ಪುಟ:Mahakhshatriya.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧. ಕಿಚ್ಚು ಏಳುತ್ತಿದೆ

ಪಾತಾಳಲೋಕದಲ್ಲಿ ಸಮರಸಿದ್ಧತೆಯು ನಡೆದಿದೆ. ದಾನವಕುಲವೆಲ್ಲ ಸಬಾಂಧವರಾಗಿ ಸಪರಿವಾರರಾಗಿ ಅಲ್ಲಿಗೆ ಬಂದಿದ್ದಾರೆ. ಪ್ರಕಟವಾಗಿ “ನಾವು ಸ್ವರ್ಗದ ಮೇಲೆ ದಾಳಿ ಮಾಡುವೆವು” ಎಂದು ಉದ್ಘೋಷಿಸುತ್ತಾರೆ. ಮುಚ್ಚು ಮರೆಯೇನೂ ಇಲ್ಲ. ಬಹುದಿನದಿಂದ ಕಾದಿದ್ದ ಅವಕಾಶವು ಇಂದು ದೊರಕಿದೆಯೆಂದು ಅವರಿಗೆಲ್ಲ ಪರಮಸಂತೋಷವಾಗಿದೆ. ಎಲ್ಲರ ಬಾಯಲ್ಲೂ ವೃತ್ರಾಸುರನ ಮಾತೇ! ಎಲ್ಲರೂ ಅವನನ್ನು ಹೊಗಳುವವರೆ! ಅವನೀಗ ಚಕ್ರವರ್ತಿ, ಸುರದ್ವೇಷಿಗಳೆಲ್ಲ ಅವನ ಹಿಂಬಾಲಿಗರು. ಅವನ ಸೇನೆಗೆ ಅಂತ್ಯವಿಲ್ಲ ಪಾರವಿಲ್ಲ. ಎಲ್ಲೆಲ್ಲಿಯೂ ಅವನ ಸೇನೆ.

ಪಾತಾಳಲೋಕದಲ್ಲಿರಲಿ, ಮಧ್ಯಮಲೋಕದಲ್ಲಿಯೂ ವೃತ್ರಾಸುರನ ಪ್ರಭಾವವು ತಲೆಹಾಕಿದೆ. ಆದರೆ ಚಕ್ರವರ್ತಿಯಾದ ಆಯುವಿನ ಪ್ರಭಾವದ ಮುಂದೆ ಅದು ಅಷ್ಟು ಪರಿಣಾಮಕಾರಿಯಾಗಿಲ್ಲ. ಹಾಗೆಂದು ಪರಿಣಾಮಕಾರಿಯಾಗದೆಯೂ ಇಲ್ಲ. ಜನರೆಲ್ಲ ಕಾಮೋಪಭೋಗಗಳಲ್ಲಿ ವಹಿಸಿರುವಷ್ಟು ಆಸಕ್ತಿಯನ್ನು ಇನ್ನು ಯಾವುದರಲ್ಲೂ ವಹಿಸಿಲ್ಲ. ಬಹುವಾಗಿ ಪ್ರೇಯೋ ಮಾರ್ಗದ ಕಡೆಗೆ ತಿರುಗಿದ್ದಾರೆ ಜನವೆಲ್ಲ ಎಂದರೆ ಅತಿಶಯೋಕ್ತಿಯಲ್ಲ. ಚಕ್ರವರ್ತಿಯು “ಏನೋ ಆಗಿದೆ. ಇದು ನನ್ನ ತಪ್ಪೋ ? ನಾನೇನಾದರು ತಪ್ಪು ಮಾಡಿದ್ದೇನೋ ?” ಎಂದು ಒಮ್ಮೊಮ್ಮೆ ಸಂದೇಹ ಪಡುತ್ತಾನೆ. ಮತ್ತೆ “ಸತ್ತ್ವಗುಣವು ರಜೋಗುಣದ ಕಡೆಗೆ ತಿರುಗುತ್ತಿರುವಂತಿದೆ ಅದರಿಂದ ಹಾಗಾಗಿರಬೇಕು. ಯಾವಾಗಲೂ ಜಗತ್ತು ಹೀಗೆ ಅಧೋಮುಖ ಗತಿಯಾಗಿರುವುದೇ ಸ್ವಭಾವ. ಆದರೂ ನನ್ನ ಪ್ರಜೆಗಳು ಹೀಗಾಗಬಾರದು, ಅವರನ್ನು ಸನ್ಮಾರ್ಗದಲ್ಲಿ ಹೋಗುವಂತೆ ಮಾಡುವುದು ನನ್ನ ಧರ್ಮ” ಎಂದು ಹೊಸ ಹೊಸ ದಾನಗಳನ್ನು ಹೊಸ ಹೊಸ ವ್ರತಗಳನ್ನು ಅರಮನೆಯಲ್ಲಿ ಮಾಡುತ್ತಾ ಪ್ರಜಾಮುಖಂಡರಿಂದ ಮಾಡಿಸುತ್ತಾ ಧರ್ಮಾಭಿವೃದ್ಧಿಯ ಕಡೆಗೆ ಜನರ ಮನಸ್ಸು ತಿರುಗಿಸುತ್ತಾನೆ.

ಮಧ್ಯಮಲೋಕದಲ್ಲಿ ಜನರ ಮನಃಪ್ರವೃತ್ತಿಯು ಕಾಮೋಪಭೋಗಗಳ ಕಡೆಗೆ ತಿರುಗಿರುವುದನ್ನು ನೋಡಿ, ದೇವತೆಗಳು “ಇದು ಇಂದ್ರನು ಕೊಟ್ಟ