ಪುಟ:Mahakhshatriya.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನನಗಿರುವ ಸರ್ವಶಕ್ತಿಯನ್ನೂ ಪ್ರಯೋಗಿಸಿ ಅದನ್ನು, ಎಳೆತರಿಸಿ ಬಂಧನದಲ್ಲಿಡುವೆನು. ಇಂದ್ರನು ಇಲ್ಲಿಗೆ ಬರಬೇಕು, ಕರೆಯಿರಿ.”

“ಹತ್ಯೆ....”

“ಹತ್ಯೆಯೇ? ಯಾರಲ್ಲಿ? ಚಿತ್ರರಥನನ್ನೂ ಅಗ್ನಿ ವಾಯುಗಳನ್ನೂ ಬರಮಾಡು. ಹಾಗೆಯೇ ಶುಕ್ರಾಚಾರ್ಯರನ್ನು ಇಲ್ಲಿಗೆ ಬಂದು ನಮ್ಮನ್ನು ಅನುಗ್ರಹಿಸುವಂತೆ ಪ್ರಾರ್ಥಿಸು.”

ಉತ್ತರಕ್ಷಣದಲ್ಲಿಯೇ ಅವರೆಲ್ಲರೂ ಬಂದರು. ದೈತ್ಯಗುರುಗಳನ್ನು ದೇವರಾಜನು ನಮಸ್ಕಾರಾದಿಗಳಿಂದ ಗೌರವಿಸಿ, “ಆಚಾರ್ಯ, ತಮ್ಮ ಸನ್ನಿಧಿಯಲ್ಲಿ ಕೆಲವು ಅಪ್ಪಣೆಗಳನ್ನು ಮಾಡುವೆನು. ಅನುಗ್ರಹ ಮಾಡಬೇಕು” ಎಂದು ಆತನ ಅನುಜ್ಞೆಯನ್ನು ಪಡೆದು ಅಗ್ನಿ ವಾಯುಗಳನ್ನು ಕುರಿತು ಹೇಳಿದನು ; ‘ತಾವಿಬ್ಬರೂ ದೇವಮಂತ್ರಿಗಳು. ದೇವರಾಜನ ಅಪ್ಪಣೆಯನ್ನು ಪರಿಪಾಲಿಸುವವರು ಅಲ್ಲವೇ?”

ನಹುಷನು ಯಾವಾಗಲೂ ಹಾಗೆ ಕಡ್ಡಾಯವಾಗಿ ಮಾತನಾಡಿರಲ್ಲಿಲ್ಲ. ಅದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು. ಯಾವಾಗಲೂ ಅವರನ್ನು ದೇವತೆಗಳು- ತನಗಿಂತ ಹೆಚ್ಚು ಎಂದು ಮಾತನಾಡುತ್ತಿದ್ದವನು ಇಂದೇಕೆ ಹೀಗೆ ನಿಷ್ಠುರವಾಗಿರುವನು ? ಎನ್ನಿಸಿತು. ಆದರೂ ಸ್ಥಾನಗೌರವವನ್ನು ಕಾಪಾಡುತ್ತ ಕೈಮುಗಿದು “ಹೌದು, ಅದಕ್ಕೇ ನಾವಿರುವುದು” ಎಂದರು.

ದೇವರಾಜನು ಆ ಪದವಿಗೆ ತಕ್ಕಂತೆ ಬಿಗಿದುಕೊಂಡು ನಿಷ್ಠುರವಾಗಿ ಆಜ್ಞೆ ಮಾಡುವಾಗ ಇರಬೇಕಾದ ಠೀವಿಯಿಂದ ಹೇಳಿದನು : “ಇಂದು ಮಹೇಂದ್ರನನ್ನು ಇಲ್ಲಿಗೆ ತರಬೇಕು. ಆತನಿಗೆ ಅಡ್ಡಿಯಾಗುವ ಹತ್ಯೆಯನ್ನು ಪುಣ್ಯಶಕ್ತಿಗಳನ್ನು ಬಿಟ್ಟು ಕಟ್ಟಿಸಿಬಿಡಿ. ಸಾಮಾನ್ಯ ಪುಣ್ಯಶಕ್ತಿಗಳಿಗೆ ಅದು ಸಾಧ್ಯವಾಗದಿದ್ದರೆ, ನಮಗೆ ಇದುವರೆಗೂ ಇರುವ, ಮುಂದೆ ಬರುವ ಪುಣ್ಯಗಳನ್ನೆಲ್ಲಾ ಸೇರಿಸಿ ಅದನ್ನು ಕಟ್ಟಿಹಾಕಿ. ಈ ಕೂಡಲೇ ಇದು ನಡೆಯಬೇಕು. ಯಜ್ಞೇಶ್ವರ, ಮಾತರಿಶ್ವ, ಆ ಹತ್ಯೆಯೇನಾದರೂ ಸಗ್ಗದಿದ್ದರೆ, ನೀವಿಬ್ಬರೂ ನಿಮ್ಮ ವಿಶ್ವರೂಪವನ್ನು ಧರಿಸಿ ಅದನ್ನು ಧ್ವಂಸಮಾಡಿಬಿಡಿ.”

ಅಗ್ನಿವಾಯುಗಳಿಗೆ ಈ ಮಾತನ್ನು ಕೇಳಿ ಮೈಯ್ಯುಬ್ಬಿತು. “ಹೀಗೆ ತಮಗೆ ಹಿಂದೆ ಅಪ್ಪಣೆಯಾಗಿದ್ದರೆ ಆ ಹತ್ಯೆಯು ಇದುವರೆಗೂ ಉಳಿಯುತ್ತಿರಲಿಲ್ಲ.” ಎನ್ನಿಸಿತು. “ಸರ್ವಪ್ರಕಾರದಿಂದಲೂ ಗೆದ್ದೆ ಬರುವೆವು” ಎಂದು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆಯನ್ನು ಮಾಡಿಕೊಂಡರು. ಅದಷ್ಟೂ ಧ್ವನಿಯಲ್ಲಿಯೇ ತೋರುತ್ತಿರಲು ‘ಅಪ್ಪಣೆ’ಯೆಂದರು.