ಪುಟ:Mahakhshatriya.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಲಕ್ಕೆದ್ದು “ಇದು ಅಪ್ಪಣೆಯಲ್ಲ ವಿಶ್ವಾಸದ ಪ್ರಾರ್ಥನೆ. ಹಾಗೆಯೇ ಸಮುದ್ರತೀರಕ್ಕೆ ಹೋಗಿ ಬರೋಣ, ರಥವನ್ನು ತರಿಸುವೆಯಾ ?” ಎಂದನು.

ಇಂದ್ರನು “ಪ್ರಾರ್ಥನೆಯೆನ್ನುವಷ್ಟು ಗೌರವವೇಕೆ ? ತರಿಸುವೆನು” ಎಂದು ಹೇಳಿ ಹೋಗಿ ಪ್ರಹರಿಗೆ ಹೇಳಿದನು. ಇನ್ನೊಂದು ಗಳಿಗೆಯೊಳಗಾಗಿ ರಥವು ಬಂತು. ಇಂದ್ರ ವೃತ್ರರಿಬ್ಬರೇ ರಥದಲ್ಲಿ ಕುಳಿತು ಸಮುದ್ರತೀರಕ್ಕೆ ಹೊದರು. ಇಂದ್ರನಿಗೆ ಆಶ್ಚರ್ಯ ! ವೃತ್ರನು ಯಾವ ಕವಚವನ್ನೂ ಧರಿಸಿಲ್ಲ. ತಾನೂ ಯಾವ ಕವಚವನ್ನೂ ಧರಿಸಿಲ್ಲ. ಮೈಮೇಲೆ ಅಷ್ಟು ಆಭರಣಗಳಿವೆ. ಅಂದು ವೃತ್ರ ತನ್ನ ಗುರುಕಿರೀಟವನ್ನೂ ಧರಿಸಿಲ್ಲ !

ಸಮುದ್ರ ತೀರದಲ್ಲಿ ಯಾವುದ್ಯಾವುದೋ ಮಾತುಗಳನ್ನು ಆಡುತ್ತ ಆಡುತ್ತ ಇಬ್ಬರೂ ಸಂತೋಷವಾಗಿ ಹೊತ್ತು ಕಳೆಯುತ್ತಿದ್ದಾರೆ. ಇಂದ್ರನ ಮನಸ್ಸು ಮಾತ್ರ ಯಾವುದೋ ಮಹತ್ತರವಾದ ಕಾರ್ಯವನ್ನು ಸಾಧಿಸಬೇಕಾದ ಕಾಲದಲ್ಲಿ ಇರುವಂತೆ ಪೂರ್ಣವಾಗಿ ಜಾಗ್ರತವಾಗಿದೆ. ವೃತ್ರನು ತನ್ನ ದುಃಖವನ್ನು ಹೇಳಿಕೊಳ್ಳುತ್ತಾನೆ. “ನೋಡು ಇಂದ್ರ, ಬೇಕೆಂದರೂ ನಾನು ಯಾರೊಡನೆಯೂ ಯುದ್ಧಮಾಡುವಂತಿಲ್ಲವೋ? ನನಗೆ ಮಲ್ಲಯುದ್ಧ ಮಾಡಬೇಕೆಂದು ಆಸೆ. ನೀನು ಬೇಕೆಂದರೆ ಪರ್ವತದಷ್ಟು ಆಗಬಲ್ಲೆಯಂತೆ ! ಏಕೆ ನೀನು ನನ್ನ ಪ್ರಮಾಣಕ್ಕೆ ಸರಿಯಾದ ಪ್ರಮಾಣವುಳ್ಳವನಾಗಿ ನನ್ನೊಡನೆ ಒಮ್ಮೆ ಮಲ್ಲಯುದ್ಧ ಮಾಡಬಾರದು?” ಎನ್ನುತ್ತಾನೆ.

ಇಂದ್ರನು “ಅದೇನೂ ಅಂತಹ ಅಸಾಧ್ಯವಲ್ಲ. ಆದರೂ ನಿಜ ಹೇಳಬೇಕೆಂದರೆ ನಿನ್ನೆದುರಿನಲ್ಲಿ ನನ್ನ ಯಾವ ಪ್ರಭಾವವೂ ನಡೆಯುವುದಿಲ್ಲ. ನಿನ್ನನ್ನು ಕಂಡು ನನ್ನ ಸಿದ್ಧಿಗಳೇಲ್ಲ ಹೆದರಿ, ಎಲ್ಲಿಯೋ ಅವಿತುಕೊಂಡಂತಿವೆ” ಎಂದು ನಗುತ್ತಾನೆ.

“ಇಲ್ಲ ಇಂದ್ರ, ನಿನ್ನ ಸಿದ್ಧಿಗಳು ನಿನಗೆ ಹಿಂತಿರುಗಲಿ. ಜೊತೆಗೆ ನಾನೇ ಕೊನೆಗೆ ಸೋಲುತ್ತೇನೆ. ಇನ್ನಾದರೂ ಮನಸ್ಸು ಮಾಡು.”

“ನನ್ನ ಸಿದ್ಧಿಗಳೆಲ್ಲ ನನಗೆ ಹಿಂತಿರುಗಿ ಬಂದರೂ ನಾನೂ ನೀನೂ ಸ್ನೇಹಿತರಾಗಿರುವುದಾಗಿ ಪ್ರಮಾಣ ಮಾಡಿಕೊಂಡಿದ್ದೇವೆ. ಮಲ್ಲಯುದ್ಧವು ಏನಿದ್ದರೂ ಪ್ರಾಣವನ್ನು ಪಣವಾಗಿಟ್ಟು ಮಾಡಿದರೆ ಚೆನ್ನ ನಾನು ನಿನ್ನ ದ್ವೇಷಿಯಲ್ಲ. ಅದರಿಂದ ಸಾಧ್ಯವಿಲ್ಲ.”

“ಹಾಗಲ್ಲ ಇಂದ್ರ, ನಾನೇ ಅಪ್ಪಣೆ ಕೊಡುತ್ತೇನೆ. ನಿನಗೆ ವಿಶ್ವಾಸಘಾತುಕತ್ವವು ಬರದಿರಲಿ. ನಾನು ವರವನ್ನು ಕೊಡುತ್ತೇನೆ. ಬಾ, ಒಮ್ಮೆ ಮಲ್ಲಯುದ್ಧ ಮಾಡೋಣ.