ಪುಟ:Mysore-University-Encyclopaedia-Vol-1-Part-1.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

143


            ಅಕ್ಕಿಯ ಸೊಂಡಿಲುಕೀಟ - ಅಕ್ಬರ್

ಮರಿಹುಳು ರೇಷ್ಮೆನೂಲಿನ ಬಲೆಯಿಂದ ಆಹಾರವನ್ನು ಆವರಿಸಿ, ಒಳಗೆ ಮೇಯುತ್ತಾ ಪ್ರವರ್ಧಮಾನಕ್ಕೆ ಬರುತ್ತದೆ. ಈ ರೀತಿ ಬಲೆಯಿಂದ ಆವರಿಸುವುದಕ್ಕೆ ತೆಂಡೆ ಕಟ್ಟುವುದು ಎಂದು ಕರೆಯುತ್ತಾರೆ. ಮರಿ ಹುಳ ನಸು ಹಳದಿಬಣ್ಣದ್ದು; ಇದು ರೂಪಪರಿವರ್ತನೆಯಾಗಿ ಹೊರಬರಲು ಸು. ೬ ವಾರ ಬೇಕು; ವರ್ಷಕ್ಕೆ ೬-೮ ಬಾರಿ ಸಂತಾನೋತ್ಪತ್ತಿ ಮಾಡುತ್ತವೆ.

                             (ಡಿ.ಎಸ್)

ಅಕ್ಕಿಯ ಸೊಂಡಿಲುಕೀಟ: ಶೇಖರಿಸಿಟ್ಟ ಕಾಳುಗಳಿಗೆ ದ್ವಿದಳಧಾನ್ಯಗಳನ್ನು ಬಿಟ್ಟು) ಪ್ರಪಂಚಾದ್ಯಂತ ಭಾರಿ ಪ್ರಮಾಣದ ನಷ್ಟವನ್ನುಂಟುಮಾಡುವ ಕೀಟವೆಂದರೆ ಇದೇ. ಸುಸ್ತಿ, ರೈಸ್ ವೀವಿಲ್ ಮತ್ತು ಸೈಟೊಫೈಲಸ್(ಕ್ಯಲಾಂಡ್ರ) ಒರೈಸೇ ಎಂಬ ಹೆಸರುಗಳನ್ನುಳ್ಳ ಈ ಜೀವಿ ಕೋಲಿಯಾಪ್ಪರ ಗಣದ ಕರ್ಕ್ಯೂಲಿಯಾನಿಡೀ ಕುಟುಂಬಕ್ಕೆ ಸೇರಿದ್ದು. ಮೂತಿ ತಲೆಯ ಮುಂದೆ ಆನೆ ಸೊಂಡಿಲಿನಂತೆ ಚಾಚಿಕೊಂಡಿರುವ ಮೂತಿಯೇ ಈ ಹೆಸರಿಗೆ ಕಾರಣ; ವಾಡೆಹುಳ, ಕುಟ್ಟೇಹುಳ ಎಂದೂ ಇದನ್ನು ಕರೆಯುವುದುಂಟು.

 ಪ್ರಾಯಕ್ಕೆ ಬಂದ ಕೀಟ ಮಾಸಲು ಕೆಂಪು ಅಥವಾ ಕಂದು ಬಣ್ಣವಾಗಿದ್ದು ಸುಮಾರು ೨-೩ ಮಿಮೀ ಉದ್ದವಿರುತ್ತದೆ. ಬೆನ್ನ ಮೇಲೆ ನಾಲ್ಕು ಕಪ್ಪುಚುಕ್ಕೆಗಳಿವೆ. ಉಗ್ರಾಣದಲ್ಲಿರುವ ಎಲ್ಲ ಬಗೆಯ ಕಾಳುಗಳಿಗೂ ಅಂದರೆ ಜೋಳ, ಗೋದಿ, ಅಕ್ಕಿ, ಸಜ್ಜೆ, ಮುಸುಕಿನ ಜೋಳ ಮುಂತಾದವುಗಳಿಗೆಲ್ಲ ಹತ್ತುತ್ತದೆ. ರಾಗಿ, ಸಾವೆ ಮುಂತಾದ ಸಣ್ಣ ಕಾಳುಗಳಿಗಳಿಗೂ ದ್ವಿದಳ ಧಾನ್ಯಗಳಿಗೂ ಸಾಮಾನ್ಯವಾಗಿ ಮುತ್ತುವುದಿಲ್ಲ. ಉಂಡೆಕಾಳುಗಳಿಗೇ ಈ ಹುಳುಬೀಳುವುದು ಸ್ವಾಭಾವಿಕ; ಬತ್ತಕ್ಕೆ ಹತ್ತುವುದು ಅಪರೂಪ; ಒಡೆದ, ಬೀಸಿದ ಪದಾರ್ಥಗಳಿಗೆ ಸಾಧಾರಣವಾಗಿ ಇದರಿಂದ ತೊಂದರೆ ಇಲ್ಲ. ಈ ಕೀಟ ತನ್ನ ಉದ್ದನೆ ಸೊಂಡಿಲಿನಿಂದ ಕಾಳಿನ ಬಿರುಸು ಸಿಪ್ಪೆಯನ್ನು ಕೊರೆದು ಒಳಗಿನ ಪಿಷ್ಟ ಭಾಗವನ್ನು ತಿನ್ನುತ್ತದೆ. ಅಲ್ಲದೆ ಸೊಂಡಿಲಿನಿಂದ ಕಾಳಿನಲ್ಲಿ ಕುಳಿತೊಡಿ ಅದರೊಳಗೆ ಒಂದು ತತ್ತಿ ಇಟ್ಟು ಅದಕ್ಕೆ ಅಪಾಯವಾಗದಂತೆ ಮೇಲೆ ಅಂಟಿನಿಂದ ಮುಚ್ಚುತ್ತದೆ. ಮೊಟ್ಟೆಯೊಡೆದು ಬಂದು ಮರಿಗಳು ಕಾಳಿನೊಳಕ್ಕೆ ಕೊರೆದುಕೊಂಡು ಹೋಗಿ, ತಿರುಳನ್ನು ತಿಂದು ಬೆಳೆಯುವುವು. ಪ್ರಾಯದ ಕೀಟವೂ ಕಾಳನ್ನು ಹೊರಗಿನಿಂದ ಕೊರೆಯುವುದರಿಂದ ಈ ಕೀಟದ ಉಪಟಳ ಉಗ್ರಾಣದ ಕಾಲಿಗೆ ವಿಪರೀತ ಹೆಚ್ಚು.
    ಕಾಳಿನ ಗಾತ್ರದ ಮೇಲೆ ಪ್ರೌಢಕೀಟದ ಗಾತ್ರ ನಿರ್ಣಯವಾಗುವುದುಂಟು; ಅಂದರೆ ಸಣ್ಣ ಕಾಳಿನಿಂದ(ಉದಾ, ಸಜ್ಜೆ) ಉತ್ಪತ್ತಿಯಾದ ಕೀಟ ದೊಡ್ಡ ಕಾಳಿನಿಂದ (ಉದಾ.ಮುಸುಕಿನ ಜೋಳ)ಬರುವ ಕೀಟಕ್ಕಿಂತ ಚಿಕ್ಕದು. ಇದರ ಹತ್ತಿರದ ಸಂಬಂಧಿಯಾದ ಸೈ.ಗ್ರನೇರಿಯ ಎಂಬುದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಪ್ರಬಲವಾಗಿದೆ; ನಮ್ಮ ದೇಶದಲ್ಲಿ ಇದರ ಹಾವಳಿ ಅತ್ಯಲ್ಪ.
