ಪುಟ:Mahakhshatriya.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪.ಸೊತರೂ ಸೋಲಲಿಲ್ಲ

ವೃತ್ರಾಸುರನು ತನ್ನ ಏಕಾಂತಗೃಹದಲ್ಲಿ ಕುಳಿತಿದ್ದಾನೆ. ದಾನವೇಂದ್ರರ ಗೂಢಚಾರರ ಪಡೆಯ ಒಡೆಯನು ಬಂದು ದಧೀಚಿಯಿಂದ ವಜ್ರಾಯುಧವನ್ನು ಇಂದ್ರನು ಸಂಪಾದಿಸಿದ ಕಥೆಯನ್ನೆಲ್ಲಾ ಹೇಳಿದ್ದಾನೆ. ದಾನವೇಂದ್ರರು “ಪ್ರಭು, ಹೀಗೇ ಬಿಟ್ಟುಕೊಂಡು ಬಂದರೆ, ದೇವತೆಗಳ ಆಯುಧಭಂಡಾರವು ಬಲವಾಗಿ ಅವರು ಅಜೇಯರಾಗುವರು. ಅದರಿಂದ ಆದಷ್ಟು ಬೇಗ ಮೇಲೆ ಬಿದ್ದು ಅವರನ್ನು ನಿರ್ನಾಮ ಮಡಬೇಕು” ಎಂದು ಹೇಳುತ್ತಿದ್ದಾರೆ. ವೃತ್ರಾಸುರನು ಸುಖಾಸನದಲ್ಲಿ ಕುಳಿತಿದ್ದಾನೆ. “ಈಗ ಆಚಾರ್ಯರು ಬರುವ ಹೊತ್ತಲ್ಲವೆ ?” ಎಂದು ಕೇಳುತ್ತಿದ್ದಾನೆ. ‘ಶುಕ್ರಾಚಾರ್ಯರು ದಯಮಾಡಿಸುತ್ತಿರುವರು’ ಎಂದು ಪ್ರಹರಿಯು ಬಂದು ಅರಿಕೆ ಮಾಡಿದನು. ವೃತ್ರನು ಪರ್ವತದಂತಹ ತನ್ನ ದೇಹವನ್ನು ಸುಲಭವಾಗಿ ಮೇಲಕ್ಕೆತ್ತಿಕೊಂಡು ಎದ್ದು ಆಚಾರ್ಯರಿಗೆ ನಮಸ್ಕಾರ ಮಾಡಿದನು. ಆಗ ಆಚಾರ್ಯರು “ವಿಜಯವಾಗಲಿ” ಎಂದು ಆಶೀರ್ವಾದ ಮಾಡಿ, ಇತರ ದಾನವೇಂದ್ರರ ನಮಸ್ಕಾರಗಳನ್ನು ಕೈಕೊಂಡು ತಮ್ಮ ಉನ್ನತಾಸನದಲ್ಲಿ ಕುಳಿತರು.

ವೃತ್ರಾಸುರನು ಶುಕ್ರನನ್ನು ಕೇಳಿದನು : “ನಾವಿನ್ನು ದೇವವಿಜಯಕ್ಕೆ ಹೊರಡಬಹುದೇ ?”

ಆಚಾರ್ಯನು “ವೃತ್ರೇಂದ್ರ, ಎಂದಿನಂತೆ ದೇವವಿಜಯಕ್ಕೆ ಹೊರಡುವುದು ಯಾವಾಗ ಎಂದು ಕೇಳಲಿಲ್ಲ, ಹೊರಡಬಹುದೇ ಎಂದು ಕೇಳಿದೆ. ಅಲ್ಲಿಗೆ ಹೊರಡಬೇಕೆಂದು ಸಂಕಲ್ಪಿಸಿದಂತೆ ಕಾಣುತ್ತದೆ, ಹೊರಡು” ಎಂದು ನಿಟ್ಟುಸಿರು ಬಿಟ್ಟನು.

“ನಿಟ್ಟುಸಿರೇಕೆ ಆಚಾರ್ಯ ?”

“ಈ ಲಗ್ನದಲ್ಲಿ ಹೊರಟರೆ ನಿನಗೆ ವಿಜಯವಾಗುವುದು. ಶತ್ರುವು ಕರಗತನಾಗುವನು. ಆದರೂ ಕಾಲಾಂತರದಲ್ಲಿ ಅವನೇ ಮೃತ್ಯುವಾಗುವನು. ನಾನು ಕಾಯುತ್ತಿದ್ದುದು ಇನ್ನೊಂದು ಮುಹೂರ್ತ. ಅದರಲ್ಲಿ ಪ್ರಸ್ಥಾನ ಮಾಡಿಹೊರಟರೆ, ಶತ್ರುವು ನಿರ್ನಾಮವಾಗಿ, ಸ್ವರ್ಗಾಧಿಪತ್ಯವು ಈ ಮನ್ವಂತರವು ಕಳೆಯುವವರೆಗೂ ನಿನ್ನದಾಗಿರುತ್ತಿತ್ತು.”