ವಿಷಯಕ್ಕೆ ಹೋಗು

ಪುಟ:Mrutyunjaya.pdf/೬೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮೃತ್ಯುಂಜಯ
೬೨೧

“ಅನ್ಪುವನ್ನು ಮಣ್ಣು ಮಾಡಿದಾಗ ಮೆನೆಪ್ಟಾ ಅರ್ಚಕರ ಕೈಲಿ 'ಬೆಳಕಿಗೆ ಆಗಮನ' ಪುಸ್ತಕ ಓದಿಸಿದ್ದ.”

“ಒಂದು ಪ್ರತಿ ಇದೆಯಾ ?” -

ಇಪ್ಯುವರ್ ಹೇಳಿದ:

“ಅರ್ಚಕರು ಮಾಡಿಸಿಟ್ಟಿದ್ದಾರೆ.”

“ಒಳ್ಳೇದು. ಅದನ್ನು ತನ್ನಿ. ಓದಬೇಕಾದ್ದಿಲ್ಲ, ಗೋರಿಯಲ್ಲಿ ಇಟ್ಟರಾಯ್ತು. ಸರ-ಉಂಗುರ. ಹಣತೆ-ಎಣ್ಣೆ... ಇಕ್ಕುಳ ತುದಿಯ ಕೋಲು. ಬೆಂಕಿ ಪಾತ್ರೆ...."

“ಗೊತ್ತಾಯ್ತು.. ಗೊತ್ತಾಯ್ತು.”

ಬಟಾನ ದೃಷ್ಟಿ ಹಪುವನ್ನು ಅರಸಿತು. ನೆಖೆನ್ನ ಹಿಂಬದಿಯಲ್ಲಿ ಆತ ನಿಂತಿದ್ದ. ಬಟಾ ತನ್ನೆಡೆಗೆ ನೋಡುತ್ತಿದ್ದಾನೆ ಎಂದು ಅವನಿಗೆ ಅನ್ನಿಸಿತು. ಬೆರಳ ಸನ್ನೆ ಕಂಡೊಡನೆ ಹಪು ಬಟಾನತ್ತ ಧಾವಿಸಿದ.

ಗೋರಿಯ ವಿಷಯ ಬಟಾ ತಿಳಿಸುತ್ತಿದ್ದಂತೆ ಸ್ನೋಫ್ರು ಅವರ ಬಳಿಗೆ ಬಂದು, "ನೆಲಮಾಳಿಗೆ ಗೋರಿ. ಹತ್ತು ಮೊಳ, ಆರು ಮೊಳ, ಆರು ಮೊಳ. ಮೇಲ್ಕಟ್ಟಡ ನಿಧಾನವಾಗಿ ಮಾಡೋಣ. ಇನ್ನು ಸ್ವಲ್ಪ ಹೊತ್ತಿನಲ್ಲೇ ಸಿದ್ಧವಾಗ್ಬೇಕು," ಎಂದ

ಮನಸ್ಸಿನಲ್ಲೆ ಲೆಕ್ಕ ಹಾಕುತ್ತ ಹಪು ಹೇಳಿದ:

- “ನಮ್ಮಲ್ಲಿರೋದು ಎರಡು ಗೇಣು ಘನ ಅಳತೆಯ ಕಲ್ಲುಗಳು. ಆರು ನೂರು ಮತ್ತು ಇಪ್ಪತ್ತನಾಲ್ಕು ಬೇಕು. ಮೇಲೆ ಆಧಾರಕ್ಕೆ ತೊಲೆಗಳು ಹಲಗೆಗಳು ಬೇಕು."

ಆ ಮಾತು ಕೇಳಿಸಿದ ಇಪ್ಯುವರ್ ಅಂದ :

“ಹಲಗೆಗಳು ರಾಜಗೃಹದಲ್ಲಿವೆ. ಈ ಸಲ ಕೆಫ್ಟುನಿಂದ ಕೊಂಡದ್ದು." ತೊಲೆಗಳೂ ಇವೆ."

"ಒಬ್ಟೊಬ್ಬ್ರು ಒಂದೊಂದು ಕಲ್ಲು ಎತ್ತಿಕೊಂಡರಾಯ್ತು."

ಮಾತುಕತೆ ದೀರ್ಘವಾಗುತ್ತಿದೆ ಎಂಬ ಚಿಂತೆ ಕಾಡತೊಡಗಿತ್ತು ಖೈಮ್ ಹೊಟೆಪ್ ನನ್ನು.