    ಹೆಣ್ಣುಕೀಟ ಒಂದು ಸಲಕ್ಕೆ ಸುಮಾರು ೪೦೦ ಮೊಟ್ಟಗಳನ್ನಿಡುವುದು. ಒಂದು ತಲೆಮಾರಿನ ಜೀವಮಾನ ೪-೬ ವಾರಗಳು ಮಾತ್ರ; ವರ್ಷದಲ್ಲಿ ೮-೧೦ ಸಂತತಿಗಳಾಗುತ್ತವೆ. ಹುಳ ಬಿದ್ದ ಕಾಳಿನ ಮೇಲೆ ಕಾಣುವ ರಂಧ್ರಗಳು ಪ್ರೌಢಕೀಟ ಹೊರಕ್ಕೆ ಬರುವಾಗ ಮಾಡಿದ ತೂತುಗಳೇ ಹೊರತು ಮರಿಗಳು ಕಾಳಿನೊಳಕ್ಕೆ ಹೋಗುವಾಗ ಮಾಡಿದುವಲ್ಲ. ಹುಳಬಿದ್ದಕಾಳು ಒಳಗೆ ಸಂಪೂರ್ಣವಾಗಿ ಟೊಳ್ಯಾಗಿ ಬರಿ ಧೂಳಿನಿಂದ ತುಂಬಿರುತ್ತದೆ. ಅಕ್ಕಿ, ಗೋಧಿಗಳಿಗಿಂತ ಜೋಳಕ್ಕೆ ಈ ಹುಳುವಿನ ಅಪಾಯ ಹೆಚ್ಚು.
    ಕಾಳನ್ನು ಉಗ್ರಾಣಕ್ಕೆ ಒಯ್ಯುವುದಕ್ಕೆ ಮುಂಚೆ ಚೆನ್ನಾಗಿ ಇಣಗಿಸಿ, ಈ ಕೀಟಗಳ ಸುಳಿವಿಲ್ಲದ ಶುಚಿಯಾದ ಜಾಗದಲ್ಲಿ ದಾಸ್ತಾನು ಮಾಡಿದರೆ ಹುಳದ ಕಾಟವಿಲ್ಲದಂತೆ ಸಂರಕ್ಷಿಸಬಹುದು. ಹಾಗೂ ಆಗಾಗ್ಗೆ ಎಚ್ಚರಿಕೆಯಿಂದ ಪರೀಕ್ಷಿಸುತ್ತಿರಬೇಕು; ಏಕೆಂದರೆನಮ್ಮ ಗಮನಕ್ಕೆ ಬರದಂತೆಯೇ ಅಕ್ಕಪಕ್ಕದ ಉಗ್ರಾಣದಿಂದ ಈ ಪಿಡುಗು ಅಕ್ರಮ ಪ್ರವೇಶ ಮಾಡುವ ಸಂಭವವುಂಟು. ಅಂಥ ಸಂದರ್ಭದಲ್ಲಿ ವಿಷವಾಯು ಪ್ರಯೋಗ ಮತ್ತಿತರ ವಿಧಾನಗಳಿಂದ ಹುಳುಹತ್ತಿದ ಧಾನ್ಯವನ್ನು ಶುಚಿಗೊಳಿಸಬಹುದು.  (ಡಿ.ಎಸ್)
