ಪುಟ:Mahakhshatriya.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈ ಪ್ರಶ್ನವನ್ನು ಪುರಂದರನಾದ ಆತನಲ್ಲದೆ, ಇನ್ನು ಯಾರೂ ಪರಿಹರಿಸಲಾರರು’ ಎಂದನು. ಅದರಿಂದ ಇಲ್ಲಿಗೆ ಬಂದೆವು.”

ಇಂದ್ರನು ಯಜ್ಞೇಶ್ವರನ ಮುಖವನ್ನು ನೋಡಿ, ಆತನ ಮಂದಹಾಸದಿಂದಲೇ ಋಷಿಗಳ ಮಾತು ನಿಜವೆಂಬುದನ್ನು ಅರಿತು, “ಅಪ್ಪಣೆಯಾಗಲಿ. ಜಾತವೇದನೂ, ಸಪ್ತರ್ಷಿಗಳೂ ನಿಮಗೆ ಬಿಟ್ಟಿರುವ ಆ ಪ್ರಶ್ನವೆಂತಹುದು ಹೇಳಿ ಕೇಳೋಣ” ಎಂದನು.

ಋಷಿಗಳು ಹೇಳಿದರು. “ಪುರಂದರನಿಗೆ ಜಯವಾಗಲಿ. ದೇಹವು ನಾನಲ್ಲವೆಂದು ತಿಳಿದಿದ್ದರೂ, ದೇಹಗತವಾಗಿರುವ ಮನೋಬುದ್ಧಿಗಳನ್ನು ಪ್ರತ್ಯೇಕಿಸುವುದೆಂತು? ಇದನ್ನು ದಯವಿಟ್ಟು ತಿಳಿಹಿಸಿಕೊಡಬೇಕು.”

ಇಂದ್ರನು ಅದನ್ನು ಕೇಳಿ ನಕ್ಕನು. “ಈ ಪ್ರಶ್ನಕ್ಕೆ ಉತ್ತರವೂ ಬೇಕೆ ? ನಮ್ಮನ್ನು ದೊಡ್ಡವರನ್ನು ಮಾಡುವುದಕ್ಕೆ ಈ ಪ್ರಶ್ನವನ್ನು ಕೇಳುತ್ತಿರುವಿರಿ. ಆಗಲಿ ಹೇಳೋಣ” ಎಂದನು.

ಅಷ್ಟರಲ್ಲಿ ಸಭೆಯಲ್ಲಿ ಮಂದಮಾರುತನಿಂದ ಸಾಗರದಲ್ಲಿ ಏಳುವ ಸಣ್ಣ ಅಲೆಗಳಂತೆ ಕೊಂಚ ಚಲನವು ತೋರಿ ಎಲ್ಲರ ಕಣ್ಣುಗಳೂ ಬಾಗಿಲ ಕಡೆಗೆ ತಿರುಗಿದವು. ಇಂದ್ರನ ಮನಸ್ಸು ಪ್ರಶ್ನಕ್ಕೆ ಉತ್ತರ ಕೊಡುವತ್ತ ತಿರುಗಿದ್ದುದು ಬಲವಂತವಾಗಿ ಹಿಡಿದೆಳೆದಂತಾಗಿ, ಮುಖವು ಅಪ್ರಸನ್ನ ಮುದ್ರೆಯನ್ನು ಧರಿಸಿ, ಹುಬ್ಬುಗಳು ಗಂಟಿಕ್ಕಿದುವು. ಆ ವೇಳೆಗೆ ಸರಿಯಾಗಿ ಪ್ರಹರಿಯು ದೀರ್ಘೋಚ್ಛ ಧ್ವನಿಯಲ್ಲಿ “ಪರಾಕ್, ದೇವಗುರುಗಳು ದಯಮಾಡಿಸುತ್ತಿರುವರು!” ಎಂದು ಕೂಗಿದನು.

ಸಕಾಲದಲ್ಲಿ ದೇವಗುರುಗಳು ಆಸನದಲ್ಲಿ ಇರಲಿಲ್ಲವೆಂಬುದೊಂದು, ಋಷಿಗಣಗಳು ಬಂದಾಗ ಅವರಿಗೆ ಉಪಚಾರಮಾಡಲು ಇರಲಿಲ್ಲವೆಂಬುದೊಂದು, ತಾನು ಇನ್ನೆತ್ತಲೋ ತಿರುಗಿರುವಾಗ ಬಂದರೆಂಬುದೊಂದು, ಹೀಗೆ ನಾನಾ ಮುಖವಾದ ಅಸಮಾಧಾನಗಳೆಲ್ಲ ಸೇರಿ ಸಣ್ಣದೊಂದು ಆಕ್ರೋಶವು ಇಂದ್ರನ ಮನಸ್ಸಿನಲ್ಲಿ ಸುಳಿಯುತ್ತಿರುವಾಗ ದೇವಗುರುಗಳು ಸಭೆಯನ್ನು ಪ್ರವೇಶಿಸಿದರು. ಬರುತ್ತಿರುವ ಹಾಗೆಯೇ “ವಿಜಯೀಭವ” ಎನ್ನುತ್ತ ಕೈಯೆತ್ತಿಕೊಂಡು ಆಶೀರ್ವಾದ ಮಾಡುತ್ತಲೇ ಬಂದರು. ಆದರೆ ದೇವರಾಜನ ಮುಖಮುದ್ರೆಯನ್ನು ಕಾಣುತ್ತಿದ್ದ ಹಾಗೆಯೇ ತಾವೇನೋ ಅಕಾರ್ಯ ಮಾಡುತ್ತಿರುವವರಿಗೆ ಆಗುವಂತೆ, ಏನೋ ನಾಚಿಕೆಯಾಗಿ, ಹಾಗೆಯೇ ನಿಂತುಬಿಟ್ಟರು. ಬಾಯಲ್ಲಿ ಬರುತ್ತಿದ್ದ ಆಶೀರ್ವಾದೋಕ್ತಿಯೂ ಹಾಗೆಯೇ, ಅರ್ಧದಲ್ಲಿ,