ಪುಟ:Mysore-University-Encyclopaedia-Vol-1-Part-1.pdf/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅನ್ನಪೂರ್ಣ - ಅನ್ಯಮನಃಸ್ಪರ್ಶನ

   ಸೆಡೆತ: ವಪೆಯಲ್ಲಿ ಅನ್ನನಾಳ ತೂರುವೆಡೆಯಲ್ಲಿ ಮೇಲುಗಡೆ ಇರುವ ಭಾಗ ಹಿರಿಹಿಗ್ಗಿ ಉದ್ದ ಸಾಗುತ್ತದೆ. ಅನ್ನ ನೀರು ಎರಡೂ ಸೇರದಾಗುತ್ತವೆ. ತೆಗೆದುಕೊಂಡ ಆಹಾರ ಅಲ್ಲೆ ಉಳಿದು, ಆ ಮೇಲೆ ಆಂತಿ ಆಗುವುದು. ರೋಗಿ ಸೊರಗುವನು. ಹೀಗೆ ಸೆಡೆತುಕೊಂಡ ಅನ್ನನಾಳಾವನ್ನು  ಬೇರೆ ಬೇರೆ ಗಾತ್ರದ ಸರಳುಗಳಿಂದ ಹಿಗ್ಗಲಿಸಬಹುದು. ಅನ್ನನಾಳದ ಕೆಳಭಾಗದ ಸುತ್ತಿನ ಸ್ನಾಯುಗಳನ್ನು ಕತ್ತರಿಸಿ ಬಿಡಿಸಬಹುದು. ಇಲ್ಲವೆ ಜಟರವನ್ನು ಶಸ್ತ್ರಕ್ರಿಯೆಯಿಂದ ಮುಂದುಗಡೆಯಿಂದ ಕೊಯ್ದು ಕೆಳಗಡೆಯಿಂದ ಸರಿಪಡಿಸಲುಬಹುದು. 
   
   ಎದೆಯಲ್ಲಿ ಏನೋ ಚೆಂಡು ಸಿಕ್ಕಿಕೊಂಡಿರುವಂತೆ  ಇರುವುದೆಂದು, ಉನ್ಮಾದದ ರೋಗಿಗಳು ನುಂಗಲಾಗದೆನ್ನುವರು. ಇದು ತತ್ಕಾಲದಲ್ಲಿ ಮಾತ್ರ ಹೀಗಿರುವುದರಿಂದ ಇದನ್ನು ಗುರುತಿಸಬಹುದು.ರೋಗಿಯಲ್ಲಿ ಕಬ್ಬಿಣಾಂಶದ ಕೊರತೆಯಿಂದಲೂ ಹೀಗಾಬಹುದು.
   ಕೊನೆಯದಾಗಿ, ಅನ್ನನಾಳದ ಸುತ್ತಮುತ್ತಣ ಅಂಗಗಳೂ ಅದನ್ನು ಒತ್ತರಿಸಬಹುದು.  ಇಂಥವು ಹಲವಾರಿವೆ.  ಅನ್ನನಾಳಕ್ಕೆ ತುಂಬ ಹತ್ತಿರವಿರುವ್, ಮಹಾಧಮನಿಯ್ ಅಗಲುಬ್ಬು ಒಂದು, ಕೊರಳಲ್ಲಿ ಏಳುವ ಗಂತಿಗಳು ಇನ್ನೊಂದು ಕಾರಣ್.  ಈಲಿ (ಯಕೃತ್ತು) ಊದಿಕೊಂಡು ಅರಿಶಿನಾರಿಗೆ (ಸಿರೋಸಿಸ್) ಆಗಿದ್ದರೆ, ಇಲ್ಲವೆ ಈಲಿಯಿಂದ ಹೊರಬೀಳುವ ತೂರುಗೊಂದಿಯ್ (ಪೋರ್ಟಲ್) ಸಿರಗಳಿಗೆ ಆತಂಕವಾಗಿದ್ದರೆ, ಅನ್ನನಾಳದ ಕೆಳಗಿನ್ ಮೂರರಲೊಂದು ಭಾಗದ ಒಳಗಡೆ ಸಿರಗಳು ಕೊಂಕಿ ಊದಿಕೊಳ್ಳುತ್ತವೆ.  ಇವು ಒಡೆದಾಗ ವಾಂತಿಯಲ್ಲಿ ರಕ್ತಕಾರಬಹುದು.  ರಕ್ತಕಾರುವುದು ಹೆಚ್ಚಾದರೆ ಪ್ರಾಣಕ್ಕೆ ಅಪಾಯ. (ಎ.ಕೆ.ಜಿ)