   ಅಕ್ಕೇಡಿಯನ್ ಭಾಷೆ : ಯೂಪ್ರೆಟಿಸ್, ಟೈಗ್ರಿಸ್ ನದಿಗಳ ನಡುವಣ ಪ್ರದೇಶದ ಉತ್ತರ ಭಾಗಕ್ಕೆ ರಾಜಧಾನಿಯಾಗಿದ್ದ ಅಕ್ಕಾಡ್ ನಗರದ ಸುತ್ತಮುತ್ತ ಪ್ರಚಲಿತವಾಗಿತ್ತು. ಇದು ಹೀಬ್ರಾ,ಅರಬ್ಬಿ ಮುಂತಾದ ಭಾಷೆಗಳಂತೆ ಸೆಮಿಟಿಕ್ ಭಾಷಾವರ್ಗಕ್ಕೆ ಸೇರಿದ್ದು; ಆ ಭಾಷಾವರ್ಗದ ವಲಸೆ ಹೊರಟು ಪ್ರ.ಶ.ಪೂ. ೨೦೦೦ದ ಸುಮಾರಿನಲ್ಲಿ ಅಕ್ಕಡ ಪ್ರದೇಶದಲ್ಲಿ ಬಂದು ನೆಲೆಸಿದರು; ಅವರ ಭಾಷೆ ಇಲ್ಲಿ ಬೆಳೆದು ಅಕ್ಕೆಡಿಯನ್ ಆಯಿತು. ಇದರಲ್ಲಿ ವಿಪುಲವಾದ ಸಾಹಿತ್ಯವಿದೆ; ಶಾಸನಗಳು, ಬರಹವನ್ನುಳ್ಳ ಸುಟ್ಟಮಣ್ಣಿನ ಚದರ ಬಿಲ್ಲೆಗಳು ಹೇರಳವಾಗಿ ದೊರೆತಿವೆ. ಚರಿತ್ರೆ ಅಂಶಗಳು, ನ್ಯಾಯಶಾಸನಗಳು, ವಾಣಿಜ್ಯ ವ್ಯವಹಾರದ ಲೆಕ್ಕಪತ್ರಗಳು, ಪ್ರಾರ್ಥನಾ ಪದ್ಯಗಳು, ಪುರಾತನ ಕಟ್ಟುಕಥೆಗಳು, ಖಗೋಳಶಾಸ್ತ್ರ, ಜ್ಯೋತಿಷ್ಯ, ವೈದ್ಯ ಮುಂತಾದ ಅನೇಕ ವಿಷಯಗಳು ಇವುಗಳಲ್ಲಿವೆ. ಹಳೆ ಅಕ್ಕೇಡಿಯನ್(ಪ್ರ.ಶ.ಪೂ.೨೮೦೦-೬೫೦), ಹೊಸ ಅಕ್ಕೇಡಿಯನ್(ಪ್ರ.ಶ.ಪೂ. ೬೫೦ ರಿಂದ ಈಚೆಗೆ) ಎಂಬೆರಡು ಭಾಷಾವ್ಯವಸ್ಥೆಗಳಿವೆ. ಈ ಭಾಷೆಗೆ ಬೇರೊಂದು ಬುಡಕಟ್ಟಿಗೆ ಸೇರಿದ್ದ ಸುಮೇರಿಯನ್ ಭಾಷೆಯ ಸಂಪರ್ಕವುಂಟಾಗಿತ್ತು. ಪ್ರ.ಶ.ಪೂ. ೮೦೦ರಲ್ಲಿ ಈ ಭಾಷೆ ಆರೈಮೈಕ್ ಭಾಷೆಗೆ ಎಡೆಗೊಟ್ಟಿತ್ತು. ಅಲೆಕ್ಸಾಂಡರನ ಕಾಲಕ್ಕೆ ಇದು ವ್ಯವಹಾರದಲ್ಲೂ ಇಲ್ಲವಾಯಿತು. ಆದರೂ ಪ್ರ.ಶ.ಪೂ.೧ನೆಯ ಶತಮಾನದವರೆಗೆ ಇದು ಗ್ರಾಂಥಿಕ ಭಾಷೆಯಾಗಿ ಬಳಕೆಯಲ್ಲಿತ್ತು. ನುಜಿ ಎಂಬುದು ಇದರ ಒಂದು ಉಪಭಾಷೆ.
