ಪುಟ:Mahakhshatriya.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸರ್ವವನ್ನೂ ಆತನಿಗೆ ಒಪ್ಪಿಸಿ ಇರಬೇಕು. ಆಗ ಅದು ವಿಶ್ವಜಿದ್ಯಜ್ಞವಾಗುವುದು.”

“ಆತನನ್ನು ಆ ಸರ್ವೇಶ್ವರನನ್ನು ಹೃದಯದಲ್ಲಿ ಈಗಲೂ ಧ್ಯಾನಿಸುತ್ತಲೇ ಇರುವೆನು.”

“ನೀನು ಧ್ಯಾನಿಸುತ್ತಿರುವುದು ಸಗುಣ ಮೂರ್ತಿಯನ್ನು. ಧರ್ಮದಲ್ಲಿ ಅದೇ ಸರಿ. ಅದರೆ ಈ ಶಿಬಿಕಾರೋಹಣವು ಇಂದ್ರತ್ವದ ಪರಮಾವಧಿ. ಅಲ್ಲಿ ಸಗುಣ ಮೂರ್ತಿಯು ಕರಗಿ ನಿರ್ಗುಣವಾಗಬೇಕು. ಅತನನ್ನು ನೋಡುವ ಇಂದ್ರಿಯಗಳು ಕರಗಿಹೋಗಬೇಕು. ಅಥವ ಶಾಸ್ತ್ರದ ಮಾತಿನಲ್ಲಿ ಹೇಳುವುದೆಂದರೆ, ನೀನು ತ್ರಿಪುಟೀ ರಹಿತನಾಗಿ ಸಿಬಿಕೆಯನ್ನು ಆರೋಹಣ ಮಾಡಬೇಕು. ನಾವು ಶಿಬಿವಾಹಕರಾದಾಗ ತ್ರಿಪುಟೀಸಹಿತವಾಗಿ ಶಿಬಿಕೆಯಲ್ಲಿ ಯಾರೂ ಕುಳಿತಿರುವಂತಿಲ್ಲ. ನಾವು ಶಿಬಿಕೆಯನ್ನು ಇಳಿಸಿದಾಗ ತ್ರಿಪುಟಿಯು ಮತ್ತೆ ಜಾಗ್ರತವಾಗುವುದು.”

“ಶಿಬಿಕಾರೋಹಣವಾಗುತ್ತಲೂ ತ್ರಿಪುಟಿಯಿಲ್ಲವಾಗಿ ಶಿಬಿಕಾರೋಹಣದಲ್ಲಿ ಅದು ಜಾಗ್ರತವಾಗುವುದಾದರೆ ನಾನು ಮಾಡಬೇಕಾದ ಕಾರ್ಯವೇನು?”

“ನಿಜ. ಅಲ್ಲಿ ನಿನಗೆ ಕರ್ತೃತ್ವವಿಲ್ಲ. ಆದರೂ ಶಿಬಿಕೆಯಲ್ಲಿರುವಾಗ ತ್ರಿಪುಟಿಯ ಉದಯವಾದರೆ ಆಗದರ ಫಲವನ್ನೂ ನೀನು ಅನುಭವಿಸಬೇಕಾಗುವುದು.”

“ಆಗಬಹುದು”

ಬೃಹಸ್ಪತಿಯು ಥಟ್ಟನೆ ವಂದಿಸಿ, ವಿನಯದಿಂದ ಕೈಮುಗಿದುಕೊಂಡು ಪ್ರಾರ್ಥಿಸಿದನು. “ಭಗವಾನರಿಂದು ಅನುಗ್ರಹಮುದ್ರೆಯಲ್ಲಿದ್ದಾರೆ. ದಯವಿಟ್ಟು ತಿಳಿಸಿಕೊಡಬೇಕು. ಈ ತ್ರಿಪುಟೀತ್ಯಾಗವೆಂದರೇನು? ಈ ಸಿಬಿಕೋತ್ಸವದಿಂದ ಲೋಕಕ್ಕೆ ಆಗುವ ಉಪಕಾರವೇನು?”

ಭರದ್ವಾಜರು ನಕ್ಕು, “ಸರಿ, ದೇವಗುರುಗಳು ಲೋಕಾನುಗ್ರಹಾರ್ಥವಾಗಿ ಕೇಳಬೇಕಾದುದನ್ನು ಕೇಳಿದರು, ಹೇಳೋಣ” ಎಂದು ಹೇಳಿದರು. “ದೇವಗುರುಗಳು ಆಲಿಸಬೇಕು. ಜ್ಞಾತೃ, ಜ್ಞೇಯ, ಜ್ಞಾನ ಎಂಬುದೇ ತ್ರಿಪಟಿಯು. ಇದರಲ್ಲಿ ಯಾವುದೊಂದನ್ನು ಬಿಟ್ಟರೂ ತ್ರಿಪುಟಿಯು ಇಲ್ಲವಾಗುವುದು. ಇದನ್ನು ಮನುಷ್ಯರು ನಿದ್ರಾವಸ್ಥೆಯಲ್ಲಿ ಮಾಡುತ್ತಿರುವುದನ್ನು ಸ್ವಸಂಕಲ್ಪಪೂರ್ವಕವಾಗಿ ಜಗತ್ತಿನಲ್ಲಿ ಮಾಡಿದರೆ, ಸ್ವಯಂಪ್ರಕಾಶನಾಗಿ ನಿಶ್ಯೇಷವಾಗಿ ಮಹಾವಿಷ್ಣುವಿನಲ್ಲಿ ಲಯವಾಗುವನು. ಹಾಗಾಗದಿದ್ದರೆ, ತ್ರಿಪುಟಿಸಹಿತನಾಗಿ ಸರ್ವವ್ಯಾಪಕನಾಗಿರುವ ಮಹಾವಿಷ್ಣುವನ್ನು ದೇಶಕಾಲಗಳ ಚೌಕಟ್ಟಿನಲ್ಲಿಟ್ಟು ಇಂದ್ರಿಯಗೋಚರವಾಗುವಂತೆ ಮಾಡಿಕೊಳ್ಳುವ ಪತ್ರಿಕೋಪಾಸಕನಾಗುವನು. ಅಂಥವನು ಧಾರ್ಮಿಕನಾದರೂ ನಾವು ಹೇಳುವ ಧರ್ಮಮೇಘವೆಂಬ ಸಮಾಧಿಗೂ ಆತನಿಗೂ ಬಹು ದೂರ. ಇನ್ನು ಈ ಮಾತನ್ನು ಇಲ್ಲಿ ಬಿಟ್ಟು ಮುಂದಿನದನ್ನು ಹೇಳೋಣ.