ಪುಟ:Mysore-University-Encyclopaedia-Vol-1-Part-1.pdf/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮೀರ್ ಖುಸ್ರು- ಅಮೃತಬಜ಼ಾರ್ ಪತ್ರಿಕ ಅಮೀರ್ ಖುಸ್ರು : ಹಿಂದುಸ್ಥಾನದ ಗಿಣಿ, ಕವಿರಾಜ ಮುಂತಾದ ಬಿರುದುಗಳಿಂದ ಪ್ರಸಿದ್ಧನಾದ ಈತ ( 1253- 1325) ಬಲ್ಬನ್ನನ ಮಗನಾದ ಮಹಮ್ಮದನಿಗೆ ಗುರುವಾಗಿಯೂ ಅನಂತರ ದೆಹಲಿಯಲ್ಲಿ ಗ್ರಂಥಪಾಲಕನಾಗಿಯೂ ಪ್ರಸಿದ್ಧನಾಗಿದ್ದ. ಸಂಗೀತ ತತ್ತ್ವಶಾಸ್ತ್ರ ಮುಂತಾದುವುಗಳಲ್ಲಿ ಪರಿಣಿತ. ಪ್ರಸಿದ್ಧ ಪಾರಸಿ ಕವಿ ಮತ್ತು ಚರಿತ್ರಕಾರ. ಅಲ್ಲಾವುದ್ದೀನನ ದಕ್ಷಿಣಾಪಥದ ಯುದ್ಧಗಳಲ್ಲಿ ಅವನ ಸಂಗಡಿಗನಾಗಿದ್ದು ಖಜೈನ್-ಉಲ್-ಪುತುಹ್ ಎಂಬ ಅಧಿಕೃತವಚರಿತ್ರೆಯನ್ನು ರಚಿಸಿದ. ಇವನ ಇನ್ನೊಂದು ಕೃತಿ ದೇವಲ್ ರಾಣಿ-ವ-ಖಿಸ್ರ್ ಖಾನ್. ಇದೊಂದು ಸುಂದರ ಶೈಲಿಯ ಕಾವ್ಯ. ಈ ಎರಡು ಕೃತಿಗಳೂ ಮಧ್ಯಕಾಲೀನ ಭಾರತಚರಿತ್ರೆಗೆ ಮುಖ್ಯ ಮಾಹಿತಿಗಳಾಗಿವೆ. (ಎಂ.ಎಸ್.ಬಿ.)

     ಅಮುಗಿದೇವ: 12ನೆಯ ಶತಮಾನದಲ್ಲಿದ್ದ ಶರಣ. ಸ್ವಲ್ಪ ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಇಬ್ಬರು ಅಥವಾ ಮೂವರು ಅಮುಗಿದೇವ ಎಂಬ ಹೆಸರಿನವರು ಇದ್ದಿರಬೇಕೆಂದು ವಿದ್ವಾಂಸರ ಅಭಿಪ್ರಾಯ. ಒಬ್ಬ ನೇಯ್ಗೆ ಕಾಯಕದವ, ಇನ್ನೊಬ್ಬ ಕನ್ನಡಿ (ಕ್ಷೌರದ) ಕಾಯಕದವ. ಇವರಿಬ್ಬರಲ್ಲದೆ ಅಮುಗೇಶ್ವರಲಿಂಗ ಎಂಬ ಅಂಕಿತದ ಒಬ್ಬ ವಚನಕಾರನನ್ನು ಕವಿಚರಿತೆಕಾರರು