ಪುಟ:Mahakhshatriya.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇಬ್ಬರೂ ತುಂಬಿದ ಸಂತೋಷದಲ್ಲಿ ಸಪ್ತರ್ಷಿಗಳಿಗೆ ಪುನಃಪೂಜೆಯನ್ನೊಪ್ಪಿಸಿ ತಮ್ಮ ತಮ್ಮ ಇಚ್ಛೆಯಂತೆ ಪ್ರಾರ್ಥನೆ ಮಾಡಿಕೊಂಡು ಮತ್ತೆ ನಮಸ್ಕಾರ ಮಾಡಿದರು. ಸಪ್ತರ್ಷಿಗಳು ‘ಅಭಿಷ್ಠಾ ಸಿದ್ಧಿರಸ್ತು’ ಎಂದು ಆಶೀರ್ವಾದ ಮಾಡಿ ಅಂತರ್ಧಾನವನ್ನು ಹೊಂದಿದರು.

ಇಬ್ಬರಿಗೂ ತಮಗೆ ಬೇಕಾದವರಿಗೆ ಈ ಸಂತೋಷದ ವರ್ತಮಾನವನ್ನು ಹೇಳಬೇಕೆಂದು ಅವಸರ. ಆ ಅವಸರದಲ್ಲಿ ಇಬ್ಬರೂ ಪರಸ್ಪರ ಬೀಳ್ಕೊಂಡು ನಡೆದರು. ದೇವರಾಜನು ವಿರಜಾದೇವಿಗೆ ಎಲ್ಲವನ್ನೂ ಹೇಳಲು ಹೋದರೆ, ದೇವಗುರುವು ಶಚೀದೇವಿಗೆ ಎಲ್ಲವನ್ನೂ ವರದಿ ಮಾಡಲು ಮನೋವೇಗದಿಂದ ಹೋದನು.

* * * *