ತನ್ನ ಬಾಯಿಯೊಳಗಿನ ಗುನುಗುನು ಏನೆಂಬುದು ಮೆನ್ನನಿಗೇ ತಿಳಿಯದು. ಅವು ನಿರ್ದಿಷ್ಟ ಪದಗಳಂತೂ ಅಲ್ಲ. ಯಾವುದೋ ಒಂದು ರಾಗ. ಅದನ್ನು ಕಡಿಕಡಿದು ಜಗಿಜಗಿದು ಅವನು ನುಂಗಿದ. ಚಳಿ ಮೈಗೆ ಅಡರಿದಂತೆ ಹಲ್ಲುಗಳು ಕಟಕಟ ಎಂದುವು. ಮನಸ್ಸಿನ ಯಾತನೆ ಮುರಿದ ಹಲ್ಲುಗಳ ತೂತಿನೆಡೆಯಿಂದ ಪ್ರಲಾಪ ಧ್ವನಿಯಾಗಿ ಹೊರಟಿತು. “ ಬಂಧುಗಳೇ ! ಕೇಳಿ ! ” ಬಟಾ ಬೆಚ್ಚಿ ಬಿದ್ದು ನೋಡಿದ, ಮೆನ್ನ. ಸುಸ್ಪಷ್ಟ ವಾಕ್ಕು. ಎಲ್ಲರೂ ತನ್ನೆಡೆಗೆ ತಿರುಗಿದುದನ್ನು ಗಮನಿಸಿ ಮೆನ್ನ ಮುಂದುವರಿದ : ಈಗ ನಾನು ಮೆನ್ನ. ಸಾಮಾನ್ಯ ದೇವಸೇವಕ ಮೆನ್ನ. ಒಂದು ಹಾಡು ಹೇಳೇನೆ. ಸಾವಿನ ಹಾಡು. ಬಹಳ ಹಳೇದು. ಕೇಳಿ !" ಮುಂದೆ ಮೌನ, ಮೆನ್ನ ದೋಣಿಯ ಅಂಚಿನ ಮೇಲೆ ಕುಳಿತ. ಕಣ್ಣಾಲಿಗಳು ವರ್ತುಲವಾಗಿ ನಾಲ್ಕಾರು ಬಾರಿ ಚಲಿಸಿ, ಮನೆಪ್ಟಾನ ಶವದ ಮುಖದ ಮೇಲೆ ತಂಗಿದುವು. ಬಾಯಿ ತೆರೆದುಕೊಂಡು ಸ್ವರ ಹೊರಟಿತು : “ ಸಾವು ನನ್ನ ಮುಂದಿದೆ ಇಂದು ಸಾಂಬ್ರಾಣಿ ಸೂಸುವ ಸುವಾಸನೆಯಂತೆ ಬಿರುಗಾಳಿಯ ದಿನ ಹಡಗಿನ ಹಾಯಿಯ ಕೆಳಗೆ ಕುಳಿತವನಂತೆ.... “ ಸಾವು ನನ್ನ ಮುಂದಿದೆ ಇಂದು ತಾವರೆ ಹೂಗಳ ಪರಿಮಳದಂತೆ ಕುಡಿತದ ದಂಡೆಯ ಮೇಲೆ ಬಹಳ ಹೊತ್ತು ಕುಳಿತವನಂತೆ... “ ಸಾವು ನನ್ನ ಮುಂದಿದೆ ಇಂದು ಬಹು ಜನರು ತುಳಿದ ದಾರಿಯಂತೆ
ಪುಟ:Mrutyunjaya.pdf/೬೦೪
ಗೋಚರ