 ಅನ್ನಪೂರ್ಣ:  ನೇಪಾಲದಲ್ಲಿನ ಹಿಮಾಲಯದ ಮಧ್ಯಭಾಗದಲ್ಲಿರುವ ಒಂದು ಉನ್ನತಪರ್ವತಶ್ರೇಣಿ.  ಕಾಳಿ, ಗಂಡಕಿ ಮತ್ತು ಮರ್ಯಾಂದಿ ನದೀಕಣಿವೆಗಳ ಮಧ್ಯಭಾಗದಲ್ಲಿದ್ದು,  ಅನ್ನಪೂರ್ಣವೆಂಬ ನಾಲ್ಕು ಉನ್ನತ ಶಿಖರಗಳಿಂದ ಕೂಡಿದೆ.  ಅನ್ನಪೂರ್ಣ-I:8,044 ಮೀ ಅನ್ನಪೂರ್ಣ-II: 7,937 ಮೀ ಇವೆರಡು ಪಶ್ಚಿಮ ಮತ್ತು ಪೂರ್ವ ತುದಿಯಲ್ಲಿವೆ. ಅನ್ನಪೂರ್ಣ-III: 7,576 ಮೀ ಅನ್ನಪೂರ್ಣ-IV: 7,525 ಮೀ ಇವೆರಡು ಮಧ್ಯಶ್ರೇಣಿಯಲ್ಲಿವೆ.
   ಅನ್ನಪೂರ್ಣ-I : ಪ್ರಪಂಚದ ಉತ್ತುಂಗ ಶಿಖರಗಳಲ್ಲಿ ಹನ್ನೊಂದನೆಯದು. 1950ವರೆಗೆ ಅಸ್ತಿತ್ವ ತಿಳಿದಿರಲಿಲ್ಲ. ಯುರೋಪಿಯನ್ ಪರ್ವತಾರೋಹಿಗಳು ಕಾಳಿ, ಗಂಡಕಿ ನದೀಕಣಿವೆಗಳ ವಾಯುವ್ಯ ದಿಕ್ಕಿಗಿರುವ ಧವಳಗಿರಿಯನ್ನು ಏರಲು ಹೊರಟು ದಾರಿಕಾಣದೆ ಅನ್ನಪೂರ್ಣ ಶಿಖರದ ಕಡೆ ಹೊರಟರು.  ಆಗ ಅದೇ ಜಗತ್ತಿನ ಅತ್ಯುನ್ನತ ಶಿಖರವೆಂದು ಪರಿಗಣಿಸಲಾಯಿತು.
   ಪ್ರಾನ್ಸಿನ ಮೊರಿಸ್ ಹರ್ ಜಾಗ್ ಎಂಬುವನ ನೇತೃತ್ವದಲ್ಲಿ ಪೆಂಚ್ ಪರ್ವತಾರೋಹಿ ತಂಡ ಈ ಶಿಖರಾರೋಹಣದ ಹಾದಿಯಲ್ಲಿ ಐದು ಶಿಬಿರಗಳನ್ನು ಹೂಡಿ (ಅತ್ಯಂತ ಎತ್ತರದ ಶಿಬಿರಸ್ಥಾನ 7,498 ಮೀ)1950ರ ಜೂನ್ 3ನೆಯ ತಾರೀಖು ಹರ್ ಜಾಗ್ ಮತ್ತು ಲೂಯಿಸೆ ಲಾಚೆನೆಲ್ ಶಿಖರದ ಉತ್ತುಂಗಸ್ಥಾನವನ್ನು ತಲುಪಿದರು. ಆದರೆ ಅವರೋಹಣಾವಧಿಯಲ್ಲಿ ತಂಡದ ನಾಯಕರು ದುರದೃ‍‌‌ಷ್ಟಕರ ಘಟನೆಗಳನ್ನು ಎದುರಿಸಬೇಕಾಯಿತು.
