ಪುಟ:Mahakhshatriya.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಹುಷನಿಗೆ ಒಂದು ಕನಸಾದಂತೆ ಆಯಿತು. ಜಾಗ್ರತ್ತು ಎನ್ನುವುದಕ್ಕೆ ತಾನು ಯಾರು? ತನ್ನ ಸುತ್ತಲೂ ಇರುವವರು ಯಾರು? ಎನ್ನುವುದೆಲ್ಲ ಗೊತ್ತಿದೆ. ಆದರೆ ಸ್ವಪ್ನವೃತ್ತಿಯಲ್ಲಿರುವಂತೆ ತಾನು ವೃತ್ತಿವಶನಾಗಿದ್ದಾನೆ. ಮೊದಲು ನಹುಷನೆದುರಿಗೆ ಇಬ್ಬರು ಬಂದಿದ್ದಾರೆ. ಒಬ್ಬನು ಶ್ರೋತ್ರಿಯನಂತೆ ವೇಷ ಭಾಷೆಗಳನ್ನುಳ್ಳವನು. ಇನ್ನೊಬ್ಬನು ಚೆಲ್ಲುಚೆಲ್ಲಾದರೂ ಮೋಹಕವಾದ ವೇಷಭಾಷೆಗಳುಳ್ಳವನು. “ನಾವು ಶ್ರೇಯಃಪ್ರೇಯಗಳು. ಇವನೇ ಪ್ರೇಯ. ನಿನ್ನ ದೇಹವು ಬೇಕೆನ್ನುವವನು ಇವನು. ನಿನಗೆ ಬೇಕಾದವನು ನಾನು” ಎನ್ನುತ್ತಾರೆ. ನಹುಷನು ನೋಡಿಕೊಳ್ಳುತ್ತಾನೆ. ತಾನು ಬೇರೆ, ದೇಹ ಬೇರೆ ಎಂದು ತಿಳಿಯುತ್ತದೆ. ತಾನು ಅಧಿಕಾರಿ ಎಂದು ತನಗೆ ಬೇಕಾದ ಶ್ರೇಯಸ್ಸನ್ನು ವರಿಸುತ್ತಾನೆ. ದೇಹವು ಏನೋ ವ್ಯತ್ಯಾಸಗೊಂಡು ಕರಣಗಳು ಬಹಿರ್ಮುಖವಾಗಿದ್ದುದು ಅಂತರ್ಮುಖವಾಗುತ್ತದೆ. ಆಗ ತನ್ನೊಳಗೆ ತಾನು ನೋಡಿಕೊಳ್ಳಲು ಸಾಧ್ಯವಾಗಿ ಅತೀಂದ್ರಿಯವಾದರೂ ಸಿದ್ಧವಾದ ಯಾವುದೋ ಶಕ್ತಿಯೊಂದು ಇರುವುದು ತಿಳಿದು ತನಗಿಂತಲೂ ಅದು ನಿಜವೆಂದು ಯಾರೂ ಹೇಳದೆಯೇ ಅರಿವಾಗುತ್ತದೆ. ಏನೋ ಭಾರವು ತನ್ನನ್ನು ಹಿಡಿದಿರುವಂತೆ ತೋರುತ್ತದೆ. ಆ ಒಳಗಿನ ಶಕ್ತಿಯನ್ನು ‘ಕಾಪಾಡು’ ಎಂದು ಕೇಳಿಕೊಳ್ಳುತ್ತಾನೆ. ಅದು ನಿರ್ವಿಕಾರವಾಗಿ ಇರುವುದು ಗೋಚರವಾಗುತ್ತದೆ. ಆಗ ತನಗೆ ಆ ಭಾರವು ಬಿದ್ದು ಹೋದಂತಾಗುತ್ತದೆ. ಆಗ ತಾನು ಅರಳುತ್ತಾನೆ. ಕಟ್ಟಿರುವ ಕಟ್ಟುಗಳೆಲ್ಲಾ ಶಿಥಿಲವಾಗಿ ತಾನು ಅರಳಿ ಅರಳಿ ಕೊನೆಗೆ ತಾನು ಪ್ರತ್ಯೇಕ ಎಂಬ ಭಾವನೆಯೂ ಅಳಿಯುತ್ತದೆ. ಅಲ್ಲಿ ಏನೋ ಜ್ಞಾನ. ಅದು ಅಹಂ ಅಲ್ಲ; ಅಸ್ಮಿ ಅಲ್ಲ ; ಎರಡಕ್ಕೂ ಆಧಾರವಾದ ಇನ್ನೇನೋ ಒಂದು.

ಧರ್ಮರಾಜನು ಕೈ ತೆಗೆದನು. ಒಂದು ಗಳಿಗೆಯ ಮೇಲೆ ನಹುಷನು ಪ್ರಕೃತಿಸ್ಥಾನನಾದನು. ಆತನಿಗೆ ತಾನು ಪಟ್ಟ ಅನುಭವವು ಸರಿ ಎನ್ನಿಸಿತು. ಅದರಲ್ಲಿ ಸಂಶಯ ವಿಪರೀತಗಳೊಂದೂ ಬರಲಿಲ್ಲ. ಎದ್ದು ನಮಸ್ಕಾರ ಮಾಡಲು ಹೋದನು. ಯಮನು ಅದನ್ನು ಅಂಗೀಕರಿಸದೆ, “ನೀನು ಇಂದ್ರ, ನಾನು ಯಮ. ಅದಿರಲಿ. ಈಗ ಶಾಸ್ತ್ರ ಅನುಭವ ಎರಡೂ ಸರಿಹೊಂದಿದುವಷ್ಟೆ ? ಸಮಯ ಬಂದಾಗ ಇದನ್ನು ಉಪಯೋಗಿಸಿಕೋ” ಎಂದು ಹೇಳಿ ಬೀಳ್ಕೊಂಡನು.

ದೇವಾಚಾರ್ಯನು ಇಂದ್ರನನ್ನು ಎಚ್ಚರಿಸಿದನು. ಆತನ ಕೋರಿಕೆಯಂತೆ ವರುಣನನ್ನು ಬರಮಾಡಿಕೊಂಡನು. ಆತನೂ ಯಮನಂತೆಯೇ “ನೀನು ಇಂದ್ರನಾದಾಗ ಇದೆಲ್ಲವನ್ನೂ ಕೊಟ್ಟಿರುವೆವು. ಕಾಲವು ಸನ್ನಿಹಿತವಾಗಲಿಲ್ಲವೆಂದು