ಹೇಳಿ ಒಂದು ವಚನವನ್ನು ಉದಾಹರಿಸಿ ಆತ ಇನ್ನೊಬ್ಬ ಅಮುಗಿದೇವಯ್ಯನೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅಮುಗೇಶ್ವರಲಿಂಗ ಎಂಬುದು ಮೊದಲ ಅಮುಗಿದೇವನ ಪತ್ನಿ ರಾಯಮ್ಮನ ವಚನಗಳ ಅಂಕಿತವೆಂದು ಈಚೆಗೆ ನಿರ್ಧಾರವಾಗಿರುವುದರಿಂದ ಅಮುಗಿದೇವರು ಮೂವರಲ್ಲ ಇಬ್ಬರೇ ಎಂದು ಹೇಳಬಹುದಾಗಿದೆ. ಕನ್ನಡಿ ಕಾಯಕದ ಅಮುಗಿದೇವ ಕಮಳೇಶ್ವರಲಿಂಗ ಎಂಬ ಅಂಕಿತದಿಂದ ವಚನಗಳನ್ನು ಬರೆದಿದ್ದಾನೆ. ಆದರೆ ಸಿದ್ಧರಾಮನೊಡನೆ ಸಂಬಂಧವನ್ನು ಪಡೆದು ಪ್ರಸಿದ್ಧನಾದ ಅಮುಗಿದೇವ ನೇಯ್ಗೆಕಾಯಕದ ಅಮುಗಿದೇವನೆಂಬುದನ್ನು ಕನ್ನಡ ಕೃತಿಗಳು ಮತ್ತು ಪ್ರಚಲಿತವಾಗಿರುವ ಕಥೆಗಳು ಏಕಕಂಠದಿಂದ ಹೇಳುತ್ತವೆ.
    ನೇಯ್ಗೆಕಾಯಕದ ಅಮುಗಿದೇವನ ವಚನಗಳ ಅಂಕಿತ ಸಿದ್ಧಸೋಮನಾಥ ಎಂಬುದು. ಪಂಡರಾಪುರಕ್ಕೆ ಸಮೀಪದಲ್ಲಿರುವ ಪುಳುಜ ಅಥವಾ ಪುಳುಂಜ (ಈಗ ಪುಳೂಜ, ಹೂಳಜ) ಎಂಬ ಗ್ರಾಮದ ಸೋಮನಾಥನೇ ಈತನ ಇಷ್ಟದೈವವಾಗಿದ್ದು ಅವನ ಹೆಸರನ್ನೇ ತನ್ನ ವಚನಗಳ ಅಂಕಿತವನ್ನಾಗಿಟ್ಟುಕೊಂಡಂತೆ ಕಾಣುತ್ತದೆ. ಆ ದೇವಾಲಯದಲ್ಲಿ ದೊರೆತಿರುವ ಒಂದು ಶಾಸನ (1200) ಯಾದವಸಿಂಘಣ ಅನಮುಗಿದೇವನಿಗೆ ದಾನ ಕೊಟ್ಟುದನ್ನು ಉಲ್ಲೇಖಿಸುತ್ತದೆ. ಈತನನ್ನು ಕುರಿತು ಒಂದು ಕಥೆಯನ್ನು ರಾಘವಾಂಕ ಚಾರಿತ್ರದ ಸಿದ್ಧನಂಜೇಶ ಸಂಗ್ರಹಿಸಿಕೊಟ್ಟಿದ್ದಾನೆ. ಶಂಕರಲಿಂಗಕವಿ ಅಮುಗಿದೇವನ ಮೇಲೆ ಒಂದು ರಗಳೆಯನ್ನು ಬರೆದಿದ್ದಾನೆ. ಶಿವಲಿಂಗಕವಿ ಅಮುಗಿದೇವಯ್ಯಗಳ ಸಾಂಗತ್ಯ ಎಂಬ ಒಂದು ಸ್ವತಂತ್ರ ಕೃತಿಯನ್ನೇ ರಚಿಸಿದ್ದಾನೆ. ಸಿದ್ಧರಾಮ ಸೊನ್ನಲಿಗೆಯಲ್ಲಿ (ಸೊಲ್ಲಾಪುರ) ಕ್ಷೇತ್ರಪೂಜೆಯನ್ನು ಮಾಡಲು ಉದ್ದೇಶಿಸಿ ಅದಕ್ಕಾಗಿ ಆ ಊರಿನ ಎಲ್ಲರ ಮನೆಯ ಮುಂದೂ ಕೊಟ್ಟಣವನ್ನು ಕುಟ್ಟಲು ಹಾಕಿಸಿದನೆಂದೂ ಅಮುಗಿದೇವ ನಾವು ಭವಿ ಸೇವೆಯಂ ಮಾಡುವವರಲ್ಲ ಎಂದು ಬತ್ತವನ್ನು ಚೆಲ್ಲಿ ಊರನ್ನೇ ಬಿಟ್ಟು ಹೊರಟನೆಂದೂ ಅದನ್ನರಿತ ಸಿದ್ಧರಾಮ ಆತನ ಲಿಂಗನಿಷ್ಠೆಯನ್ನು ಕಂಡು ಮೆಚ್ಚಿದನೆಂದೂ ಈ ಎಲ್ಲ ಕೃತಿಗಳಲ್ಲಿ ಉಕ್ತವಾದ ಕಥೆಯಿಂದ ತಿಳಿದುಬರುತ್ತದೆ. ಸೊಲ್ಲಾಪುರ ಪುಳುಜಗಳು ಅಕ್ಕಪಕ್ಕದಲ್ಲಿರುವ ಊರುಗಳಾದುದರಿಂದ ಅಮುಗಿದೇವ ಸೊನ್ನಲಾಪುರದಲ್ಲಿದ್ದಿರಬೇಕು. ಅನಂತರ ಈ ಯಾವುದೋ ಒಂದು ಘಟನೆ ಕಾರಣವಾಗಿ ಅಲ್ಲಿಂದ ಹೊರಟು ಬಸವಣ್ಣನವರ ಕಾರ್ಯಕ್ಷೇತ್ರವಾದ ಕಲ್ಯಾಣಕ್ಕೆ ಬಂದು ನೆಲೆಸಿರಬೇಕು.
      ಕಲ್ಯಾಣ ಕೆಲವುಕಾಲ ಈತನ ಕಾರ್ಯಕ್ಷೇತ್ರವಾಗಿತ್ತು. ಶರಣರ ಧಾರ್ಮಿಕ ಮತ್ತು ಸಾಮಾಜಿಕ ಸಮತೆಯ ಮಹಾಸಾಧನೆಯಲ್ಲಿ ಈತ ಮತ್ತು ಈತನ ಪತ್ನಿ ರಾಯಮ್ಮ ಭಾಗವಹಿಸಿದರೂ ಇಬ್ಬರೂ ಒಳ್ಳೆಯ ವಚನಕಾರರೂ ಆಗಿದ್ದರೆಂಬುದಕ್ಕೆ ಈಗ ಸಿಕ್ಕಿರುವ ಅವರ ಕೇವಲ ಕೆಲವು ವಚನಗಳೇ ಸಾಕ್ಷಿಯಾಗಿವೆ. ಕಲ್ಯಾಣದ ಕ್ರಾಂತಿಯ ಅನಂತರ ಈತ ಅಲ್ಲಿಂದ ಹೊರಟು ತನ್ನ ಇಷ್ಟದೇವತೆ ಇದ್ದ ಪುಳುಜೆಗೆ ಬಂದಿರಬೇಕು. ಅಲ್ಲಿ ಜನಜಾಗೃತಿಯನ್ನುಂಟುಮಾಡುತ್ತ ಆತ ದೀರ್ಘಕಾಲ ಬದುಕಿದಂತೆ ತೋರುತ್ತದೆ. ಯಾದವಸಿಂಘಣನಂಥ ರಾಜನನ್ನೂ ಆಕರ್ಷಿಸಿ ಆತನಿಂದ ಗೌರವಪೂರ್ವಕವಾಗಿ ದಾನವನ್ನು ಪಡೆಯುವಷ್ಟು ಪ್ರಭಾವಶಾಲಿಯಾಗಿ ಈತನ ವ್ಯಕ್ತಿತ್ವ ಅಲ್ಲಿ ಬೆಳೆಯಿತು. ಪುಳುಜೆಯಲ್ಲಿ ಮಾತ್ರವಲ್ಲದೆ ವಿಜಾಪುರದ ಸುತ್ತ ಮುತ್ತಲಿನ ಭಾಗಗಳಲ್ಲಿ ಮತ್ತು ಜತ್ತ ಮುಧೋಳ ಸಂಸ್ಥಾನಗಳಲ್ಲಿ ಕೂಡ ಅಮುಗಿದೇವನ ಉಲ್ಲೇಖನವಿರುವ ಅನೇಕ ದೇವಾಲಯಗಳಿರುವುದು ತಿಳಿದುಬರುತ್ತದೆ. ಈತನಿಗೆ ಅಮಾಕಸಿದ್ಧ ಎಂಬ ಹೆಸರು ಪ್ರಚಲಿತವಾಗಿರುವುದೂ ಮೇಲೆ ಹೇಳಿದ ಶಾಸನದಲ್ಲಿ ಈತನಿಗೆ ಕೊಟ್ಟಿರುವ ಸಿದ್ಧಕುಲಾರ್ಣವಪ್ರವರ್ಧನಸುಧಾಕರ ಎಂಬ ವಿಶೇಣವೂ ಕುತುಹಲಕರವಾದ ಅಂಶಗಳು. ಕುರುಬ ಅಥವಾ ಹಾಲು ಮತದವರ ಮೇಲೆ ವಿಶೇಷ ಪ್ರಭಾವವನ್ನು ಬೀರಿ ಅವರನ್ನು ಲಿಂಗವಂತರನ್ನಾಗಿ ಮಾಡಿದ ಸಿದ್ಧ ಅಮುಗಿದೇವಯ್ಯ.                                              (ಎಚ್.ಟಿ.)
         ಅಮುದ್ರಿತ ಗ್ರಂಥಚಿಂತಾಮಣಿ: ಸಾಹಿತ್ಯಸೇವೆಯನ್ನೇ ಪ್ರಧಾನವಾಗಿಟ್ಟುಕೊಂಡು ಪ್ರಕಟವಾದ ತೆಲುಗು ಮಾಸಪತ್ರಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದ ಮಾಸಿಕ. 19ನೆಯ ಶತಮಾನದ ಕೊನೆಯಲ್ಲಿ ಸ್ಥಾಪಿತವಾದ ಈ ಪತ್ರಿಕೆ ಪಿ. ರಾಮಕೃಷ್ಣಯ್ಯನವರು ಸಂಪಾದಕರು. ತಾಳೆಗರಿಯಲ್ಲಿದ್ದ ಹಸ್ತಪ್ರತಿಗಳನ್ನು ಸಂಪಾದಿಸಿ ಸರಳವಾದ ತೆಲುಗು ಭಾಷೆಯಲ್ಲಿ ಪ್ರಕಟಿಸಿದ ಕೀರ್ತಿ ಅವರ ಮತ್ತು ಅವರ ಸಹೋದ್ಯೋಗಿಗಳದ್ದು.                 (ಎನ್.ಕ್.)