   ಆದರೂ ಅನ್ನಪೂರ್ಣ-I ಹಿಮಾಲಯದ ಉನ್ನತ ಶಿಖರಗಳಲ್ಲೆಲ್ಲ ಮೊಟ್ಟಮೊದಲ ಬಾರಿಗೆ ಹತ್ತಲ್ಪಟ್ಟ ಉತ್ತುಂಗಶಿಖರ. ಎಚ್.ಬಿಲ್ಲರ್, ಎಚ್. ಸ್ಪೆಯಿನ್ ಮೆಟ್ಜ್ ಮತ್ತು ಜ್.ವೆಲೆನ್ ಕಾಂಪ್ ಎಂಬುವರು 1955 ಮೇ 30ರಂದು ಅನ್ನಪೂರ್ಣ್-IV ನ್ನು ಹತ್ತಿದರು. 1960 ಮೇ 17ಜೆ.ಓ.ಎಮ್. ರಾಬರ್ಟ್ಸ್ ನ ನೇತೃತ್ವದಲ್ಲಿ ಆರ್.ಗ್ರಾಂಟ್ ಮತ್ತು ಸಿ.ಜೆ. ಗೊನಿಂಗ್ ಟನ್ ಎಂಬುವರು ಅನ್ನಪೂರ್ಣ-IIನ್ನು ಯಶಸ್ವಿಯಾಗಿ ಹತ್ತಿದರು. (ಕೆ.ಆರ್)
   ಅನ್ನಪೂರ್ಣ: ಪಾರ್ವತೀದೇವಿಯ ಅನೇಕ ಸ್ವರೂಪಗಳಲ್ಲಿ ಒಂದು.  ಈಕೆ ಕಾಶೀವಿಶ್ವನಾಥೇಶ್ವರನ ಹೆಂಡತಿ.  ಈ ದೇವಿಯನ್ನು ಸ್ತುತಿಸುವುದರಿಂದ ಅನ್ನಸಮೃದ್ಧಿಯೂ ಸಂಪದಭಿವೃದ್ಧಿಯೂ ಸೌಖ್ಯವೂ ಉಂಟಾಗುತ್ತದೆಯೆಂಬ ಪ್ರತೀತಿಯಿದೆ. ಅನ್ನಪೂರ್ಣ ದೇವಿಯ ಸ್ತೋತ್ರವನ್ನು ಶ್ರೀ ಶಂಕರಾಚಾರ್ಯರು ರಚಿಸಿರುತ್ತಾರೆ. (ಎಸ್.ಎನ್.ಕೆ.)
   ಅನ್ಯತ್ರ ಸ್ಥಿತಿ: ಒಬ್ಬ ವ್ಯಕ್ತಿ ನಿರ್ದಿಷ್ಟವಾದ ಸ್ಥಳ ಮತ್ತು ಕಾಲದಲ್ಲಿ ಶಿಕ್ಷಾರ್ಹವಾದ ಕೃತ್ಯವನ್ನು ಮಾಡಿರುವುದಾಗಿ ಆರೋಪಿಸಿ, ಅವನನ್ನು ವಿಚಾರಣೆಗೆ ಗುರಿಪಡಿಸಿದಾಗ ಆ ವ್ಯಕ್ತಿ ಆ ಕೃತ್ಯ ನಡೆಯಿತೆಂದು ಹೇಳಲಾದ ಸ್ಥಳದಲ್ಲಾಗಲಿ, ಆ ಸಮಯದಲ್ಲಾಗಲಿ ಇರದೆಅ ಬೇರೊಂದು ಸ್ಥಳದಲ್ಲಿ ಇದ್ದುದಾಗಿ ರುಜುವಾತುಪಡಿಸಿ ಆರೋಪಿತ ಕೃತ್ಯ ತನ್ನಿಂದ ನಡೆದಿಲ್ಲವೆಂದು ಸೂಚಿಸುವ ಪ್ರಮಾಣವೇ (ಸಾಕ್ಷ್ಯತ್ವ) ಅನ್ಯತ್ರ ಸ್ಥಿತಿ (ಅಲಿಬಿ). ಫಿರ್ಯಾದಿ ಆರೋಪಣೆಯನ್ನು ರುಜುವಾತು ಪಡಿಸಲು ಸಾಕ್ಷಿಗಳನ್ನು ವಿಚಾರಣೆ ಮಾಡುವಾಗ, ಸಾಕ್ಷಿ ಹೇಳಿಸುವಾಗ, ಆರೋಪಿ ತನ್ನಿಂದ ಕೃತ್ಯ ನಡೆಯಿತೆನ್ನಲಾದ ಸ್ಥಳದಲ್ಲಾಗಲಿ ಸಮಯದಲ್ಲಾಗಲಿ ಇರದೆ ಪರಸ್ಥಳದಲ್ಲಿ ಇದ್ದನೆಂಬ ಅಂಶ ಸಂಗತವಾದುದು (ರೆಲವೆಂಟ್). ಅನ್ಯತ್ರ ಸ್ಥಿತಿ ಆರೋಪಿ ರುಜುವಾತುಪಡಿಸಬೇಕಾದ ಅಂಶವಿಲ್ಲ. ಅದು ಅವನ ಹೊಣೆಯೂ ಅಲ್ಲ.  ಇದು ಫಿರ್ಯಾದಿಯ ಆರೋಪಣೆಯಲ್ಲಿರುವ ಅಸಂಭಾವ್ಯತೆಯನ್ನು ನ್ಯಾಯಾಲಯಕ್ಕೆ ತೋರಿಸಿಕೊಡುವುದರ ಮೂಲಕ ಆರೋಪಣೆಯಿಂದ ಬಿಡುಗಡೆ ಪಡೆಯುವ ಪ್ರಮಾಣಬದ್ಧ ಸೌಲಭ್ಯ. 
  ಅನ್ಯಮನಃಸ್ಪರ್ಶನ: ಒಬ್ಬನ ಮನಸ್ಸಿನ ಮೇಲೆ ಮತ್ತೊಬ್ಬನ ಮನಸ್ಸು ಭಾವಪ್ರಭಾವದ ಮೂಲಕ (ಇಂದ್ರಿಯಗಳ ಮೂಲಕವಲ್ಲ) ಕಾರ್ಯ ಮಾಡುವುದು (ಟೆಲಿಪತಿ).  ಅಂದರೆ ಜ್ಣಾನೇಂದ್ರಿಯಗಳನ್ನುಪಯೋಗಿಸದೆ ಅನ್ಯನೊಬ್ಬನ ಮನಸ್ಸಿನಲ್ಲಿ ಉಂಟಾಗುವ ಭಾವನೆಗಳನ್ನು, ಯೋಚನೆಗಳನ್ನು ಮತ್ತೊಬ್ಬನು ತಿಳಿದುಕೊಳ್ಳುವುದು ಎಂದರ್ಥ.  ಆ ವ್ಯಕ್ತಿ ಹತ್ತಿರದಲ್ಲಿರೂ ಇರಬಹುದು.  ಇಲ್ಲವೆ ಕಣ್ಣಿಗೆ ಕಾಣದಂತೆ ಅತಿ ದೂರದಲ್ಲಿದ್ದರೂ ಇರಬಹುದು. ಯೋಗಾಭ್ಯಾಸದ ಮೂಲಕ ಇಂಥ ಶಕ್ತಿಯನ್ನು ಪಡೆಯಬಹುದೆಂದು ಪತಂಜಲಿ ತನ್ನ ಯೋಗಸೂತ್ರದಲ್ಲಿ ಬಹುಹಿಂದೆಯೇ ಹೇಳಿದ್ದಾನೆ.  ಈ ನಂಬಿಕೆ ಪ್ರಾಚೀನ ಕಾಲದಿಂದಲೂ ಅನೇಕ ಪ್ರದೇಶಗಳಲ್ಲಿದೆ.  ಇಂಥ ಶಕ್ತಿ ಇಲ್ಲವೆಂದೂ ಜ್ನಾನೇಂದ್ರಿಯದ ಮೂಲಕವಲ್ಲದೆ ಜ್ನಾನವನ್ನು  ಪಡೆಯುವುದು ಅಸಾಧ್ಯವೆಂದೂ ಚಾರ್ವಾಕರ ನಂಬಿಕೆ.
    ಇಂದಿಗೂ ತಜ್ನರಲ್ಲಿ ಈ ಬಗ್ಗೆ ವಾದವಿವಾದಗಳಿವೆ. ಕೆಲವರು ಅನ್ಯಮನಃಸ್ಪರ್ಶನ ನವೆಯುವುದೆಂದೂ ಇದಕ್ಕೆ ಆಧಾರವನ್ನು  ವೈಜಾನಿಕ ರೀತಿಯಿಂದ ಕಂಡುಹಿಡಿಯಲು ಸಾಧ್ಯವೆಂದೂ ನಂಬಿ ಅನೇಕ ಪರಿಶೋಧನೆಗಳನ್ನು ನಡೆಸಿರುವರು. ಇನ್ನು ಕೆಲವರು ಇದು ಅಸಾಧ್ಯವೆಂದೂ,ಈ ನಂಬಿಕೆ ನಿರಾಧಾರವೆಂದೂ ತಳ್ಳಿ ಹಾಕಿ ಈ ಬಗ್ಗೆ ಯೋಚನೆ ಮಾಡುವುದು ಪ್ರಯೋಗಗಳನ್ನು ನಡೆಸುವುದು ಕೇವಲ ಕಾಲ ವ್ಯಯವೆಂದು ತೀರ್ಮಾನಿಸಿರುವರು. ಮತ್ತೆ  ಕೆಲವು ಸಂದೇಹವಾದಿಗಳು ಪರಿಶೋಧನೆಗಳನ್ನು ನಡೆಸಿ ಆ ಮೇಲೆ ಈ ವಿಚಾರವನ್ನು ತಳ್ಳಿ ಹಾಕುವುದು ಉತ್ತಮವೆಂದು ಪ್ರಯೋಗಗಳನ್ನು ನಡೆಸಿರುವರು.
   ಇಂಥ ವಿ‍‍ಷಯಗಳನ್ನು ಪರಿಶೋಧಿಸಲು ಭೌತಾತೀತ ವಿ‍ಷಯ ಸಂಶೋಧನ ಸಂಸ್ಥೆ (ಸೊಸೈಟಿ ಫಾರ್ ಸೈಕಿಕಲ್ ರಿಸರ್ಚ್) ಎಂಬ ಒಂದು ಸಂಸ್ಥೆಯನ್ನು ಲಂಡನ್ನಿನಲ್ಲಿ ಸ್ಥಾಪಿಸಿದರು. (1882) ಅನ್ಯಮನಃಸ್ಪರ್ಶನದ ಘಟನೆಗಳನ್ನು ಶೇಖರಿಸಿ ಕೆಲವನ್ನು ಸಂಶೋಧನೆಗೆ ಗುರಿಮಾಡಿದರು. ಆದರೆ ಈ ವಿಷಯದಲ್ಲಿ ನಂಬಿಕೆ ಇದ್ದವರು ಇದು ಸತ್ಯ ಎಂದು ತಮ್ಮ ನಂಬಿಕೆಯನ್ನು ಈ ಮೂಲಕ ಬಲಪಡಿಸಿಕೊಂಡರು.  ಇತರರು ಇವೆಲ್ಲ ಕಟ್ಟುಕಥೆಗಳೆಂದೂ,  ಈ ಪರಿಶೋಧನೆಗಳು ನಂಬಲರ್ಹವಾದ ಆಧಾರಗಳನ್ನು ಪಡೆದಿಲ್ಲವೆಂದೂ ತಿರಸ್ಕರಿಸಿದರು.
