ಪುಟ:Mahakhshatriya.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಈ ದೇಹವು ಇರುವಂತೆಯೇ ಅದು ವಿಪನ್ನವಾಗುವುದಕ್ಕೆ ಮೊದಲೇ, ಈ ಸ್ಥಿತಿಯನ್ನು ಕಾಣುವುದೇ ಪುರಂದರೋಪಾಸನೆಯ ಫಲವು. ಅದು ದೊರೆಯಲೆಂದು ನನ್ನನ್ನು ಆಶ್ರಯಿಸಿ. ನಾನು ಪ್ರಜಾಪತಿಯ ದಯೆಯಿಂದ ಪಡೆದ ಈ ವಿದ್ಯೆಯನ್ನು ಬಲ್ಲವರು ಉಪಾಸನೆ ಮಾಡುವರು. ಇದರಿಂದ ನನ್ನಲ್ಲಿ ಅಪ್ಯಯವನ್ನು ಪಡೆದು ಮನ್ವಂತರದ ಕೊನೆಯವರೆಗೂ ನನ್ನಲ್ಲಿದ್ದು ನನ್ನೊಡನೆ ಮುಕ್ತರಾಗುವರು. ‘ಅದು ಬೇಡ, ಸದ್ಯೋಮುಕ್ತಿಯು ಬೇಕು’ ಎನ್ನುವವರು ಪರಶಿವವನ್ನು ಆಶ್ರಯಿಸಿ, ಶುದ್ಧವಿದ್ಯೆಯಿಂದ ಉಪಾಸನೆ ಮಾಡಿದರೆ, ಆತನು ದೇಹದಲ್ಲಿರುವ ಸ್ಥೂಲಸೂಕ್ಷ್ಮ ಕಾರಣ ಪುರತ್ರಯಗಳು ಒಟ್ಟು ಸೇರಿದಾಗ ಅವನ್ನು ಭೇದಿಸಿ ಭಕ್ತನನ್ನು ಕೃತಾರ್ಥಮಾಡುವನು.”

“ಇದು ತಮ್ಮ ಪ್ರಶ್ನಕ್ಕೆ ಉತ್ತರವು. ಇನ್ನೇನಾಗಬೇಕು ? ಇದು ತಿಳಿಯಿತೆ?” ಋಷಿಗಣವು ತಾವು ಕೃತಾರ್ಥರಾದೆವೆಂದು ಪುರಂದರನಿಗೆ ವೇದೋಕ್ತವಾದ ಇಂದ್ರಮಂತ್ರಗಳ ಪೂರ್ವಕವಾದ ನಮಸ್ಕಾರ ಮಾಡಿದರು.

ಇಂದ್ರನಿಗೆ ಬ್ರಹ್ಮ ವಿಚಾರಮಾಡುತ್ತ ಪೂರ್ಣಭಾವವು ಬಂದಿತು. ಆಗ ಮತ್ತೆ ಯಾರದೂ ನೆನಪಿರಲಿಲ್ಲ. ವೇಳೆಯಾಯಿತೆಂದು ಪ್ರಹರಿಯು ದೀರ್ಘ-ಉಚ್ಚ-ಸ್ವರದಿಂದ ಸಭೆಯ ಮುಕ್ತಾಯವನ್ನು ಸೂಚಿಸಿದನು. ಇಂದ್ರನು ಶಚೀಸಮೇತನಾಗಿ ಎದ್ದನು. ಸಭಾಸದರೂ ಎದ್ದರು.

* * * *