         ಅಮೂರ್ತರೂಪ: ಹೆಚ್ಚು ಕಡಿಮೆ ಪೂರ್ತಿಯಾಗಿ ಚಿತ್ರಕಲೆ. ಶಿಲ್ಪಕಲೆಗಳಿಗೆ ಸಂಬಂಧಪಟ್ಟ ವಿಚಾರ. ಮಾನವಪ್ರಪಂಚವನ್ನಾಗಲಿ ಲಲಿತಕಲೆ ಅನುಕರಿಸಲೇಬೇಕೆಂಬ ನಿಯಮ ಬಲು ಹಿಂದಿನಿಂದ ಉಪದೇಶಿತವಾಗಿ 19ನೆಯ ಶತಮಾನದ ಎರಡನೆಯ ಭಾಗದವರೆಗೂ ನಡೆದುಬಂತು. ಆಗ ಅದಕ್ಕೆ ವಿರೋಧವಾದ ಅಭಿಪ್ರಾಯಗಳು ತಲೆಯೆತ್ತಿದವು. ನಕಲು ತೆಗೆಯುವುದಲ್ಲ ಕಲೆಯ ಕಾರ್ಯ, ಪ್ರತಿಚಿತ್ರವನ್ನು ನಿರ್ಮಿಸುವುದೂ ಅಲ್ಲ ಎಂಬುದು ಒಂದು ವಾದ. ಹಾಗದರೆ ಯಾವುದು ಕಲೆಗಾರನ ಉದ್ಯೋಗ? ಪ್ರಕೃತಿ ಅವಲೋಕನದಿಂದ ಅವನ ಉದ್ಯಮ ಪ್ರಾರಂಭವಾಗುತ್ತದೆ. ನೋಟಕನ ಮನಸ್ತೃಪ್ತಿಯಿಂದ ಅದಕ್ಕೆ ಮಂಗಳಾಂತ ದೊರಕುತ್ತದೆ. ಅದಕ್ಕಾಗಿ ಕಣ್ಣು ಕೋರೈಸುವ ಬಣ್ಣಗಳ ಮೂಲಕ ವಿವಿಧ ನಕಾಶೆಗಳನ್ನು ಅವನು ತಯಾರಿಸಬೇಕು. ಒಂದು ಪಂಗಡದವರು (ಲೆ ಫಾವ್ಸ್) ಹೀಗೆ ಘೋಷಿಸಿದರು. ಇನ್ನೊಂದು ಗುಂಪಿನವರು (ದಿ ಕ್ಯೂಬಿಸ್ಟ್ಸ್) ವಸ್ತುಗಳ ಬಾಹ್ಯಾಕೃತಿಯ ಹಿಂದೆ ರೇಖಾಗಣಿತದ ಆಕೃತಿಗಳು ಇವೆ ಎಂದರು. ಇನ್ನೂ ಮುಂದು ಹೋದರು ಅಮೂರ್ತರೂಪದ (ಆ‍ಯ್ಬ್ ಸ್ಟ್ರಾಕ್ಟ್ ಫಾರಮ್) ಗುಂಪಿನವರು. ಇವರಿಗೆ ಪ್ರಕೃತಿಯ ಪದಾರ್ಥಗಳೇ ಅನಾವಶ್ಯಕ; ಬರಿ ನಕಾಶೆಗಳೂ ಆಕಾರಗಳೂ ಸಾಕು. ಅವನ್ನು ಕಲೆಯ ಸಾಧನಸಾಮಗ್ರಿಗಳಿಗೆ ಅನುಗುಣವಾಗಿ ಹೊಂದಿಸಿಟ್ಟರೆ ಯಾವುದೋ ಅವ್ಯಕ್ತಾಕೃತಿ ಪ್ರೇಕ್ಷಕನ ಮನಸ್ಸಿಗೆ ಮಿಂಚಿಹೊಳೆಯುತ್ತದೆ.
     ಈ ಅಭಿಪ್ರಾಯ ಸಾಹಿತ್ಯಕ್ಕೆ ಸಾಧನವಾದ ಭಾಷೆಗೆ ಅಷ್ಟೊಂದು ಅನ್ವಯವಾದಂತೆ ತೋರುವುದಿಲ್ಲ. ವಿಲಕ್ಷಣ ವಿಮರ್ಶಕರಲ್ಲಿ ಅಲ್ಲಿ ಇಲ್ಲಿ ಅದರ ಪ್ರತಿಧ್ವನಿ ಕೇಳಿಬಂದರೂ ಬರಬಹುದು.                         (ಎಸ್.ವಿ.ಆರ್.)