  ಇತ್ತೀಚೆಗೆ ಈ ಬಗ್ಗೆ ಶೋಧನೆ ಮಾಡಲು ಮನಶ್ಯಾಸ್ತ್ರಜ್ನರು ಅಂಕಿಅಂಶ ಪರಿಶೀಲನ ವಿಧಾನವನ್ನೊಳಗೊಂಡ ಪ್ರಾಯೋಗಿಕ ಮಾರ್ಗವನ್ನು ಅವಲಂಬಿಸಿರುವರು.  ಉದಾಹರಣೆಗೆ ಒಂದು ಇಸ್ಪೀಟ್ ಪ್ಯಾಕನ್ನು ತೆಗೆದುಕೊಂಡು ಎಲೆಗಳನ್ನು ಚೆನ್ನಾಗಿ ಕಲಸಿ ಅವುಗಳಲ್ಲಿ ಒಂದನ್ನು ಕೈಗೆ ತೆಗೆದುಕೊಂಡು ಒಬ್ಬ ವ್ಯಕ್ತಿ ಒಂದು ಕೊಠಡಿಯಲ್ಲಿ ಕುಳಿತು ನೋಡುತ್ತಿದ್ದರೆ ಅದೇ ಸಮಯದಲ್ಲಿ ಮತ್ತೊಬ್ಬ ವ್ಯಕ್ತಿ ಇನ್ನೊಂದು ಕೊಠಡಿಯಲ್ಲಿ ಆ ಎಲೆ ಇಂಥದೆಂದು ತನ್ನ ಪಟ್ಟಿಯಲ್ಲಿ ಬರೆದಿಡುವನು.  ಪ್ಯಾಕಿನಲ್ಲಿ ನಾಲ್ಕು ವಿಧವಾದ ಎಲೆಗಳು ಇರುವುದರಿಂದ ನಾಲ್ಕು ಸಲಕ್ಕೆ ಆಕಸ್ಮಿಕವಾಗಿ ಒಂದು ಎಲೆಯನ್ನು ತಪ್ಪಿಲ್ಲದೆ ಕಂಡುಹಿಡಿಯುವುದು ಸಾಧ್ಯ.  ಆದರೆ ಶೇ.೩೦ ಅಥವಾ ಶೇ. 40 ಸಲ ತಪ್ಪಿಲ್ಲದೆ ಕಂಡುಹಿಡಿದರೆ ಅದು ಕೇವಲ ಆಕಸ್ಮಿಕ ಘಟನೆಯಲ್ಲದೆ ಒಂದು ನಿರ್ದಿಷ್ಟ ಘಟನೆಯಾಗಿ ಅನ್ಯಮನಃಸ್ಪರ್ಶನೆಗೆ ಆಧಾರವಾಗಬಹುದು. ಇಂಥ ಪ್ರಯೋಗಗಳು ಅನೇಕ ವರ್ಷಗಳ ಕಾಲ ನಡೆದುವು.  ಕೆಲವು ವೇಳೆ ಇದು ಕೇವಲ ಆಕಸ್ಮಿಕವೆಂದೂ ಮತ್ತೆ ಕೆಲವು ಸಾರಿ ನಿರ್ದಿಷ್ಟವಾದದ್ದೆಂದೂ ತೋರಿಬಂತು.
    ರೈನ್ ಮತ್ತು ಆತನ ಸಹೋದ್ಯೋಗಿಗಳು ಡ್ಯೂಕ್ ವಿಶ್ವವಿದ್ಯಾನಿಲಯದಲ್ಲಿ ಒಂದು ಹೊಸಾ ವಿಧಾನವನ್ನು ಕಂಡುಹಿಡಿದರು.  (ಸು.1929). ಇಸ್ಪೀಟು ಎಲೆಗಳ ಬದಲು ಜೀನರ್ ಎಲೆಗಳನ್ನು ಉಪಯೋಗಿಸಿದರು. ಈ ಎಲೆಗಳ ಮೇಲೆ ವೃತ್ತರೇಖೆ, ಚಚ್ಚೌಕರೇಖೆ, ಐದು ಮೂಲೆಗಳ ನಕ್ಷತ್ರರೇಖೆ, ಧನಗುರುತು ಮತ್ತು ವಕ್ರರೇಖೆ-ಈ ಐದು ಚಿನ್ಹೆಗಳು ಇರುವುವು.  ಒಂದೊಂದು ಪ್ಯಾಕಿನಲ್ಲಿ 25 ಎಲೆಗಳು. ಆಕಸ್ಮಿಕ ಘಟನೆಯಿಂದ 25 ಎಲೆಗಳಲ್ಲಿ ಐದು ಎಲೆಗಳನ್ನು ತಪ್ಪಿಲ್ಲದೆ ಹೇಳುವುದು ಸಾಧ್ಯ.  ಆದರೆ ರೈನ್ ನಡೆಸಿದ ಪ್ರಯೋಗಗಳಲ್ಲಿ ಕೆಲವರು ೨೫ ಎಲೆಗಳಿಗೆ ಏಳು, ಎಂಟು ಎಲೆಗಳನ್ನು ಸರಿಯಾಗಿ ಗುರುತಿಸಿದರು.  ಅನ್ಯಮನಃಸ್ಪರ್ಶನೆಯಲ್ಲಿ ನಂಬಿಕೆಯನ್ನಿಟ್ಟಿರುವವರು, ಇಡದವರು, ಸು. 30 ವಿಶ್ವವಿದ್ಯಾನಿಲಯಗಳಲ್ಲಿ ಲಕ್ಷಾಂತರ ಸಲ ಪ್ರಯೋಗಗಳನ್ನು ನಡೆಸಿಲ್ಲದೆ ಕೆಲವರು ರೈನ್ ಊಹೆ ಸರಿಯೆಂದು ತೋರಿಸಿಕೊಟ್ಟಿರುವರು.  ಅಂಕಿ ಅಂಶ ಪದ್ಧತಿಯಲ್ಲೂ ಪ್ರಾಯೋಗಿಕ ರಚನೆಯಲ್ಲೂ ಇರುವ ಲೋಪದೋಷಗಳನ್ನು ಪರಿಹಾರ ಮಾಡಿದರು. ಆಕಸ್ಮಿಕ ಘಟನೆಗಿಂತ ಹೆಚ್ಚಾಗಿ ಕೆಲವು ವ್ಯಕ್ತಿಗಳು   ಬಹುದೂರದಿಂದ ಈ ಎಲೆಗಳನ್ನು ಸರಿಯಾಗಿ ಗುರುತಿಸಬಲ್ಲರೆಂದು ಈಗ ಖಚಿತವಾಗಿದೆ.

ಆದರೆ ಈ ಶಕ್ತಿ ಎಂಥ ವ್ಯಕ್ತಿಗಳಲ್ಲಿ ಇರುವುದೆಂಬುದನ್ನು ಕಂಡುಹಿಡಿಯುವುದು ಇನ್ನೂ ಸಾಧ್ಯ್ವವಾಗಿಲ್ಲ. ಈ ಶಕ್ತಿಗೂ ಬುದ್ಧಿಶಕ್ತಿಗೂ ಯಾವ ಸಂಬಂಧವೂ ಇಲ್ಲವೆಂಬುದು ಸ್ಪಷ್ಟ. ಆದರೆ ಈ ಶಕ್ತಿಗೂ ವ್ಯಕ್ತಿತ್ವಭೇಧಗಳಿಗೂ ಇರುವ ಸಂಬಂಧ ಇನ್ನೂ ಸರಿಯಾಗಿ