   ಅಕ್ಬರ್: ೧೫೪೨-೧೬೦೫. ಮೊಗಲ್ ಸಂತತಿಯ ಸಾಮ್ರಾಟರಲ್ಲಿ ಮೂರನೆಯವ. ಭಾರತ ದೇಶದ ಚರಿತ್ರೆಯಲ್ಲಿ ಅತ್ಯಂತ ಪ್ರಸಿದ್ಧರಾದ ಸಾಮ್ರಾಟರಲ್ಲಿ ಒಬ್ಬ. ಹುಮಾಯೂನನ ಮಗ, ಷೇರ್ ಷಹನಿಂದ ಸೋತು ರಾಜ್ಯಭ್ರಷ್ಟನಾಗಿ ಸಹಾಯವನ್ನರಸುತ್ತ ಹುಮಾಯೂನ್ ಅಲೆದಾಡುತ್ತಿದ್ದಾಗ ಅಮರಕೋಟೆಯಲ್ಲಿ ೧೫೪೨ರಲ್ಲಿ ಅಕ್ಬರನು ಜನಿಸಿದ. ಪಟ್ಟಕ್ಕೆ ಬಂದಾಗ ಅವನು ಹದಿನಾಲ್ಕು ವರ್ಷದ ಬಾಲಕ. ತಂದೆಯ ಕಾಲದಲ್ಲಾದ ರಾಜಕೀಯ ವಿಪ್ಲವಗಳ ಪರಿಣಾಮವಾಗಿ, ಸಾಮ್ರಾಜ್ಯದ ನಾನಾ ಕಡೆಗಳಿಂದ ವಿದ್ರೋಹಿಗಳು ಬಲಗೊಂಡಿದ್ದರು. ಅವರ ಹಾವಳಿಯನ್ನು ತಡೆಗಟ್ಟಿ ಪ್ರಾಂತ್ಯಗಳನ್ನು ತನ್ನ ಹತೋಟಿಗೆ ತಂದುಕೊಂಡು ಸುಭದ್ರ ಆಡಳಿತವನ್ನು ಸ್ಥಾಪಿಸುವುದಕ್ಕೆ ಬಹುಕಾಲ ಹಿಡಿಯಿತು. ಸ್ವತಂತ್ರರಾಗಲೆತ್ನಿಸುತ್ತಿದ್ದ ಸಾಮಂತರನ್ನು ಸೋಲಿಸಿ, ಹೊಸ ಪ್ರಾಂತ್ಯಗಳನ್ನು ಗೆದ್ದು, ದೇಶದಲ್ಲಿದ್ದ ಅರಾಜಕತೆಯನ್ನು ಕೊನೆಗಾಣಿಸಿ, ಬಹಳ ಕಾಲದಿಂದಲೂ ಇಲ್ಲದೇ ಇದ್ದ ರಾಜಕೀಯ ಏಕತೆಯನ್ನೂ ಆಡಳಿತ ಭದ್ರತೆಯನ್ನೂ ಏರ್ಪಡಿಸಿದ.ರಾಷ್ಟ್ರೀಯತೆ, ಏಕತೆ ಮತ್ತು ಹಿಂದೂ-ಮುಸಲ್ಮಾನರ ಪರಸ್ಪರ ಸ್ನೇಹ ಸೌಹಾರ್ದ, ಈ ಮೂರು ಮುಖ್ಯಾಂಶಗಳನ್ನು ಬೆಳೆಸುವ ಸಂಪ್ರದಾಯವನ್ನು ಹಾಕಿಕೊಟ್ಟ. ಅವನ ರಾಜಕೀಯ ಧೋರಣೆ ಮತೀಯ ಪ್ರಭಾವಕ್ಕೊಳಗಾಗಿರಲಿಲ್ಲ. ಆತ ರಾಜಪುತ್ರ ಕನ್ಯೆಯೊಬ್ಬಳನ್ನು ಮದುವೆಯಾದ. ಹಿಂದೂ ಯಾತ್ರಿಕರ ಮೇಲೆ ಈ ಹಿಂದೆ ಇದ್ದ ತೆರಿಗೆಯನ್ನೂ ತಲೆಗಂದಾಯವನ್ನು ರದ್ದುಗೊಳಿಸಿದ. ಮುಸಲ್ಮಾನ ಪ್ರಜೆಗಳಿಂದಲೇ ಕೂಡಿದ್ದ ಕಾಬೂಲ್ ಪ್ರಾಂತ್ಯಕ್ಕೆ ಮಾನಸಿಂಗನನ್ನು ಪ್ರಾಂತ್ಯಾಧಿಕಾರಿಯನ್ನಾಗಿ ಮಾಡಿದ. ಆವರೆಗೂ ಸೈನ್ಯಕ್ಕೆ ಸೇರಲು ಮುಸಲ್ಮಾನರು ಮಾತ್ರ ಅರ್ಹತೆ ಪಡೆದಿದ್ದರು. ಅಕ್ಬರನು ಅರ್ಹತೆಯ ಆಧಾರದ ಮೇಲೆ ಹಿಂದೂ ಮುಸಲ್ಮಾನರಲ್ಲಿ ಭೇದವನ್ನೆಣಿಸದೆ ಸೈನ್ಯದಲ್ಲಿ ಹುದ್ದೆಗಳನ್ನು ಕೊಟ್ಟ ನ್ಯಾಯವಾದಿಯೂ ಗುಣಗ್ರಾಹಿಯೂ ಆಗಿದ್ದ ಅವನು ಪ್ರಜೆಗಳಲ್ಲಿ ಭೇದವನ್ನಣಿಸದೆ ಎಲ್ಲರಿಗೂ ನ್ಯಾಯವನ್ನು ದೊರಕಿಸಿಕೊಟ್ಟ. ಆತ ದೊಡ್ಡ ಹುದ್ದೆಗಳನ್ನು ಕೊಡುತ್ತಿದ್ದುದು ಕುಶಲತೆ ಮತ್ತು ಸಾಮರ್ಥ್ಯದ ಆಧಾರದಮೇಲೆ. ತನ್ನ ನೀತಿಯಿಂದ ಪ್ರಜೆಗಳ ಪ್ರೀತಿಯನ್ನು ಸಂಪಾದಿಸಿ ಆ ಮೂಲಕ ತಾವು ಪರಕೀಯರೆಂಬ ಭಾವನೆಯನ್ನು ಹೋಗಲಾಡಿಸಿ, ರಾಷ್ಟ್ರೀಯತೆಯನ್ನು ಮೂಡಿಸಿದ. ಹಿಂದೂಗಳಿಗೆ ಅವನ ಆಡಳಿತ ಪರಕೀಯವೆನಿಸಲಿಲ್ಲ. ಇದಲ್ಲದೇ ಅವನು ಹಿಂದೂಸಮಾಜದಲ್ಲಿ ಬೆಳೆದು ಬಂದಿದ್ದ ಸ್ತ್ರೀಶಿಶುಹತ್ಯೆ, ಸಹಗಮನ ಮತ್ತು ಪ್ರಾಣಿಬಲಿ ಮುಂತಾದ ಪದ್ಧತಿಗಳನ್ನು ತಪ್ಪಿಸಲು ಮತ್ತು ವಿಧವಾವಿವಾಹವನ್ನು ಜಾರಿಗೆ ತರಲು ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡ. ಅವನು ಜಾರಿಗೆ ತಂದ ಆಡಳಿತ ಪದ್ಧತಿ ಮುಂದೆ ಬ್ರಿಟಿಷರೂ ಅನುಕರಿಸುವಂಥದಾಗಿತ್ತು. ಅಕ್ಬರನ ಆಡಳಿತದಲ್ಲಿ ಸರ್ಕಾರಕ್ಕೂ ರೈತರಿಗೂ ನೇರವಾದ ಸಂಪರ್ಕವಿದ್ದು ಮಧ್ಯಸ್ಥಗಾರರಿಗೆ ಅವಕಾಶವಿರಲಿಲ್ಲ.
   ಅಕ್ಬರನ ಮತೀಯನೀತಿ ಇತಿಹಾಸದಲ್ಲಿ ಸ್ಮರಣೀಯ. ಉನ್ನತ ಧ್ಯೇಯಗಳನ್ನು ಭಾವಜೀವಿಯಾಗಿದ್ದ ಆತ ಎಲ್ಲ ಮತಗಳ ತತ್ವ್ತಗಳನ್ನೂ ಗ್ರಹಿಸಿ ಮತೀಯ ಏಕತೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿದ್ದ. ಈ ಗುರಿಯನ್ನು ಸಾಧಿಸಲು ೧೫೮೧ರಲ್ಲಿ ದೀನ್-ಏ-ಇಲಾಯಿ, ಎಂಬ ಹೊಸ ಮತವನ್ನು ಸ್ಥಾಪಿಸಿದ. ಅದು ಪ್ರಗತಿಪರ ವಿಚಾರಶೀಲರ ಸಂಘವಾಗಿತ್ತು; ಸರ್ವಧರ್ಮ ಸಹಿಷ್ಣುತೆಯ ಆದರ್ಶವಾಗಿತ್ತು. ಈ ಹೊಸ ಮತದ ಪ್ರಕಾರ ಸರ್ವಶಕ್ತನಾದ ದೇವರು ಒಬ್ಬನೇ. ಎಲ್ಲರೂ ದುರ್ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ಅನುಸರಿಸಿ ವಿವೇಚನೆಗೆ ತಲೆಬಾಗಬೇಕು. ಪೂಜೆ-ಪುರಸ್ಕಾರ ಮತ್ತು ಪುರೋಹಿತರ ಅವಶ್ಯಕತೆ ಇಲ್ಲ. ದೀನ್-ಏ-ಇಲಾಯಿ ಸರ್ವ ಮತಗಳ ಆಧ್ಯಾತ್ಮಿಕ ಮತ್ತು ತಾತ್ವಿಕ ಸಂಪ್ರಾದಾಯಗಳ ಸಂಗ್ರಹವಾಗಿತ್ತು. ಧರ್ಮೋಪದೇಶಕರಿಗಾಗಲಿ ಮೌಢ್ಯ ಮತ್ತು ಕಂದಾಚಾರಗಲಿಗಾಗಲಿ ಈ ಮತದಲ್ಲಿ ಅವಕಾಶವಿರಲಿಲ್ಲ. ಈ ಮತಕ್ಕೆ ಸೇರಲು ಯಾರನ್ನೂ ಬಲಾತ್ಕರಿಸುತ್ತಿರಲಿಲ್ಲ. ವಿಚಾರಶೀಲರಾದ ಹದಿನೆಂಟು ಜನರು ಮಾತ್ರ ಅದನ್ನು ಅವಲಂಬಿಸಿದ್ದರು. ಅವರಲ್ಲಿ ರಾಜ ಬೀರಬಲ್ಲನೂ ಒಬ್ಬ. ಅಕ್ಬರ್ ವೈಯಕ್ತಿಕವಾಗಿ ಆಧ್ಯಾತ್ಮಿಕ ಜೀವನದ ರಹಸ್ಯಗಳನ್ನು ಅರಿಯಲು ಕುತೂಹಲಿಯಾಗಿದ್ದವನು. ಅವನು ಅನೇಕ ವೇಳೆ ಏಕಾಂಗಿಯಾಗಿ ತನ್ನ ಅರಮನೆಯ ಪ್ರಾಂಗಣದಲ್ಲಿ ಕುಳಿತು ಮಧ್ಯರಾತ್ರಿಯವರೆಗೂ ನಭೋಮಂಡಲವನ್ನು ವೀಕ್ಷಿಸುತ್ತ ಜೀವನ್ದ ಸತ್ಯಾಸತ್ಯಗಳ ವಿಚಾರವಾಗಿ ದೀರ್ಘಾಲೋಚನೆಗಳಲ್ಲಿ ಮಗ್ನನಾಗುತ್ತಿದ್ದ. ಜನರ ಮತೀಯ ಮೌಢ್ಯಗಳನ್ನು ಕಂಡು ಮರುಗುತ್ತಿದ್ದ. ಸರ್ವಧರ್ಮಗಳ ಸಮನ್ವಯವಾದ ದೀನ್-ಇಲಾಯಿಯ ಮುಖಾಂತರ ಜನರ ಭಿನ್ನಭಾವಗಳನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದ್ದ. ಈ ಪ್ರಯತ್ನದಲ್ಲಿ ಕೆಲವು ಅಂಶಗಳು ಅವನಿಗೆ ಸಹಕಾರಿಯಾದುವು. ಮೊದಲನೆಯದಾಗಿ ಆತನ ತಂದೆ ಮತ್ತು ತಾತ ಸಂಪ್ರಾದಾಯಶರಣರಾಗಿರದೆ ಉದಾರ ಪಂಥಿಗಳಾಗಿದ್ದರು. ಎರಡನೆಯದಾಗಿ ಆತನು ರಾಜಪುತ್ರ ರಾಜಕುಮಾರಿಯನ್ನು ವಿವಾಹವಾದದ್ದು ಅವನ ವಿಚಾರಧಾರೆಯನ್ನು ಬದಲಾಯಿಸಿತು. ಕೊನೆಯದಾಗಿ ನಿಕಟವರ್ತಿಗಳಾದ ಶೇಕ್ ಮುಬಾರಕ್, ಪೈಜಿ ಮತ್ತು