ಪುಟ:Mahakhshatriya.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನನ್ನವು. ಹಾಗಿಲ್ಲದೆ ಕುಲಾರ್ಥವಾಗಿ, ನಿಷ್ಕಾಮನಾಗಿ, ಮಾಡುವಾಗ ನನಗೆ ಫಲಾಫಲಗಳು ಇಲ್ಲ ಭಾಮಿನಿ.”

“ದೇವ, ನೀನು ಸಾವಿರ ಹೇಳು. ನೀನು ಅಹಂಕಾರಸ್ವರೂಪ ನಾಗಿದ್ದುಕೊಂಡು ಅನಹಂಭಾವದಿಂದ ಕಾರ್ಯವನ್ನು ಮಾಡುವೆನೆನ್ನುವುದು ಅಸಂಭಾವ್ಯ. ಅದರಿಂದ, ಈ ಕಾರ್ಯಮಾಡುವಾಗ ಯೋಚಿಸಿ ಮಾಡು. ಪಾಪವು ಬಂದರೂ ಅದರಿಂದ ಅನರ್ಥವಾಗದಂತೆ ಮೊದಲೇ ನೀನು ಉಪಾಯವನ್ನು ಕಲ್ಪಿಸಿಕೊಂಡು, ಅನಂತರ ಈತನನ್ನು ವಿಸರ್ಜಿಸು.”

“ಬೃಹಸ್ಪತ್ಯಾಚಾರ್ಯನು ಮತ್ತೆ ಬರುವವರೆಗೂ ವಿಸರ್ಜನೆಯ ಯೋಚನೆಯಿಲ್ಲ ಅದರಿಂದ, ಆ ಆಚಾರ್ಯನನ್ನು ಹಲ್ಲು ಕಿತ್ತು ಹಾವನ್ನು ಆಡಿಸುವಂತೆ, ಆತನ ದಾನವಾಭಿಮಾನವು ನಿಷ್ಫಲವಾಗುವಂತೆ ಮಾಡಿ ಇಟ್ಟುಕೊಳ್ಳಬೇಕು.”

“ಅದು ಸಾಧ್ಯವೇ ? ನೀನೇ ಹೇಳಿದೆಯಲ್ಲ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲೆಂದು ?”

“ಸ್ವಭಾವವನ್ನು ತಡೆಗಟ್ಟುವುದು ಸಾಧ್ಯ, ತಪ್ಪಿಸಲು ಆಗುವುದಿಲ್ಲ ಹಾಗಾಗದಿದ್ದರೆ, ಆ ದುಃಸ್ವಭಾವವನ್ನು ನಿರೋಧಿಸಲು ವ್ಯಕ್ತಿಯನ್ನೇ ಸಂಹರಿಸಬೇಕಾಗುವುದು. ಆದರೆ ಈ ವಿಷಯದಲ್ಲಿ ಮೂಲಿಕೆಯನ್ನು ಮಾಡುವಂತೆ, ಇರುವ ಒಂದು ಗುಣವನ್ನು ವೃದ್ಧಿಪಡಿಸಿಕೊಂಡು, ಇತರ ಅವಗುಣಗಳನ್ನು ನಿರೋಧಿಸುವ ಸಂಸ್ಕಾರವನ್ನು ಮಾಡಿ, ಈ ವಿಷಯವನ್ನು ಅಮೃತಮಾಡಿಕೊಳ್ಳಬೇಕಾಗಿರುವುದು. ಈಗ ಆತನು ಸುರಾಪಾನವನ್ನು ಮಾಡುತ್ತ ತನ್ನ ಅಸುರಸ್ವಭಾವವನ್ನು ಉತ್ತೇಜಿತಗೊಳಿಸುತ್ತಿರುವನು. ಅದನ್ನು ತಡೆಗಟ್ಟಿ ಆತನು ಸುರಾಪಾನದ ಬದಲು ಸೋಮಪಾನ ಮಾಡುವಂತೆ ಮಾಡಿದರೆ ನಮ್ಮ ಕಾರ್ಯವು ಸಾಧ್ಯವಾಗುವುದು. ಚಿಂತಿಸಬೇಡ. ಅದಷ್ಟು ಅಸಾಧ್ಯದಂತೆ ಕಾಣುವುದಿಲ್ಲ.”

“ಆತನು ಆಚಾರ್ಯ. ನೀನು ಶಿಷ್ಯ. ಶಿಷ್ಯನಾಗಿ ಆಚಾರ್ಯನನ್ನು ಅದೆಂತÀÄ ವಿಧಾಯಕ ಮಾಡುವೆ ?”

ಇಂದ್ರನು ನಕ್ಕು ಹೇಳಿದನು : ‘ಮಹಾಸತಿ, ಅಲ್ಲಿಯೇ ದೇವರಹಸ್ಯವಿರುವುದು, ಶಿಷ್ಯನೆಂದು ತಲೆಬಾಗಿದ ಮಾತ್ರಕ್ಕೆ ನನ್ನ ದೇವರಾಜತ್ವಕ್ಕೆ ಕುಂದಿಲ್ಲ ಆತನು ಆಶೀರ್ವಾದ ಮಾಡುವನು. ನಾನು ಅದನ್ನು ತಲೆಬಾಗಿ ಸ್ವೀಕರಿಸುವೆನು. ಆದರೆ, ಆತನು ಆಶೀರ್ವಾದವನ್ನು ನನಗೆ ಫಲಮಂತ್ರಾಕ್ಷತೆಗಳೊಡನೆ ಸಮರ್ಪಿಸಬೇಕು. ಅಲ್ಲವೆ ? ಅದರಂತೆ ಆತನೂ ನನ್ನಾಜ್ಞೆಯನ್ನು ಪಾಲಿಸಬೇಕು. ಅದು ರಾಜಾಜ್ಞೆ ವಿಕೋಪಕ್ಕೆ ಏರಿದರೆ