ಪುಟ:Mahakhshatriya.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦.ಬೆಂಕಿಯು ಹೊತ್ತಿತು

ತ್ವಷ್ಟೃಬ್ರಹ್ಮನು ಪುತ್ರವಧವೃತ್ತಾಂತವನ್ನೆಲ್ಲಾ ಕೇಳಿದನು. ಆತನಿಗೆ ಕೋಪವು ಮಿತಿಮೀರಿತು. “ಇಂದ್ರನು ಇಂತಹ ಅಕಾರ್ಯವನ್ನು ಮಾಡಿದನೆ ! ಮತ್ತೆ ಲೋಕದಲ್ಲಿ ಇಂದ್ರನೇ ಇಲ್ಲದಂತೆ ಮಾಡದಿದ್ದರೆ ನಾನೇಕಾದೇನು ?” ಎಂದು ಹಾರಾಡಿದನು. ಆತನ ಹೆಂಡತಿಯ ದುಃಖವಂತೂ ಹೇಳತೀರದು.

ಆಕೆಗೆ ಎಲ್ಲಿ ನೋಡಿದರೂ ಮಗನೇ ಕಾಣಿಸುತ್ತಾನೆ. ಕೂಡಲೇ ಕಣ್ಣಲ್ಲಿ ನೀರು ಪ್ರವಾಹವಾಗಿ ಬರುತ್ತದೆ. ಮೈಯೆಲ್ಲಾ ಹಿಡಿದಂತೆ ನೋವಾಗಿ, ಆ ನೋವೆಲ್ಲವೂ ಎದೆಗೆ ಬಂದು, ಭಾರವಾಗಿ, ಆ ಭಾರವನ್ನು ತಡೆಯಲಾರದವಳಂತೆ ಎಲ್ಲೆಂದರಲ್ಲಿ ಧೊಪ್ಪನೆ ಬಿದ್ದು ಹೋಗುತ್ತಾಳೆ. ಬೀಳುವಾಗ ಕಲ್ಲು ಗೋಡೆ, ಮರ, ಏನೂ ತೋರದೆ ಎಲ್ಲೆಂದರಲ್ಲಿ ಮಗನೇ ಎಂದು ಬೀಳುವ ಮಡದಿಯನ್ನು ನೋಡಿ ತ್ವಷ್ಟೃವಿಗೆ ಇವಳು ಏನಾಗುವಳೋ ಎಂದು ಭೀತಿಯಾಗುತ್ತದೆ. ಮಗನನ್ನು ಕೊಂದವನ ಮೇಲೆ ಕೋಪ, ಹೆಂಡತಿಯೇನಾಗುವಳೋ ಎಂಬ ಭೀತಿ, ಎರಡೂ ಸೇರಿ ಆತನಿಗೆ ಮೈಮೇಲೆ ಅರಿವೇ ಇಲ್ಲವಾಗುತ್ತದೆ. ಅರಿವು ಬಂದಾಗ, ``ಇಂದ್ರನು ನನ್ನ ಮಗನನ್ನು ತಾನಾಗಿ ಕರೆದುಕೊಂಡು ಹೋಗಿ ಹೀಗೆ ಮಾಡಿದನಲ್ಲ! ಅವನಿರಬಾರದು ಎಂದು ರೇಗುತ್ತಾನೆ. ಪುತ್ರಶೋಕದಿಂದ ಗಂಡಹೆಂಡಿರಿಬ್ಬರೂ ಬೆಂಕಿಗೆ ಬಿದ್ದು ಈಚೆಗೆ ಬಂದ ಹುಳುವಿನಂತೆ ಒದ್ದಾಡುತ್ತಿದ್ದಾರೆ. ಅಳುತ್ತಿದ್ದರೆ ಏನೋ ಒಂದು ಸಮಾಧಾನ. ಅಳು ಒಂದು ಗಳಿಗೆ ನಿಂತರೆ ಮೈಯ್ಯೆಲ್ಲಾ ಉರಿಯುವಂತಾಗುತ್ತದೆ. ತಣ್ಣೀರಿನ ಸ್ನಾನ, ಒದ್ದೆಬಟ್ಟೆ ಏನೂ ಆ ಉರಿಯನ್ನು ಶಮನಗೊಳಿಸಲಾರದು.

ಕಶ್ಯಪನು ಇಂದ್ರನ ಕಡೆಯಿಂದ ಬಂದನು. ಕಾಮಧೇನುವಿನ ಮಕ್ಕಳು, ನಂದನದಿಂದ ಕಲ್ಪವೃಕ್ಷದ ಸಸಿಗಳು, ಚಿಂತಾಮಣಿಯ ಸಂತಾನ, ಎಲ್ಲವನ್ನೂ ತಂದು ತ್ವಷ್ಟೃವಿಗೆ ಕಾಣಿಕೆ ಮಾಡಿ, ಮಗನನ್ನು ಕಾಪಾಡಬೇಕೆಂದು ಕೇಳಿಕೊಳ್ಳಲು ಆತನು ಬಂದಿದ್ದಾನೆ.

ತ್ವಷ್ಟೃವು ಅವುಗಳನ್ನು ಕಣ್ಣೆತ್ತಿ ನೋಡಲೂ ಇಲ್ಲ. “ಕಶ್ಯಪ ! ಇವುಗಳಿಂದಲೇ ನಿನ್ನ ಮಗನಿಗೆ ಅಹಂಕಾರವು ಬಂದು, ಅವನು ಅಂತಹ ಅಕಾರ್ಯವನ್ನು ಮಾಡಿದುದು.