   ಅಮೃತ: ದೇವದಾನವರು ಕ್ಷೀರಸಮುದ್ರವನ್ನು ಮಥಿಸಿದಾಗ ಲಕ್ಷ್ಮಿ, ಚಂದ್ರ, ಐರಾವತ, ಉಚ್ಚೈಶ್ಮ್ರವಸ್ , ಹಾಲಹಲ ಮುಂತಾದುವುಗಳ ಜೊತೆಗೆ ಉದ್ಭವಿಸಿದುದು. ಚಂದ್ರ ಅಮೃತಭರಿತ ಎಂದು ಹಿಂದೂಗಳ ನಂಬಿಕೆ. ಕದ್ರುವಿನಿಂದ ತನ್ನ ತಾಯಿಯನ್ನು ಮುಕ್ತಗೊಳಿಸುವುದಕ್ಕಾಗಿ ಗರುಡ ಇದನ್ನು ದೇವಲೋಕದಿಂದ ಅಪಹರಿಸಿದ. ಶ್ರೀ ಕೃಷ್ಣನೂ ಇದನ್ನು ಉದಂಕ ಮಹರ್ಷಿಯ ತೃಪ್ತ್ಯರ್ಥವಾಗಿ ತರಿಸಿಕೊಟ್ಟ. ಇದನ್ನು ಕುಡಿದವರು ಮರಣವನ್ನು ಗೆಲ್ಲಬಲ್ಲರೆಂದೂ ಇದು ಸ್ವರ್ಗದಲ್ಲಿನ ದೇವತೆಗಳ ಪಾನೀಯವೆಂದೂ ನಂಬಿಕೆ.                     (ಆರ್.)
     ಅಮೃತಬಜ಼ಾರ್ ಪತ್ರಿಕ: ಭಾರತದ ದಿಟ್ಟ ರಾಷ್ಟ್ರೀಯ ಪತ್ರಿಕೆಗಳಲ್ಲೊಂದು. ಬಂಗಾಲದ ಜೆಸ್ಸೂರು ಜಿಲ್ಲೆಯ ಅಮೃತಬಜ಼ಾರ್ ಹೇಮಂತ ಕುಮಾರ ಘೋಷ್,ಶಿಶಿರಕುಮಾರ ಘೋಷ್ ಮತ್ತು ಮೋತಿಲಾಲ್ ಘೋಷ್ ಎಂಬ ಮೂರು ಸಾಹಸಿ ಸಹೋದರರು ಬಂಗಾಳಿಭಾಷೆಯಲ್ಲಿ ಈ ವಾರಪತ್ರಿಕೆಯನ್ನು ಪ್ರಾರಂಭಿಸಿದರು (1868). ಒಟ್ಟು 32 ರೂಪಾಯಿಯ ಮರದಚ್ಚಿನ ವ್ಯವಸ್ಥೆಯಲ್ಲಿ ಆ ಮುಂಚೆ ಅಮೃತಪ್ರಭಾಮಣಿ ಎಂದು ಪ್ರಕಟವಾಗುತ್ತಿದ್ದ ಪತ್ರಿಕೆ ನಿಂತ ಮೇಲೆ ಇದನ್ನು ಪ್ರಾರಂಭಿಸಿ, 1869ರಲ್ಲಿ ಇದರಲ್ಲಿ ಇಂಗ್ಲಿಷ್ ಕಾಲಂಗಳನ್ನು ತೆರೆಯಲಾಯಿತು. ರಾಜಕೃಷ್ಣಮಿತ್ರನೆಂಬ ನ್ಯಾಯಾಲಯದ ಕಾರಕೂನನೊಬ್ಬ ನ್ಯಾಯಾಧೀಶರ ಸಂಬಂಧದಲ್ಲಿ ರಹಸ್ಯಸ್ಫೋಟ       ಮಾಡಿ ಬರೆದ ಲೇಖನದಿಂದ ಪತ್ರಿಕೆ ಮೊಕದ್ದಮೆಗೊಳಗಾದಾಗ ಮುದ್ರಕ, ಪ್ರಕಾಶಕರಿಬ್ಬರಿಗೂ ಶಿಕ್ಷೆಯಾಯಿತು. ಸಂಪಾದಕ ಆಪಾದನೆ ಸಿದ್ಧವಾಗಲಿಲ್ಲ. ಪತ್ರಿಕೆ 1922ರಲ್ಲಿ ವಾರಕ್ಕೆರಡು ಸಲ ಪ್ರಕಟವಾಗತೊಡಗಿತು. ಸರ್ ಆಷ್ ಲೀ ಈಡನ್ ಗವರ್ನರ್ ಆಗಿದ್ದಾಗ ಪತ್ರಿಕೆಯ ಟೀಕೆ ಟಿಪ್ಪಣಿಗಳು ಮತ್ತು ವಾರ್ತಾವಿಚಾರಗಳು ಅವನನ್ನು ಕೆರಸಿದುವು. ಆತ ಸಂಪಾದಕರನನ್ನು ಒಲಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಗಿ, ದೇಶಭಾಷಾ ಪತ್ರಿಕೆಗಳ ಕಾನೂನು ಜಾರಿಗೆ ಬರುವಷ್ಟರಲ್ಲಿ, ಅದನ್ನರಿತ ಪತ್ರಿಕೆ 1878ರ ಮಾರ್ಚ್ 21ರಿಂದ ಇಂಗ್ಲಿಷ್‍ನಲ್ಲಿ ಪ್ರಕಟವಾಗತೊಡಗಿತು. ಭೋಪಾಲ್‍ನಲ್ಲಿ ಬ್ರಿಟಿಷ್ ರಾಜಕೀಯ ಪ್ರತಿನಿಧಿಯಾಗಿದ್ದ ಸರ್ ಲೀಪೆಲೆ ಗ್ರಿಫಿನ್ನನ ನಿರಂಕುಶ ನಡತೆಯ ಬಗ್ಗೆ ಪತ್ರಿಕೆ ಟೀಕಿಸಿತು. ಆತ ಪತ್ರಿಕೆಯ ಮೇಲೆ ಕ್ರಮ ತೆಗೆದುಕೊಳ್ಳಲು ವೈಸ್‍ರಾಯ್ ಲಾರ್ಡ್ ಡಫರಿನ್ ಅವರಿಗೆ ಮಾಡಿದ ಸಲಹೆ ಮನ್ನಣೆ ಪಡೆಯದೆ ಗ್ರಿಫನ್ ರಾಜೀನಾಮೆಯಿತ್ತು ಲಂಡನ್ನಿಗೆ ತೆರಳಿದ. ಲಾರ್ಡ್ ಲ್ಯಾನ್ಸ್ ಡೌನನ ಕಾಲದಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ವಿದೇಶ ವ್ಯವಹಾರ ರಹಸ್ಯವನ್ನು ಪ್ರಕಟಿಸಿದ್ದರಿಂದ ಅಧಿಕೃತಪತ್ರ ಮತ್ತು ಸಾಮಗ್ರಿಗಳನ್ನು ಪೂರ್ವಸಮ್ಮತಿಯಿಲ್ಲದೆ ಪ್ರಕಟಿಸಬಾರದೆಂಬ ಕಾನೂನಿಗೆ ಪತ್ರಿಕೆ ಕಾರಣವಾಯಿತು. ಪತ್ರಿಕೆಗಳಿಗೆ ಸರ್ಕಾರಿ ಕಚೇರಿಗಳ ಕಾಗದಗಳನ್ನು ನೋಡುವ ಸೌಲಭ್ಯ ಇದರಿಂದ ತಪ್ಪಿಹೋಯಿತು. ಮುಂದೆ 1891ರ ಫೆಬ್ರವರಿ 19ರಿಂದ ಇದು