಾಗಿಯೂ ಮಹಾವಿಷ್ಣುವಿನ ಅಪ್ಪಣೆಯಾಗಿದೆ. ತಾವಾಗಿ ಬಿಡುವವರೆಗೆ ಯಾರೂ ತಮ್ಮನ್ನು ಬಲವಂತ ಮಾಡುವಂತಿಲ್ಲ.”

ಅರಸನು ಯೋಚಿಸಿದನು : “ಆಯಿತು. ದೇವಿ, ತಾವು ಹೇಳುವ ಈ ಶಿಬಿಕಾ ಪೂಜೆಯು ನಡೆಯುವುದು ಯಾವಾಗ ?”

“ಉತ್ತರಾಯಣ ಸಂಕ್ರಮಣದ ಮರುದಿನ ?”

“ಸರಿ. ಈಗಿನ್ನೂ ದಕ್ಷಿಣಾಯನವು ನಡೆಯುತ್ತಿದೆ. ಉತ್ತರಾಯಣದಲ್ಲಿ ನಾವು ಶಿಬಿಕಾಪೂಜೆ ಮಾಡಿ ಶಿಬಿಕಾರೋಹಣ ಮಾಡುವೆವು. ಆ ವೇಳೆಗೆ ಇಂದ್ರನು ಪರಿಶುದ್ಧನಾಗಿ ಬರಲಿ. ಸಾಧ್ಯವಾದರೆ, ನಾವು ಇಂದ್ರಾಭಿಷೇಕದಲ್ಲಿ ಭಾಗಿಗಳಾಗುವೆವು.”

ಶಚಿಯು ಏನು ಉತ್ತರ ಕೊಡಲಾರದೆ ಹೋದಳು. ಆದರೆ ಸುಮ್ಮನಿರುವುದೆಂತು ? ಪೆಚ್ಚುನಗೆ ನಗುತ್ತ ಹೇಳಿದಳು : “ದೇವತ್ವಕ್ಕಿಂತ ಮನುಷ್ಯತ್ವವು ಇಂದು ಶ್ರೇಷ್ಠವಾಯಿತು.”

ನಹುಷನು, ಸಂತೋಷದಿಂದ ಮುಖವು ಒಂದು ಹರಿವಾಣದಷ್ಟಾಗುತ್ತಿರಲು “ಏನು ? ಏನು ?” ಎಂದು ಕೇಳಿದನು.

ಶಚಿಯು ಸಹಜವಾಗಿ ಸತ್ಯವನ್ನಾಡುವ ಮಗುವಿನಂತೆ ನುಡಿದಳು : “ದೇವ, ಇದುವರೆಗೂ ದೇವತೆಗಳು ಮಾನವರಿಗೆ ವರಗಳನ್ನು ಕೊಡುತ್ತಿದ್ದರು. ಈಗ ಮಾನವರು ದೇವತೆಗಳಿಗೆ, ಅದೂ ಇಂದ್ರದಂಪತಿಗಳಿಗೆ ವರವನ್ನು ಕೊಡುವಂತಾಯಿತು. ಅರ್ಥಾತ್ ತಾವು ನಮಗೆ ಪೂಜ್ಯರಾದಿರಿ.”

ಅರಸನು ಇನ್ನು ಏನೋ ಅರ್ಥಾಂತರ ಮಾಡಿಕೊಂಡಿದ್ದವನಂತೆ, “ಹಾಗೆಯೇ? ದೇವಿ, ನಮಗೆ ಬೇಡವಾದುದನ್ನು ಬಿಡುವುದು, ಇತರರಿಗೆ ಕೊಟ್ಟ ವರವಾದೀತೆ ?” ಎಂದು ಕೇಳಿದನು.

ಶಚಿಯು ಅರಸನ ಅರ್ಥವನ್ನು ಪೂರ್ಣವಾಗಿ ಗ್ರಹಿಸಲಾರದೆ “ಹಾಗೆಂದರೆ?” ಎಂದು ಕೇಳಿದಳು.

ಅರಸನು ಗಂಭೀರವಾಗಿ ಉತ್ತರ ಕೊಟ್ಟನು : “ಶಾಸ್ತ್ರಗಳಲ್ಲಿ ಗಾರ್ಹಸ್ಥ್ಯಕ್ಕಿಂತ ವಾನಪ್ರಸ್ಥವು ಹೆಚ್ಚು ಎಂದು ಹೇಳುತ್ತದೆ. ನಮ್ಮ ಶಾಸ್ತ್ರಗಳು ನಿಜವಾದರೆ ಪರಿಗ್ರಹಕ್ಕಿಂತ ತ್ಯಾಗವು ಹೆಚ್ಚು. ಪದವಿಗಳಲ್ಲೆಲ್ಲಾ ಅನಧಿಕವಾದ ಇಂದ್ರ ಪದವಿಯು ಲಭಿಸಿತು. ಅದರಲ್ಲಿಯೂ ಇಂದ್ರನಿಗಿಂತ ಹೆಚ್ಚಾಗುವ ಉಪಾಯವನ್ನು ತಾವು ತಿಳಿಸಿಕೊಟ್ಟಿರಿ. ಅಲ್ಲಿಗೆ ಪರಿಗ್ರಹವು ಪರಿಪೂರ್ಣವಾಯಿತು. ಇನ್ನು ಉಳಿದಿರುವುದು ತ್ಯಾಗ. ಅಷ್ಟೇ ತಾನೇ ?”