ಪುಟ:Mahakhshatriya.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾಗ ಮಾಡಿದುದು? ಹೀಗಿರಲು ವೃತ್ರವು ಇಂದ್ರನಿಂದ ಹತನಾದುದು ಹೇಗೆ?”

ದೇವಿಯು ನಕ್ಕು ಹೇಳಿದಳು : “ಅದೊಂದು ಸಣ್ಣ ವಿಷಯ. ವ್ಯಾಕರಣವು ವೇದಾಂಗ, ಅದರಲ್ಲಿ ಸ್ವರವು ಸಮಾಸವನ್ನು ಬೇರೆ ಮಾಡುವುದು ಎಂದು ಹೇಳಿರುವುದನ್ನೇಕೆ ಮರೆತೆ? ತ್ವಷ್ಟೃವು ಇಂದ್ರನಿಗೆ ಶತ್ರುವಾಗಬೇಕೆಂದು ಸಂಕಲ್ಪಿಸಿದನು. ನಾನು ಸ್ವರಭೇದವನ್ನು ಮಾಡಿ ಇಂದ್ರನ ಶತ್ರುವಾಗುವವನು ಹುಟ್ಟುವಂತೆ ಮಾಡಿದೆನು. ಅದೇಕೆ ಎನ್ನುವೆಯಾ? ಅದನ್ನು ಹೇಳುವೆನು ಕೇಳು. ಇಂದ್ರನು ಮನ್ವಂತರವೆಲ್ಲ ಇರಬೇಕಾದವನು. ಆತನಿಗೆ ಅಪಾಯ ಬಂದಾಗ ನಾವು ಯಾರೂ ಸುಮ್ಮನಿರುವುದು ಸಾಧ್ಯವಿಲ್ಲ. ಅದರಿಂದ ಹೀಗಾಯಿತು. ಇದು ನೀನು ಕೇಳಿದೆಯಾಗಿ ಹೇಳಿದೆ. ಇನ್ನು ಬಿಡು, ನಾನು ಹೋಗುವೆನು?” ಎಂದು ಆಕೆಯು ಹೊರಟುಹೋದಳು.

ಶುಕ್ರನು “ದೇವತೆಗಳ ಮೋಸ ! ಏನು ಮಾಡಬೇಕು ?” ಎಂದು ಯೋಚಿಸಿ “ವೃತ್ರ, ವ್ಯುತ್ಕೃಮವಾದರೂ ಚಿಂತೆಯಿಲ್ಲ. ಹೀಗೆ ಮಾಡು” ಎಂದು ಏನೋ ರಹಸ್ಯವಾಗಿ ಬೋಧಿಸಿ, “ನಾನು ಇನ್ನು ಇಲ್ಲಿರುವಂತಿಲ್ಲ” ಎಂದು ಅವಸರ ಅವಸರವಾಗಿ, ತನ್ನ ಪರಿಹಾರವನ್ನು ಕಟ್ಟಿಕೊಂಡು ಪಾತಾಳಕ್ಕೆ ಹೊರಟುಹೋದನು.

ಹೋಗುವಾಗ “ಇನ್ನು ಮುಂದೆ ಭಾರ್ಗವರ ಅನುಗ್ರಹವನ್ನು ಪಡೆಯದವನು ಎಂದು ಇಂದ್ರನಾಗುವನೋ ನೋಡೋಣ ಎಂದುಕೊಂಡು ಹೋದನು. ಅದು ದೇವತೆಗಳಲ್ಲಿ ಅನೇಕರಿಗೆ ಕೇಳಿಸಿತು. ಆದರೂ ಯಾರೂ ಅದನ್ನು ಗಮನಿಸಲಿಲ್ಲ.

ದಾನವರೂ ಆದಷ್ಟು ಬೇಗ ಅಮರಾವತಿಯಿಂದ ಸ್ವರ್ಗಲೋಕದಿಂದ ಪಾತಾಳಕ್ಕೆ ಹೊರಟುಹೋದರು. ಹೋಗುವವರನ್ನು ದೇವತೆಗಳು ಯಾವ ರೀತಿಯಿಂದಲೂ ಹಿಂಸೆಮಾಡಲಿಲ್ಲ. ದೇವರಾಜನ ಅಪ್ಪಣೆ ಹಾಗಿತ್ತು.

* * * *