ಪುಟ:Mrutyunjaya.pdf/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೪೪೪ ಮೃತ್ಯುಂಜಯ

    "ಹೌದು. ಅವನು ಈ ರಸ್ತೇಲಿ ಹೋಗ್ತಾ ಇದ್ದಾಗ ರಾಮೆರಿ ತೋರಿಸ್ದ."
    "ನಿನ್ನೆ ಸಿಕ್ಕಿದ್ದ. ಇವತ್ತು ಬಂದು ನೋಡ್ತೇನೆ ಅಂದಿದ್ದೆ."
    "ಕಲ್ಲಿನ ಮೂರ್ತಿಗಳನ್ನು ಮಾಡ್ತಾನಂತೆ. ಪೆಪೈರಸ್ ದೋಣಿ ಕಟ್ಟುವವರು ಅವತ್ತು ಬಂದ್ರು. ಈಗ ಶಿಲ್ಪಿ ಬಂದಿದ್ದಾನೆ. ಎಲ್ಲರಿಗೂ ನೀರಾನೆ ಪ್ರಾಂತಕ್ಕೆ ಬರೋ ಬಯಕೆ."
    "ಹೌದು, ಅತ್ತಿಗೆ. ನಾಳೆ ಗೋರಿಚಿತ್ರಕಾರರು ಬರ್ತಾರೆ; ಬಂಗಾರದ ಆಭರಣ ಮಾಡೋ ನುರಿತ ಅಕ್ಕಸಾಲಿಗರು ಬಂದು ಇಲ್ಲಿ ಬೀಡುಬಿಡ್ತಾರೆ."
    “ಇದೆಲ್ಲ ಸುಂದರ ಕನಸಿನ ಹಾಗಿದೆ, ಅಲ್ಲವಾ ?...ಆಗಲಿ, ಶಿಲ್ಪೀನ ನೋಡ್ಕೋಡು ಬಾ. ನೀನೂ ಮನೆಯವರೂ ರಾತ್ರೆ ಇಲ್ಲಿಗೇ ಊಟಕ್ಬನ್ನಿ.... ರೊಟ್ಟಿ ತಟ್ಟೋಕೆ ನೆಜಮುಟ್ ನ ಕರೀತೇನೆ. ರಾಜಧಾನಿಯಲ್ಲಿ ನಿನ್ನ ನಾಯಕರು ಏನೇನು ಮಾಡಿದರೂಂತು ವಿವರವಾಗಿ ಹೇಳುವೆಯಂತೆ."
    "ಆಗಲಿ, ಅತ್ತಿಗೆ."
          *               *                *                   *
    "ನೆಖೆನ್ ನನ್ನು ನೋಡೋದಕ್ಕೇಂತಾದರೂ ನನ್ನ ಗುಡಿಸಲಿಗೆ ಬಂದಿಯಲ್ಲ, ಬಾ,” ಎಂದು ಹಪು ಗಾಂಭೀರ್ಯ್ ಪರಿಹಾಸ್ಯ ಎರಡನ್ನೂ ಬೆರೆಸಿ ಬಟಾ ನನ್ನು ಇದಿರ್ಗೊಂಡು.
    ನೆಖೆನ್ ಮಾಡಿದ್ದ ಮೂರ್ತಿಗಳನ್ನು ಬಟಾ ದಿಟ್ಟಿಸುತ್ತ ಮೌನ ತಳೆ ದೊಡನೆ ಹಪು, “ದೋಣಿಕಟ್ಟೆ ಗೋಡೇನ ಎತ್ತರಿಸಿ ಭದ್ರಗೊಳಿಸೋದಕ್ಕೆ ಎಷ್ಟು ಕಲ್ಲು ಬೇಕು ಏನಂತೂ ಹಿರಿಯರ ಸಮಿತಿಯವರು ಕೇಳಿದಾರೆ. ನಾಯಕರು ಬರೋದರೊಳಗೆ ಅಂದಾಜು ಸಿದ್ಧವಾಗ್ಬೇಕಂತೆ. ಇಪ್ಯುವರ್ ನನ್ನು ಕರಕೊಂಡು ನದೀದಂಡೆಗೆ ಹೋಗ್ತೇನೆ." ಎಂದು ಹೇಳಿ, ಹೊರಟು ಹೋದ.
   ಮಣ್ಣಿನ ಮಲಗು ದಿನ್ನೆಯ ಮಗ್ಗುಲಲ್ಲಿ ಮೂರು ಮೂರ್ತಿಗಳಿದ್ದುವು:ಒಂದು,ಕುಯಿಲು ಕಾರ್ಯದಲ್ಲಿ ನಿರತನಾಗಿದ್ದ ರೈತ. ಇನ್ನೊಂದು ಎರಗಲು ಜಿಗಿದು ನಿಂತ ಚಿರತೆಯ ಎದೆಗೆ ಈಟಿ ನೆಟ್ಟ ಬೇಟೆಗಾರ. ಮೂರನೆಯದು, ಪಿಶಾಚಿಗಳನ್ನು ಓಡಿಸುವ ಸಿಂಹತಲೆಯ ಕುಳ್ಳು ಆಕಾರದ ಬೆಸ್ ದೇವತೆ.