ಪುಟ:Mahakhshatriya.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨.ಭಯವು ತಪ್ಪಿದ್ದಲ್ಲ

ಇತ್ತ ಇಂದ್ರನಿಗೆ ವೃತ್ರಾಸುರನ ಸುದ್ದಿತಿಳಿಯದೆ ಇಲ್ಲ. ಆತನಿಗೆ ಕುಳಿತರೆ, ನಿಂತರೇ ಅದೇ ಯೋಚನೆ. ತನ್ನ ಮಿತ್ರರಾದ ಅಗ್ನಿವಾಯುಗಳೊಡನೆ ಏನಾದರೂ ಆಲೋಚನೆ ಮಾಡುತ್ತಿರುತ್ತಾನೆ. ಆಗ ನಡುವೆ ವೃತ್ರ ಚಿಂತೆಯು ಬಂದು, ವೃತ್ರನು ಬೆಳೆಯುತ್ತಿರುವಂತೆಯೇ ಬೆಳೆದು ತಾನೇ ತಾನಾಗುತ್ತದೆ. ಇನ್ನೊಮ್ಮೆ ಶಚಿಯೊಡನೆ ಏಕಾಂತದಲ್ಲಿ ಏನೋ ಮಾತಾಡುತ್ತಿರುತ್ತಾನೆ. ಅಲ್ಲಿ ವೃತ್ರ ವೃತ್ತಾಂತವು ಹೇಗೋ ನುಸುಳಿಕೊಂಡು ಬಂದು ಮಿಕ್ಕೆಲ್ಲವನ್ನೂ ಮೀರಿ ನಿಲ್ಲುತ್ತದೆ. ಮತ್ತೊಮ್ಮೆ ದೇವಗುರುಗಳಾದ ಬೃಹಸ್ಪತ್ಯಾಚಾರ್ಯರ ಬಳಿ ಏನೋ ರಾಜಕಾರಣವನ್ನು ಕುರಿತು ಮಾತನಾಡುವಾಗ ವೃತ್ರಾಸುರ ಸಮಾಚಾರವು ಬಂದು, ಇಂದ್ರನ ಹೃದಯದಲ್ಲಿ ಎಷ್ಟು ಭೀತಿಯು ತುಂಬಿದೆ ಎಂಬುದು ವ್ಯಕ್ತವಾಗುತ್ತದೆ. ಮರವು ಎತ್ತರವಾದಷ್ಟೂ ಕೊನೆಗಳು ಸಣ್ಣದಾಗಿರುತ್ತವೆ ; ಆ ಕೊನೆಕೊನೆಗಳಲ್ಲಿ ಗಾಳಿಯ ಭೀತಿಯು ಹೆಚ್ಚಿ ಅಲ್ಲಿ ಮರವು ಎಷ್ಟೋ ದಿನ ಕಷ್ಟಪಟ್ಟು ಬೆಳೆಸಿದ ಕೊನೆಗಳು ಲಟಕ್ಕನೆ ಮುರಿದು ಬೀಳುತ್ತವೆ. ಹಾಗೆ ಆಗಿದೆ ಇಂದ್ರನ ಸ್ಥಿತಿ. ಇಂದ್ರನಿಗೆ ವೃತ್ರನ ದಿಗಿಲು ಅಷ್ಟಿಷ್ಟಲ್ಲ. ಯಾವ ರಾಗವನ್ನು ಹಾಡಿದರೂ ಅದಕ್ಕೆ ಆಧಾರಶ್ರುತಿಯು ಇದ್ದೇ ಇರುವಂತೆ, ಅವನು ಯಾವ ಕೆಲಸಮಾಡುತ್ತಿರಲಿ, ತಪ್ಪದೆ ಅಲ್ಲಿ ಯಾವುದಾದರೂ ಒಂದು ರೂಪವಾಗಿ ವೃತ್ರಭೀತಿಯಿದ್ದೇ ಇದೆ.

ಒಮ್ಮೊಮ್ಮೆ ಹಿಂದಿನದೆಲ್ಲ ನೆನಪಾಗುತ್ತದೆ. “ಅದೊಂದು ವಿಷಗಳಿಗೆ.ಆ ಮುನಿಗಣವು ಬಂದಾಗ, ಸಭೆಯು ಎಷ್ಟಾದರೂ ದೇವಸಭೆ, ಅಲ್ಲಿ ಬ್ರಹ್ಮಪ್ರವಚನವು ಸರಿಯಲ್ಲ ಎನ್ನುವುದು ಮನಸ್ಸಿಗೆ ಬಂದಿದ್ದರೆ ಇಷ್ಟು ಅನರ್ಥವಾಗುತ್ತಿರಲಿಲ್ಲವೋ ಏನೊ” ಎನ್ನಿಸಿ, ಆಗ ಬೃಹಸ್ಪತಿಯು ಬಂದು ತನಗೆ ಮರ್ಯಾದೆಯಾಗಲಿಲ್ಲವೆಂದು ಹೊರಟುಹೊದುದು, ತಾನು ಹೋಗಿ ಬ್ರಹ್ಮನನ್ನು ಕಂಡು ಆಚಾರ್ಯನೊಬ್ಬನು ಬೇಕೆಂದುದು, ಆತನು ವಿಶ್ವರೂಪನನ್ನು ಕೊಡುವಾಗಲೇ ‘ಅನರ್ಥವಾಗದಂತೆ ನೋಡಿಕೋ’ ಎಂದುದು ಎಲ್ಲವೂ ನೆನಪಾಗುತ್ತದೆ.

“ಹಾಗಾದರೆ ನಾನು ವಿಶ್ವರೂಪಾಚಾರ್ಯನಲ್ಲಿ ತಪ್ಪಿ ನಡೆದೆನೆ ? ಆತನನ್ನು