ಪುಟ:Mahakhshatriya.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೀಜವು ತಾನು ಅಂಕುರವಾದಾಗ ತನ್ನ ಪೋಷಕದ್ರವ್ಯವನ್ನು ತಾನೇ ತರುವುದು. ದೊಡ್ಡದಾದ ಮೇಲೆ ಜೀವಿಕೆಗೆ ಬೇಕಾದ ಆಹಾರವನ್ನೂ ತಾನೇ ಭೂಮಿಯಿಂದ ಸಂಗ್ರಹಿಸುವುದು. ಆದರೂ ಪೋಷಕನು ಆಗಾಗ ಅದಕ್ಕೆ ಬೇಕಾದ ಗೊಬ್ಬರ ನೀರುಗಳನ್ನು ಅದಕ್ಕೆ ಸಿಕ್ಕುವಂತೆ ಮಾಡಿ ಅದರ ವೃದ್ಧಿಗೆ ಕಾರಣನಾಗುವನು. ಅಲ್ಲವೆ? ಹಾಗೆ, ತ್ರಿಲೋಕದಲ್ಲಿರುವ ಪ್ರಾಣಿ ಪ್ರಾಣಿಗೂ, ದೇವ ಮಾನವತಿರ್ಯಕ್ಕೆಂಬ ಮೂರು ವರ್ಗಗಳಲ್ಲಿಯೂ ಅವರವರಿಗೆ ಬೇಕಾದ ಸತ್ವಾದಿಗಳನ್ನು ನಿಯತಿಯೇ ಅನುಗ್ರಹಿಸಿರುವುದು. ಆದರೆ ಶಿಬಿಕಾರೋಹಣ ಸಾಮಥರ್ಯ್‌ವುಳ್ಳ ಯಾವನಾದರೂ ಒಡಹುಟ್ಟಿ ಶಿಬಿಕೋತ್ಸವವು ನಡೆಯಿತು ಎಂದರೆ ಧರ್ಮವೃಷ್ಟಿಯಾಗಿ ಲೋಕತ್ರಯಗಳಿಗೂ ಉದ್ಯಾನದಲ್ಲಿ ಗೊಬ್ಬರ ನೀರು ಚೆಲ್ಲಿದಂತಾಗುವುದು. ಎಲ್ಲರಿಗೂ ಮನಸ್ಸು ಉಬ್ಬಿ ತಮೋಗುಣವನ್ನು ತುಳಿದು ರಜೋಗುಣವನ್ನು ಮೀರಿ ಸತ್ವದತ್ತ ನುಗ್ಗುವುದು. ತೃಪ್ತಿಯಾಯಿತೇ?”

ದೇವಗುರು ದೇವರಾಜರಿಬ್ಬರೂ ಅತಿಶಯವಾದ ಹರ್ಷದಿಂದ ಸಪ್ತರ್ಷಿಗಣಕ್ಕೆ ನಮಸ್ಕಾರ ಮಾಡಿದರು. ಭರದ್ವಾಜರು, ಆ ನಮಸ್ಕಾರವನ್ನು ಅಂಗೀಕರಿಸಿ ಸಪ್ತಿರ್ಷಿಗಳ ಪರವಾಗಿ ಹೇಳಿದರು : “ಸಪ್ತರ್ಷಿಗಣವೂ ಇಂತಹ ಧೀರನೊಬ್ಬನು ಹುಟ್ಟಿಬಂದಾನೇ ಎಂದು ಕಾದಿದ್ದಿತು. ದೇವರಾಜ, ನೀನು ನಾವು ವಿಧಿಸಿದ ನಿಯಮಗಳಿಗೆಲ್ಲ ಒಪ್ಪಿಕೊಂಡಿರುವೆಯಾಗಿ ನಾವೂ ಸಂತೋಷದಿಂದ ಸ್ವಯಂ ಒಂದು ನಿಯಮವನ್ನು ಅಂಗೀಕರಿಸುವೆವು, ಕೇಳು, ನೀನು ಶಿಬಿಕಾರೋಹಣವು ಒಂದು ದಿವಸ ನಡೆಯಬೇಕೆಂದೆ. ಇಗೋ, ಸಪ್ತರ್ಷಿಗಳು ಈ ಶಿಬಿಕೋತ್ಸವವನ್ನು ಏಳು ದಿನ, ಒಂದು ವಾರ ಪರ್ಯಂತವಾಗಿ ನಡೆಸಲು ಒಪ್ಪುವರು. ಲೋಕಲೋಕಗಳಲ್ಲಿರುವವರನ್ನೆಲ್ಲಾ ಶಿಬಿಕೋತ್ಸವ ಸಂದರ್ಶನಾರ್ಥವಾಗಿ ಬರಮಾಡು. ಹೌದು, ದೇವಾಚಾರ್ಯ ಈ ಧರ್ಮಾಭಿವೃದ್ಧಿಯಿಂದ ನಿನ್ನ ಇಂದ್ರನು ಉದ್ಧಾರವಾಗುವನು. ನೀವೆಲ್ಲರೂ ನಿಮಗೆ ಲಭಿಸುವ ಪುಣ್ಯವನ್ನು ಆತನಿಗೆ ಧಾರೆಯೆರೆಯಿರಿ. ಮಹಾವಿಷ್ಣುವಿನ ಅನುಗ್ರಹದಿಂದ ಆತನಿಗೆ ಹತ್ಯೆಯು ನಿವಾರಣವಾಗುವುದು.”

ದೇವರಾಜ ದೇವಾಚಾರ್ಯರಿಬ್ಬರಿಗೂ ಆದ ಆನಂದವು ಅಷ್ಟಿಷ್ಟಲ್ಲ. ದೇವರಾಜನಿಗೆ ಹಿಂದೆ ಶಚೀದೇವಿಗೆ ಹೇಳಿದ್ದ ; ‘ಬೇಕಾದರೆ ನಾವೂ ಸಹಾಯ ಮಾಡುವೆವು’ ಎಂದ ಮಾತು ನಿಜವಾಯಿತು ಎಂದು ಸಂತೋಷವಾದರೆ, ದೇವಾಚಾರ್ಯನಿಗೆ ಮುನ್ನಿನ ಇಂದ್ರನು ಶುದ್ಧನಾಗಿ ಹಿಂತಿರುಗಿ ಬರುವನಲ್ಲ ಎಂದು ಸಂತೋಷ.