"ಇಲ್ಲಿ ಕೇಳಿ! ಎಲ್ಲರೂ ಸಾಯಂಕಾಲ ತಮ್ಮ ತಮ್ಮ ಕೆಲಸ ಆದಮೇಲೆ ತಪ್ಪದೆ ರಾಜಗೃಹಕ್ಕೆ ಬರಬೇಕು."
ತಮ್ಮ ಮಗ್ಗುಲಲ್ಲಿದ್ದವರನ್ನು "ಯಾಕೆ?" ಎಂದು ಕೇಳಿದವರಿದ್ದರು.
ದೊರೆತದ್ದು ವಿಧವಿಧದ ಉತ್ತರ :
" ಈಗ ರಾಜಗೃಹ ನಮ್ಮದೇ, ಅದಕ್ಕೆ."
_"ಪ್ರಾಂತಪಾಲನ ಆಸ್ತೀನೆಲ್ಲ ಹಂಚ್ತಾರೆ."
_"ಇವತ್ನಿಂದ ನಮ್ಮದೇ ಆಡಳಿತ! ರಾಜರೂ ನಾವೇ ಪ್ರಜೆಗಳೂ ನಾವೇ !"
....ಮೆನೆಪ್ಟಾನ ಮನೆಯಲ್ಲಿ ನೆಫಿಸ್ ಅನ್ಪುವಿನ ಮಕ್ಕಳಿಗೆ ಉಣಬಡಿಸಿದಳು. ಆ ಕಿರಿಯರ ಜತೆ ರಾಮೆರಿಪ್ಟಾನೂ ಕುಳಿತ.
ಅನ್ಪುವಿನ ವಿಧವೆಯನ್ನು ಅವಳ ಗುಡಿಸಲಿನಲ್ಲಿ ಬಿಟ್ಟು ಸ್ನೊಫ್ರು, ಸೆಬೆಕ್ಖು ಮತ್ತು ಮೆನೆಪ್ಟಾ ಮೂವರೂ ಮೆನೆಪ್ಟಾನ ಮನೆಗೆ ಬಂದರು.
ಸ್ನೊಫ್ರುವಿನ ಪತ್ನಿ ನೆಜಮುಟ್ ತಾನು ಅವಸರದಲ್ಲಿ ಮಾಡಿದ್ದ ಅಡುಗೆಯನ್ನು ಮೆನೆಪ್ಟಾನ ಮನೆಗೆ ಹೊತ್ತು ತಂದಳು.
ಅವರು ಉಂಡ ಬಳಿಕ ನೆಫಿಸ್ ಚಾಪೆ ಬಿಡಿಸಿದಳು. ಸೆಣಬಿನ ಹಚ್ಚಡವನ್ನು ಮಡಚಿ ಅದರ ಮೇಲೆ ಹಾಸಿದಳು.
" ವಿಶ್ರಾಂತಿ ತಗೊಳ್ಳಿ," ಎಂದಳು.
ಮಿತ್ರರು ತಮ್ಮ ಮನೆಗೆ ಹೊರಟರೆ ಗಂಡ ಒಂದಿಷ್ಟು ವಿರಮಿಸುವುದು ಸಾಧ್ಯವಾಗುತ್ತದೆ ಎಂಬ ಆಸೆ ಅವಳಿಗೆ.
ಆದರೆ ಸ್ನೊಫ್ರು, "ಇನ್ನೆಲ್ಲಿಯ ವಿಶ್ರಾಂತಿ ನಮಗೆ ?" ಎಂದ.
ಅವರು ಹಚ್ಚಡದ ಮೇಲೆ ಕುಳಿತವರೇ ಗಹನ ಮಾತುಕತೆಯಲ್ಲಿ ಮಗ್ನರಾದರು.
ತಮ್ಮನ್ನು ತಾವು ಆಳಬೇಕು. ಹೇಗೆ? ಪ್ರಾಂತಪಾಲರ ನೇಮಕಕ್ಕೆ ಮುನ್ನ ಐಗುಪ್ತ ದೇಶದ ಪ್ರಾಂತಗಳು ಹಿರಿಯರ ಸಮಿತಿಗಳ ಮೇಲ್ವಿಚಾರಣೆಗೆ ಒಳಪಟ್ಟಿದ್ದುವು. ನೀರಾನೆ ಪ್ರಾಂತದಲ್ಲೂ ನಾಲ್ವರ ಸಮಿತಿ ಇತ್ತು. ಅವರಲ್ಲೊಬ್ಬ ತೀರಿಕೊಂಡಿದ್ದ. ಉಳಿದ ಮೂವರು_ಸೆಮ, ಥಾನಿಸ್
ಪುಟ:Mrutyunjaya.pdf/೧೨೩
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
