ಈ ಪುಟವನ್ನು ಪರಿಶೀಲಿಸಲಾಗಿದೆ
೧೨ ಮೃತ್ಯುಂಜಯ
ದುರುಳನ ತರಿದ ಮಹಾ ಶೂರ ಉಘೇ !”
....ಬಾಲ್ಯದ ನೆನಪು. ಆಗ ಮೆನೆಪ್ಟಾಗೆ ಹದಿನಾಲ್ಕರ ಹರೆಯ. ನೀರಾನೆ ಪ್ರಾಂತದಿಂದ ನೀಲ ನದಿಯ ಮೂಲದತ್ತ ಎರಡು ದಿನ ದೋಣಿ ಪ್ರವಾಸ ಮಾಡಿದರೆ ಸಿಗುವ ಊರು ಎಡ್ಛು. ಅಣ್ಣ ಒಸೈರಿಸ್ನನ್ನು ಸೆತ್ ಮೋಸದಿಂದ ಕೊಂದಾಗ, ಹೋರಸ್ ಹಸುಳೆ, ಧರ್ಮಿಷ್ಠ್ನನಾಗಿ ಆಳಿ ದುರ್ಮರಣಕ್ಕೊಳಗಾದ ಪೆರೋ ಒಸೈರಿಸ್ ಸೂರ್ಯದೇವನ ಪುತ್ರ. ಅವನ ಪಟ್ಟದ ರಾಣಿ ಸಾಧ್ವೀಮಣಿ ಐಸಿಸ್. ಮಗನನ್ನು ಆಕೆ ಗೋಪ್ಯದಲ್ಲಿ ಬೆಳೆಸಿದಳು.ಆತ ಯುದ್ಧ ವಿದ್ಯೆ ಕಲಿತ, ರಣಧೀರನಾದ.
ತನ್ನ ತಂದೆಯನ್ನು ಕೊಂದವನಿಗೂ ಹೋರಸ್ಗೂ ನಡೆದುದು ಲೋಕವೇ ತಲ್ಲಣಿಸಿದ ಘನ ಘೋರ ಯುದ್ಧ. ಸೆತ್ ತಿವಿಯುವ ಸೂಕರ ವಾದ; ಹೋರಸ್ ಉರಿಯುಗುಳುವ ಹಾರುವ ತಟ್ಟೆಯಾದ. ಸೆತ್ ಸತ್ತ.ಆದರೆ ಆತನ ದುಷ್ಟ ಚೇತನ ಫೇಂಡಾಮೃಗವಾಗಿ, ನೀಲ ನದಿಯಲ್ಲಿ ಸಾಗಿ, ಎಡ್ಛುವಿನಲ್ಲಿ ಹೋರಸ್ಗಾಗಿ ಕಾದು ನಿಂತಿತು ಹೋರಸ್ ಹತ್ತು ಮೊಳ ಎತ್ತರದ ಯುವಕನಾಗಿ ಇಪ್ಪತ್ತೈದು ಮೊಳ ಉದ್ದನೆಯ ಈಟಿ ಹಿಡಿದು ಥಳ ಥಳಿಸುವ ನಾವೆಯಲ್ಲಿ ಎಡ್ಛುವಿಗೆ ಧಾವಿಸಿದ. ಫೇಂಡಾಮೃಗದ ತೆರೆದ ಬಾಯನ್ನು ಈಟಿ ಹೊಕ್ಕಿತು. ದುಷ್ಟನ ಸಂಹಾರವಾಯಿತು; ಶಿಷ್ಟ ಜನ ಜಯಘೋಷ ಮಾಡಿದರು. “ ವೀರರ ವೀರ ಹೋರಸ್ ಉಘೇ ! ತಂದೆಯ ಕೊಂದವನ ಮಣ್ಣು ಮುಕ್ಕಿಸಿದ ಧೀರ ಉಘೇ ದುರುಳನ ತರಿದ ಮಹಾ ಶೂರ ಉಘೇ!” ಎಡ್ಛುವಿನಲ್ಲಿ ಹೋರಸ್ ದೇವಾಲಯದ ನಿರ್ಮಾಣ ಕಾರ್ಯದಲ್ಲಿ,ತನ್ನೂರಿನ ಪಾಳೆಯಗಾರನ ಪರವಾಗಿ ಜೀತ ದುಡಿಮೆ ಸಲ್ಲಿಸಿದವನು,ಮೆನೆಪ್ಟಾ. ಆಗ ನಾಲ್ವರು ಗಾಯಕರ ತಂಡ ಹೋರಸ್ನ ಕಥೆಯನ್ನು ಹಾಡಿತ್ತು.ಪ್ರತಿಯೊಬ್ಬರ ಕೈಯಲ್ಲೂ ಏಕನಾದ. ನಾಲ್ವರ ಕಂಠಗಳಿಂದಲೂ ಒಂದೇ ಗಾನ : "ವೀರರ ವೀರ ಹೋರಸ್ ಉಘೇ!....."