ಪುಟ:Mahakhshatriya.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ನಮಗೇಕೆ ಆ ಯೋಚನೆ, ನಾವು ಸಿದ್ಧರಾಗಿದ್ದರೆ ಆಯಿತು. ಆರೊಹಣ ಮಾಡುವಾಗ ಅವರಿಗೆ ನಮಸ್ಕಾರ ಮಾಡುವುದು ; ದೇಹಭಾವವಳಿದು ಸೋಹಂಭಾವ ಬರುತ್ತದೆ. ಇಳಿಸಿದಾಗ ಮತ್ತೆ ದೇಹಭಾವ ಬರುತ್ತದೆ. ಆಗ ಇಳಿದು ನಮಸ್ಕಾರ ಮಾಡುವುದು.”

“ಅಹುದು. ತಾವು ಹೇಳಿದುದು ಸರಿ. ಆದರೂ ಶಾಸ್ತ್ರಾಭಿಮಾನವುಳ್ಳ ನಾವು ಇನ್ನಷ್ಟು ಅಪೇಕ್ಷಿಸಿದರೆ ತಪ್ಪಿಲ್ಲ. ಅದರಿಂದ ನಮ್ಮಲ್ಲಿ ಮೂವರು ಈ ವಿದ್ಯೆಯನ್ನು ಬಲ್ಲವರು. ಒಬ್ಬನು ಇಂದ್ರ, ಆತನು ಪ್ರಜಾಪತಿಯಿಂದ ಅವಸ್ಥಾತ್ರಯ ವಿಚಾರಪೂರ್ವಕವಾಗಿ ಬ್ರಹ್ಮವಿದ್ಯೆಯನ್ನು ಪಡೆದವನು. ಅಲ್ಲದೆ, ಬ್ರಹ್ಮವಿದ್ಯೆಯೇ ಉಮಾದೇವಿಯಾಗಿ ಆತನಿಗೆ ಅನುಗ್ರಹ ಮಾಡಿರುವಳು. ಮತ್ತೊಬ್ಬನು ಯಮ ಧರ್ಮ. ಆತನೊಂದು ಸಂಪ್ರದಾಯ ಕರ್ತೃ. ಆತನು ಹೃದಯಗ್ರಂಥಿವಿಚ್ಛೇದನ ರೂಪವಾದ ಬ್ರಹ್ಮವಿದ್ಯೆಯನ್ನು ಬಲ್ಲವನು. ಮೂರನೆಯವನು ವರುಣನು. ಆತನು ಪಂಚಕೋಶಾತ್ಯಯರೂಪವಾದ ಬ್ರಹ್ಮವಿದ್ಯೆಯನ್ನು ಬಲ್ಲವನು. ಇವರು ಮೂವರಲ್ಲಿ ಯಾರನ್ನಾದರೂ ಕರೆಯಿಸಿಕೊಂಡು ಬ್ರಹ್ಮವಿದ್ಯೆಯ ವಿಚಾರವಾದರೂ ಮಾಡಿದ್ದರೆ ಒಳ್ಳೆಯದು.”

ದೇವರಾಜನು ನಸುನಗುತ್ತಾ “ಆಗಬಹುದು. ಯಾರನ್ನು ಕರೆಯಿಸಬೇಕೆಂದು ತಮ್ಮ ಇಷ್ಟ ?” ಎಂದು ಕೇಳಿದನು.

ದೇವಗುರುವು ಆತನ ಅರ್ಥವನ್ನು ಗ್ರಹಣಮಾಡದೆ, “ಇಂದ್ರನು ಈಗ ಅಂತರ್ಧಾನವಾಗಿರುವನು. ಇನ್ನುಳಿದ ಇಬ್ಬರಲ್ಲಿ ಯಾರನ್ನು ಕರೆಯಿಸು ಎಂದರೆ ಅವರನ್ನು ಕರೆಯಿಸುತ್ತೇನೆ” ಎಂದನು.

“ಮೂವರನ್ನೂ ಕರೆಯಿಸಬೇಕೆಂದು ನಮ್ಮ ಕೋರಿಕೆಯಿದ್ದರೆ ?”

ಆಚಾರ್ಯನು ತಬ್ಬಿಬ್ಬಾದನು. ದೇವರಾಜನು ಹೇಳಿದನು ; “ಅಭಿಚಾರಾದಿ ಪ್ರಯೋಗಗಳಲ್ಲಿ ಕುಶಲರಾದ ಶುಕ್ರಾಚಾರ್ಯರು ದಯಮಾಡಿಸಿದ್ದಾರೆ. ಬ್ರಹ್ಮವಿದ್ಯಾ ಸಂಪನ್ನನಾದ ಮಹೇಂದ್ರನಿಗೆ ಹತ್ಯೆಯ ದಿಗಿಲು ಎಂದರೆ ಮೃತ್ಯುವಿಗೆ ಪಿಶಾಚ ಭಯವೆಂಬಂತೆ. ಅಲ್ಲದೆ, ಮಹಾವಿಷ್ಣುವಿನ ಅಪ್ಪಣೆಯಾಗಿರುವಂತೆ ಆತನು ಹಲವು ರೂಪಗಳನ್ನು ಧರಿಸಿ ನಿಲ್ಲಲಿ. ಅವಶ್ಯವಾದರೆ ಆ ಹತ್ಯೆಯು ಒಂದು ರೂಪವನ್ನು ಹಿಡಿಯಲಿ. ಕೆಲವು ರೂಪದಿಂದ ತಪಸ್ಸು ಮಾಡಿ ಶುದ್ಧಿಯನ್ನು ಸಂಪಾದಿಸಲಿ.”

“ಆಗಬಹುದು.... ಆದರೆ...”

“ಏನೂ ಇಲ್ಲ... ಆಚಾರ್ಯ. ಹತ್ಯೆಯು ಇದಕ್ಕೆ ಒಪ್ಪದಿದ್ದರೆ ಇಂದ್ರನಾದ ನಾನು ಅಪ್ಪಣೆ ಮಾಡುವೆನು. ಹತ್ಯೆಯು ಇಂದ್ರನನ್ನು ಬಿಟ್ಟರೆ ಸಮ. ಇಲ್ಲದಿದ್ದರೆ