ಈ ಪುಟವನ್ನು ಪರಿಶೀಲಿಸಲಾಗಿದೆ
ಮೃತ್ಯುಂಜಯ ೧೩ ಆಗ ಭಾವಾವೇಶದಿಂದ ಉಳಿದೆಲ್ಲ ದುಡಿಮೆಗಾರರೊಂದಿಗೆ ಮೆನೆಪ್ಟಾ ತಾನೂ ನುಡಿದಿದ್ದ : "ಉಘೇ!”
* * * * ತಾಯಿತದವನೊಬ್ಬ__ಚಿಲ್ಲರೆ ದೇವಸೇವಕ__ಕೂಗಿ ಕರೆಯುತ್ತಿದ್ದ : “ಬನ್ನೀ! ಬನ್ನೀ !ಬನ್ನೀ ! ಸಂಕಷ್ಟಕ್ಕೆ ತುತ್ತಾದವರೇ, ನಾಳೆಗೆ ಅಳುಕುವವರೇ, ಅನಾರೋಗ್ಯ ಪೀಡಿತರೇ, ಬನ್ನಿ! ತಾಯತ ಕಟ್ಟಿಸಿಕೊಳ್ಳಿ. ನಡೆಗೋಲು, ಪಾದರಕ್ಷೆ, ಚೀಲ, ಚಾಪೆ, ಬಟ್ಟೆ, ರೊಟ್ಟಿ–ವಿನಿಮಯಕ್ಕೆ ಏನಿದ್ದರೂ ಸರಿ...."
ತಾಯಿತದವನ ಸುತ್ತಲೂ ನೆರೆದಿದ್ದ ಗುಂಪಿನಲ್ಲಿ ಮೆನೆಪ್ಟಾನ ಸಹ ಯಾತ್ರಿಕರೂ ಇದ್ದರು. ನೆಫಿಸ್ ಮೆನೆಪ್ಟಾರನ್ನು ನೋಡಿ 'ನಾವಿಲ್ಲಿದ್ದೇವೆ' ಎನ್ನುವಂತೆ ಅವರು ನಗೆ ಬೀರಿದರು. ರಾಮೆರಿಪ್ಟಾ ಹರ್ಷಿತನಾಗಿ ಅವರತ್ತ ಬೊಟ್ಟುಮಾಡಿದ.
ಏರಿಸಿದ ಧ್ವನಿಯಲ್ಲಿ ತಾಯತದವನು ಮುಂದುವರಿದ : "ಪರಲೋಕ ಯಾತ್ರೆಯಲ್ಲಿ ನಿಮಗೆ ದಾರಿ ತಪ್ಪೋದು ಬೇಡ. ಈ ಲೋಕದಲ್ಲೂ ನಿಮಗೆ ಎಷ್ಟೊಂದು ಅಪಾಯಗಳು ಕಾದಿವೆ! ನಾಲಿಗೆ ಬಿದ್ದು ಹೋಗಬಹುದು, ತಲೆ ಕೆಡಬಹುದು. ಗುಂಡಿಗೆ ಕೈಕೊಡಬಹುದು ! ಹಾಗಾಗದಂತೆ ತಾಯತ ಕಟ್ಟಿಸಿಕೊಳ್ಳಿ ! ನಿಮ್ಮ ಹೆಸರೇ ನಿಮಗೆ ಮರೆತು ಹೋದೀತು ! ಉಸಿರಾಟ ಕಷ್ಟವಾದೀತು ! ಆಹಾರ-ಪಾನೀಯ ಸೇವನೆಗೆ ಅಡ್ಡಿ ಉಂಟಾದೀತು ! ನಿಮ್ಮ ಅಮೇಧ್ಯವನ್ನು ನೀವೇ ತಿಂದೀರಿ ! ಸರ್ಪಗಳು-ದೈತ್ಯಗಳು ಬಂದಾವು ' ತಾಯತ ಕಟ್ಟಿಕೊಂಡು ರಕ್ಷಣೆ ಪಡೀರಿ!” ರಾಮೆರಿಪ್ಟಾ ಕುತೂಹಲಿಯಾಗಿ ಹೆತ್ತವರನ್ನು ದಿಟ್ಟಿಸಿದ. ನೆಫಿಸ್ ಗಂಡನ ಮುಖ ನೋಡಿದಳು. ಅವನೆಂದ : " ದೇವತಾ ಮೂರ್ತಿಗಳ ಅಂಗಡಿ ಅಗೋ ಅಲ್ಲಿದೆ. ಮಕ್ಕಳ ರಕ್ಷಕಿಯಾದ ಐಸಿಸ್ ದೇವತೆಯ ಮೂರ್ತಿ ಬೇಕು ಅಂದಿದ್ದೆ....” ಗಂಡ ತೋರಿಸಿದ ಕಡೆಗೆ ನೆಫಿಸ್ ದಿಟ್ಟಿಸಿದಳು. ಚಿಲ್ಲರೆ ದೇವಸೇವಕರ