ಈ ಪುಟವನ್ನು ಪರಿಶೀಲಿಸಲಾಗಿದೆ
೪ ಮೃತ್ಯುಂಜಯ
ಎದುರು ದಂಡೆಯಲ್ಲಿ ಪ್ರತಿಧ್ವನಿ ಕಂತುವುದಕ್ಕೆ ಮೊದಲೋ ಮೂರನೆಯ ರಾಜಭಟ ಆದೇಶದ ಪುನರುಚ್ಚಾರ ಆರಂಭಿಸಿದ. ತನ್ನ ಪ್ರಯಾಣಿಕರು ದೋಣಿಯಿಂದ ಇಳಿಯುತ್ತಿದ್ದಂತೆಯೇ ಬಟಾ ಪರಿಹಾಸ್ಯದ ಧ್ವನಿಯಲ್ಲಿ ನುಡಿದ : "ಬುತ್ತಿ ಗಿತ್ತಿ ದೋಣೀಲಿ ಬಿಟ್ಹೋಗ್ಬೇಡಿ....ನೀವು ಬರೋದರೊಳಗೆ ಎಲ್ಲಾ ಧ್ವಂಸ ಮಾಡೇವು !” ಇದನ್ನು ಕೇಳಿ "ಓಹೋ! ಓಹೋ!" ಎಂದರು ಕೆಲವರು. ಕೈಗೂಸಿನ ತಾಯಿ ಆಹೂರಾ ಕೇಳಿದಳು : “ನಮ್ಮದರಿಂದ ರೊಟ್ಟಿ ಗಿಟ್ಟಿ ಕೊಟ್ಟಿರ బటా ಅಣ್ಣ?" ಬಟಾ ಉತ್ತರಿಸಿದ : “ ಬೇಡ ತಂಗಿ. ನಮಗೆಲ್ಲ ನನ್ನ ಯಜಮಾನಿತಿ ಕಟ್ಕೊಟ್ಟಿದ್ದಾಳೆ.” ಅಷ್ಟರಲ್ಲೆ ದಕ್ಷಿಣದಿಂದ ಯಾತ್ರಿಕರನ್ನು ಹೊತ್ತಿದ್ದ ದೊಡ್ಡ ದೋಣಿ ಬಂತು. ಒಬ್ಬ ರಾಜಭಟ ಕಿರಿಚಿದ: "ಕತ್ತೇ ಮಕ್ಳು! ಯಾರಿಗೆ ಹೇಳ್ತಿರೋದು? ಏಯ್ ನೀನು! ತೆಗೆ ಯಯ್ಯ ದೋಣಿ!" ಅದು ತನ್ನನ್ನು ಉದ್ದೇಶಿಸಿ ಆಡಿದ ಮಾತು ಎಂಬುದು ಬಟಾನಿಗೆ ಸ್ಪಷ್ಟವಾಯಿತು. ಹುಟ್ಟು ಹಾಕುವಂತೆ ನೌಕರರಿಗೆ ಸೂಚನೆ ನೀಡುತ್ತ, ತನ್ನ ಯಾತ್ರಿಕ ತಂಡದತ್ತ ಕೈಬೀಸಿ ಅವನು ನುಡಿದ : " ಜಾತ್ರೇಲಿ ತಪ್ಪಿಸ್ಕೊಂಡೀರಿ, ಜಾಗ್ರತೆ! ಮೆನೆಪ್ಟಾ ಅಣ್ಣನ ಮಾತ್ನಂತೆ ನಡ್ಕೊಳ್ಳಿ. ನಾನು ಕೆಳಗಡೆ ಇರ್ತೇನೆ........ ಕತ್ತಲಾದ ತಕ್ಷಣ ಹೊರಟು ಬನ್ನಿ." ದೋಣಿ ಕಟ್ಟೆಯ ಅಧಿಕಾರಿಯ ಆಜ್ಞೆ ಕೇಳಿಸಿತು: " ಮೇಲಕ್ಕೂ ಕೆಳಕ್ಕೂ ಹೋಗಿ ! ಬರ್ತಿರೋ ದೋಣಿಗಳನ್ನ ಅಲ್ಲಲ್ಲೇ ತಡೀರಿ!” ಕಟ್ಟೆಯ ಗೂಟಕ್ಕೆ ಕಟ್ಟಿದ್ದ ಎರಡು ಕಿರುದೋಣಿಗಳನ್ನು ಇಬ್ಬಿಬ್ಬರು